ಬಹುಕೋಟಿ ಐಎಂಎ ವಂಚನೆ ಕೇಸ್: ರೋಷನ್ ಬೇಗ್ ಬಂಧಿಸಿದ ಸಿಬಿಐ
ಬೆಂಗಳೂರು, ನ. 22: ಬಹುಕೋಟಿ ಐಎಂಎ ವಂಚನೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಮನ್ಸೂರ್ ಖಾನ್ ಹೆಸರಿಸಿರುವ ಮಾಜಿ ಸಚಿವ, ಶಿವಾಜಿನಗರದ ಕಾಂಗ್ರೆಸ್ ಶಾಸಕ ರೋಷನ್ ಬೇಗ್ ಅವರನ್ನು ಸಿಬಿಐ ಬಂಧಿಸಿದೆ.
Recommended Video
ಭಾನುವಾರ(ನ.22) ಬೆಳಗ್ಗೆ 11 ಗಂಟೆಗೆ ರೋಷನ್ ಬೇಗ್ ಅವರನ್ನು ವಶಕ್ಕೆ ಪಡೆದು, ತೀವ್ರ ವಿಚಾರಣೆಗೊಳಪಡಿಸಲಾಗಿತ್ತು. ಕೋರಮಂಗಲದಲ್ಲಿರುವ ಸಿಬಿಐ ವಿಶೇಷ ಜಡ್ಜ್ ವಿರುದ್ಧ ರೋಷನ್ ಬೇಗ್ ಅವರನ್ನು ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ರೋಷನ್ ಬೇಗ್ ಅವರನ್ನು ಇರಿಸಲಾಗಿದೆ. ಈ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಅಲಿ ಖಾನ್ ಕೂಡಾ ಇದೇ ಜೈಲಿನಲ್ಲಿದ್ದಾನೆ.
''ರೋಷನ್ ಬೇಗ್ ಅವರು ಈ ಐಎಂಎ ಸಂಸ್ಥೆಯಿಂದ 400 ಕೋಟಿ ರೂ. ಪಡೆದುಕೊಂಡಿದ್ದಾರೆ'' ಎಂದು ಮನ್ಸೂರ್ ಖಾನ್ ಬಂಧನಕ್ಕೂ ಮುನ್ನ ಹೊರ ಹಾಕಿದ್ದ ಸರಣಿ ವಿಡಿಯೋದಲ್ಲಿ ಆರೋಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಕಾಂಗ್ರೆಸ್ಸಿನಿಂದ ಅಮಾನತುಗೊಂಡ ಬಳಿಕ ರೋಷನ್ ಬೇಗ್ ಅವರು ಬಿಜೆಪಿಯತ್ತ ವಾಲಿದ್ದರು. ಆದರೆ, ಬೇಗ್ ಅವರು ಬಿಜೆಪಿ ಸೇರ್ಪಡೆಯಾಗುವುದಕ್ಕೆ ಬಿಜೆಪಿಯಲ್ಲಿ ವಿರೋಧ ವ್ಯಕ್ತವಾಗಿತ್ತು.

ಮನ್ಸೂರ್ ಅಲಿ ಖಾನ್ಗೆ ಜಾಮೀನು
ಬಹುಕೋಟಿ ರೂಪಾಯಿ ಐಎಂಎ ಹಗರಣದ ಪ್ರಮುಖ ಆರೋಪಿ ಮನ್ಸೂರ್ ಅಲಿ ಖಾನ್ಗೆ ಜಾಮೀನು ಸಿಕ್ಕಿದೆ
ಅಕ್ಟೋಬರ್ 28ರಂದು ಕರ್ನಾಟಕ ಹೈಕೋರ್ಟ್ ಮನ್ಸೂರ್ ಅಲಿ ಖಾನ್ಗೆ ಷರತ್ತು ಬದ್ಧ ಜಾಮೀನು ನೀಡಿದೆ.
ಜಾರಿ ನಿರ್ದೇಶನಾಲಯ ದಾಖಲು ಮಾಡಿದ್ದ ಪ್ರಕರಣದಲ್ಲಿ ಮನ್ಸೂರ್ ಅಲಿ ಖಾನ್ಗೆ ಜಾಮೀನು ನೀಡಲಾಗಿದೆ. ಆದರೆ, ಸಿಬಿಐ ದಾಖಲಿಸಿರುವ ಪ್ರಕರಣದಲ್ಲಿ ಜಾಮೀನು ಸಿಗಬೇಕಿದೆ. ಹೀಗಾಗಿ, ಪರಪ್ಪನ ಅಗ್ರಹಾರ ಜೈಲಿನಲ್ಲೇ ಉಳಿಯಬೇಕಾಗಿದೆ.

ಮನ್ಸೂರ್ ಆಡಿಯೋ, ವಿಡಿಯೋ ಸಂದೇಶ
ದಿನಾಂಕ 9/06/2019 ರಂದು ಅಂದಿನ ಪೊಲೀಸ್ ಆಯುಕ್ತರಾದ ಟಿ ಸುನೀಲ್ ಕುಮಾರ್ ಅವರಿಗೆ ಮನ್ಸೂರ್ ಖಾನ್ ಆಡಿಯೋ ರೆಕಾರ್ಡ್ ಕಳಿಸಿದ್ದ. ಆಡಿಯೋದಲ್ಲಿ ಶಿವಾಜಿನಗರದ ಎಂಎಲ್ಎ ರೋಷನ್ ಬೇಗ್ ಅವರಿಗೆ 400 ಕೋಟಿ ರೂಪಾಯಿಗಳಷ್ಟು ಹಣ ನೀಡಿದ್ದು ಹಣ ವಾಪಾಸ್ ನೀಡಲು ಕೇಳಿದಾಗ ಲೋಕಲ್ ರೌಡಿಗಳನ್ನು ಬಿಟ್ಟು ಮನ್ಸೂರ್ ಖಾನ್ ಗೆ ಜೀವ ಬೆದರಿಕೆ ಹಾಕಿದ್ದರು. ನನಗೆ ರಕ್ಷಣೆ ಸಿಗದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದಿದ್ದ
ನಂತರ 22/06/2019 ರಂದು ದುಬೈನಲ್ಲಿದ್ದೇನೆ ಎಂದು ವಿಡಿಯೋ ರೆಕಾರ್ಡ್ ಮಾಡಿದ್ದ. ಆ ವಿಡಿಯೋದಲ್ಲಿ ಆಡಿಯೋದಲ್ಲಿ ನೀಡಿದ್ದ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡು, ಮತ್ತೊಮ್ಮೆ ರೋಷನ್ ಬೇಗ್ ಅವರಿಗೆ 400 ಕೋಟಿ ರೂಪಾಯಿ ನೀಡಿದ್ದೇನೆ ಎಂದಿದ್ದ.

ಈ ಹಿಂದೆ ಕೂಡಾ ವಿಚಾರಣೆ ಎದುರಿಸಿದ್ದರು
'ನಾನು ಶಾಸಕನಲ್ಲದಿದ್ದರೂ ನಾನು ಹಜ್ ಸಮಿತಿ ಅಧ್ಯಕ್ಷನಾಗಿದ್ದೇನೆ. ನಾನು ಪ್ರತಿದಿನ ಯಾತ್ರಾರ್ಥಿಗಳ ಜವಾಬ್ದಾರಿಯನ್ನು ನೋಡಿಕೊಳ್ಳಬೇಕಿದೆ' ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ, ಸರಿಯಾದ ಮಾಹಿತಿಯಿಲ್ಲದ ಕಾರಣ ನಾನು ಪುಣೆಗೆ ತೆರಳುವಾಗ ನನ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು ಎಂದು ರೋಷನ್ ಬೇಗ್ ಈ ಹಿಂದೆ ವಿಚಾರಣೆ ಎದುರಿಸಿದ್ದಾಗ ಪ್ರತಿಕ್ರಿಯಿಸಿದ್ದರು.
ಬೆಂಗಳೂರಿನ ಶಾಸಕರ ಮೂಲಕ ಮಾಜಿ ಸಚಿವ ಎಂಜೆ ಅಕ್ಬರ್, ಮುಕ್ತಾರ್ ಅಬ್ಬಾಸ್ ನಖ್ವಿ ಸಂಪರ್ಕಿಸಿದ್ದ ಬೇಗ್ ಅವರು ಬಿಜೆಪಿ ಸೇರುವುದಕ್ಕೆ ಬೇಗ್ ಯತ್ನಿಸಿದ್ದರು. ಆದರೆ, ಬಹುಕೋಟಿ ಐಎಂಎ ಹಗರಣದಲ್ಲಿ ಬೇಗ್ ಹೆಸರು ಕೇಳಿ ಬಂದಿದ್ದರಿಂದ ಜೊತೆಗೆ ಆರೆಸ್ಸೆಸ್ ವಿರೋಧ ವ್ಯಕ್ತಪಡಿಸಿದ್ದರಿಂದ ಬೇಗ್ ಅಮಾನತುಗೊಂಡ ಶಾಸಕರೇ ಉಳಿದುಕೊಂಡರು.

ಸಿಬಿಐ ತನಿಖೆ ಜಾರಿಯಲ್ಲಿದೆ
ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿದ್ದಾಗ ಐಎಂಎ ಹಗರಣ ಬೆಳಕಿಗೆ ಬಂದಿತ್ತು. ಆಗ ಸರ್ಕಾರ ಹಗರಣದ ತನಿಖೆಗೆ ಎಸ್ಐಟಿ ರಚನೆ ಮಾಡಿತ್ತು.ಮೊದಲಿಗೆ ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ಪ್ರಕರಣ ದಾಖಲಾಯಿತು. ನಂತರ ಬಿಟಿಎಂ ಲೇ ಔಟ್ ಸೇರಿದಂತೆ ವಿವಿಧ ಠಾಣೆಗಳಲ್ಲಿ ವಂಚನೆ ಪ್ರಕರಣದ ದೂರು ದಾಖಲಾಯಿತು.
ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಲಾಯಿತು.
ಐಎಂಎ ಪ್ರಕರಕಣಕ್ಕೆಂದೇ ಮೀಸಲಾದ ವಿಶೇಷ ನ್ಯಾಯಾಲಯ ಸ್ಥಾಪಿಸಿ ನೊಂದಿರುವ ಜನಸಾಮಾನ್ಯರಿಗೆ ಶೀಘ್ರವಾಗಿ ಕಾಲಮಿತಿಯೊಳಗೆ ನ್ಯಾಯ ಸಿಗಲು ಸಹಕಾರ ನೀಡುವಂತೆ ಕಾಂಗ್ರೆಸ್ ಪಕ್ಷ ಮನವಿ ಮಾಡಿಕೊಂಡಿತ್ತು.












Click it and Unblock the Notifications