ಅಮ್ನೆಸ್ಟಿ ಇಂಡಿಯಾ ಕಚೇರಿ ಮೇಲೆ ಸಿಬಿಐ ದಾಳಿ, ಪರಿಶೀಲನೆ
ಬೆಂಗಳೂರು, ನವೆಂಬರ್ 15: ಅಮ್ನೆಸ್ಟಿ ಇಂಟರ್ನ್ಯಾಷನಲ್ ಇಂಡಿಯಾ ಪ್ರೈ ಲಿಮಿಟೆಡ್ ಮತ್ತು ಇಂಡಿಯನ್ಸ್ ಫಾರ್ ಅಮ್ನೆಸ್ಟಿ ಇಂಟರ್ನ್ಯಾಷನಲ್ ಟ್ರಸ್ಟ್ನ ಬೆಂಗಳೂರು ಹಾಗೂ ದೆಹಲಿ ಕಚೇರಿಗಳ ಮೇಲೆ ಶುಕ್ರವಾರ ದಾಳಿ ನಡೆಸಿದ ಸಿಬಿಐ ಅಧಿಕಾರಿಗಳು ಪರಿಶೀಲನೆ ನಡೆಸಿದರು.
ಭಾರತದಲ್ಲಿನ ಎನ್ಜಿಓಗಳಿಗೆ ವಿದೇಶಿ ದೇಣಿಗೆಯ ನೀತಿ ಹಾಗೂ ನಿಯಮಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ. ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್ಸಿಆರ್ಎ) ಉಲ್ಲಂಘಿಸಿದ ಆರೋಪ ಹೊಂದಿರುವ ಎನ್ಜಿಓಗಳ ಪಟ್ಟಿಯನ್ನು ಇತ್ತೀಚೆಗಷ್ಟೇ ಗೃಹ ಸಚಿವಾಲಯ ಸಿಬಿಐಗೆ ನೀಡಿತ್ತು. ಅದರಲ್ಲಿ ಅಮ್ನೆಸ್ಟಿ ಕೂಡ ಇತ್ತು ಎನ್ನಲಾಗಿದೆ.
ಅಮ್ನೆಸ್ಟಿ ವಿರುದ್ಧ ಸಿಬಿಐ ಪ್ರತ್ಯೇಕ ಪ್ರಕರಣ ಕೂಡ ದಾಖಲಿಸಿದೆ ಎಂದು ವರದಿಯಾಗಿದೆ.

'ಸಿಬಿಐ ಇಂದು ಬೆಂಗಳೂರು ಮತ್ತು ದೆಹಲಿಯಲ್ಲಿರುವ ಸಂಸ್ಥೆ ಹಾಗೂ ಟ್ರಸ್ಟ್ನ ಕಚೇರಿಗಳಲ್ಲಿ ಹುಡುಕಾಟ ನಡೆಸಿದೆ. ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಅಮ್ನೆಸ್ಟಿ ಇಂಟರ್ನ್ಯಾಷನಲ್ ಇಂಡಿಯಾ ಧ್ವನಿ ಎತ್ತಿದಾಗಲೆಲ್ಲಾ ಒಂದಲ್ಲ ಒಂದು ರೀತಿಯಲ್ಲಿ ಕಿರುಕುಳ ನೀಡಲಾಗುತ್ತಿದೆ' ಎಂದು ಅಮ್ನೆಸ್ಟಿ ಪ್ರತಿಕ್ರಿಯಿಸಿದೆ.
'ಭಾರತ ಮತ್ತು ಅಂತಾರಾಷ್ಟ್ರೀಯ ಕಾನೂನುಗಳಿಗೆ ಅಮ್ನೆಸ್ಟಿ ಸಂಪೂರ್ಣ ಬದ್ಧವಾಗಿರುತ್ತದೆ. ಭಾರತದಲ್ಲಿಯೇ ಆಗಿರಲಿ ಅಥವಾ ಇನ್ನೆಲ್ಲೇ ಆಗಿರಲಿ ನಮ್ಮ ಕೆಲಸ ಸಾರ್ವತ್ರಿಕ ಮಾನ ಹಕ್ಕುಗಳನ್ನು ಎತ್ತಿ ಹಿಡಿಯುವುದು ಮತ್ತು ಅದಕ್ಕಾಗಿ ಹೋರಾಡುವುದು. ಭಾರತದ ಸಂವಿಧಾನದಲ್ಲಿಯೂ ಈ ಮೌಲ್ಯಗಳನ್ನು ಮುಖ್ಯವಾಗಿ ಹೇಳಲಾಗಿದೆ' ಎಂದು ಹೇಳಿಕೆ ನೀಡಿದೆ.
2016ರಲ್ಲಿ ಬೆಂಗಳೂರು ಪೊಲೀಸರು ಅಮ್ನೆಸ್ಟಿ ಇಂಟರ್ನ್ಯಾಷನಲ್ ಇಂಡಿಯಾ ವಿರುದ್ಧ ಎಬಿವಿಪಿ ನೀಡಿದ್ದ ದೂರಿನ ಅಡಿ ದೇಶದ್ರೋಹದ ಪ್ರಕರಣ ದಾಖಲಿಸಿದ್ದರು.












Click it and Unblock the Notifications