ಕಾವೇರಿ ವಿವಾದ: ಒಂದು ವಾರದಲ್ಲಿ ಎರಡು ಬಂದ್- ಕರ್ನಾಟಕಕ್ಕೆ ₹4,000 ಕೋಟಿ ನಷ್ಟ, ಅಂಕಿಅಂಶ, ವರದಿ, ವಿವರ
ಬೆಂಗಳೂರು, ಸೆಪ್ಟೆಂಬರ್ 26: ಕಾವೇರಿ ಜಲವಿವಾದಕ್ಕೆ ಸಂಬಂಧಿಸಿದಂತೆ ಇದೇ ವಾರ ಎರಡು ದಿನ ಬಂದ್ಗೆ ಕರೆ ನೀಡಲಾಗಿದೆ. ಎರಡೆರಡು ಬಂದ್ಗಳಿಗೆ ಹಲವು ಉದ್ಯಮಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಹಾಗೂ ಶುಕ್ರವಾರದಂದು ಬಂದ್ಗೆ ಕರೆ ನೀಡಲಾಗಿದೆ. ಇದು ಸಾರ್ವಜನಿಕರಿಗೆ ಅನಾನುಕೂಲತೆ ಮತ್ತು ರಾಜ್ಯದ ಬೊಕ್ಕಸಕ್ಕೆ ಭಾರಿ ನಷ್ಟ ಉಂಟು ಮಾಡಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಎರಡು ದಿನಗಳ ಬಂದ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ 4,000 ಕೋಟಿ ರೂಪಾಯಿ ನಷ್ಟವಾಗಲಿದೆ ಎಂದು ಅಂದಾಜಿಸಲಾಗಿದೆ. ಇದು ಆರ್ಥಿಕತೆಯನ್ನು ದುರ್ಬಲಗೊಳಿಸಬಹುದು ಎಂಬ ಅಭಿಪ್ರಾಯವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.

ಕೋವಿಡ್ ಸಾಂಕ್ರಾಮಿಕ ರೋಗದಿಂದ ಚೇತರಿಸಿಕೊಂಡಿರುವ ಉದ್ಯಮಗಳ ಮೇಲೆ ಬಂದ್ ಪರಿಣಾಮ ಬೀರಲಿದೆ ಎಂದು ತಿಳಿದುಬಂದಿದೆ.
ಬಂದ್ಗಳು ಜನರ ಜೀವನೋಪಾಯಕ್ಕೆ ಧಕ್ಕೆ ತರುತ್ತವೆ. ಯಾವುದೇ ಸಮಸ್ಯೆಗೆ ಬಂದ್ ಪರಿಹಾರವಲ್ಲ. ಇದು ಭಾವನಾತ್ಮಕ ಅಥವಾ ರಾಜಕೀಯ ವಿಚಾರವಾಗಬಾರದು ಎಂದು ಕರ್ನಾಟಕ ಉದ್ಯೋಗದಾತರ ಸಂಘದ (ಕೆಇಎ) ಅಧ್ಯಕ್ಷ ಬಿಸಿ ಪ್ರಭಾಕರ್ 'ಟೈಮ್ಸ್ ಆಫ್ ಇಂಡಿಯಾ'ಗೆ ಹೇಳಿದ್ದಾರೆ.
'ಕಾವೇರಿ ಸಮಸ್ಯೆಯ ಹಿಂದಿನ ಕಾರಣ ಮತ್ತು ಭಾವನೆಯನ್ನು ನಾವು ನಿಜವಾಗಿಯೂ ಗೌರವಿಸುತ್ತೇವೆ. ಬಂದ್ಗಳು ಉತ್ತರವಲ್ಲ. ಪ್ರತಿಭಟನೆಗಳು ನಡೆಯಲಿ, ಆದರೆ ಬಂದ್ ಬೇಡ' ಎಂದು ಅವರು ತಿಳಿಸಿದ್ದಾರೆ.

ಬಂದ್ಗಳು ಬೆಂಗಳೂರು ಮತ್ತು ಕರ್ನಾಟಕ ಮೇಲಿನ ವಿಶ್ವಾಸಾರ್ಹತೆಗೆ ಧಕ್ಕೆ ತರುತ್ತವೆ. ಏಕೆಂದರೆ ಇಲ್ಲಿ ಅಂತರರಾಷ್ಟ್ರೀಯ ಮಟ್ಟದ ವ್ಯವಹಾರ ಹಾಗೂ ಉದ್ಯಮಗಳಿವೆ. ಇದಕ್ಕೆ ನಾವು ಕೆಲವು ಬದ್ಧತೆಗಳನ್ನು ಪಾಲಿಸಬೇಕಿದೆ ಎಂದು ಪ್ರಭಾಕರ್ ತಿಳಿಸಿದ್ದಾರೆ.
ಇಂದಿನ ಬಂದ್ಗೆ ಕೆಇಎ ಬೆಂಬಲ ನೀಡಿಲ್ಲ. ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಉದ್ಯಮಗಳನ್ನು ಮುಚ್ಚುವ ಬಗ್ಗೆ ನಿರ್ಧರಿಸಲು ತನ್ನ 720 ಸದಸ್ಯ ಕಂಪನಿಗಳಿಗೆ ನಿರ್ದೇಶನ ನೀಡಿದೆ.
ಒಂದು ದಿನದ ಬಂದ್ ನಷ್ಟದಿಂದ ಚೇತರಿಸಿಕೊಳ್ಳಲು ವ್ಯಾಪಾರ ಘಟಕಗಳಿಗೆ ಕನಿಷ್ಠ ಒಂದು ವಾರ ಬೇಕಾಗುತ್ತದೆ ಎಂದು ಫೆಡರೇಶನ್ ಆಫ್ ಕರ್ನಾಟಕ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಎಫ್ಕೆಸಿಸಿಐ) ಹೇಳಿದೆ.

'ಒಂದು ದಿನ ಬಂದ್ನಿಂದ ರಾಜ್ಯದ ಬೊಕ್ಕಸಕ್ಕೆ 100 ಕೋಟಿ ರೂಪಾಯಿ ನಷ್ಟವಾಗಲಿದೆ. ಆರ್ಥಿಕ ಚಟುವಟಿಕೆಯ ಹೊಂದಿರುವ ಎಲ್ಲಾ ಕ್ಷೇತ್ರಗಳಲ್ಲಿ ಬಂದ್ನಿಂದ ನಷ್ಟವಾಗಲಿದೆ' ಎಂದು ಎಫ್ಕೆಸಿಸಿಐ ಅಧ್ಯಕ್ಷ ರಮೇಶ್ ಚಂದ್ರ ಲಹೋಟಿ 'ಟೈಮ್ಸ್ ಆಫ್ ಇಂಡಿಯಾ'ಗೆ ಹೇಳಿದ್ದಾರೆ.
ಬೆಂಗಳೂರಿನ ಸುಮಾರು ಶೇ 80 ಕೈಗಾರಿಕೆಗಳು ಮಂಗಳವಾರ (ಸೆಪ್ಟೆಂಬರ್ 26) ಒಂದು ದಿನದ ಮಟ್ಟಿಗೆ ಮುಚ್ಚಲು ಒಪ್ಪಿಕೊಂಡಿವೆ ಎಂದು ತಿಳಿದುಬಂದಿದೆ.
ಸುಮಾರು 10 ಲಕ್ಷ ಜನರಿಗೆ ಉದ್ಯೋಗ ನೀಡುತ್ತಿರುವ ಹೊಟೇಲ್ ಉದ್ಯಮಿಗಳ ಸಂಘವು ದಿನಕ್ಕೆ 100 ಕೋಟಿ ರೂಪಾಯಿಗಳ ಅಬಕಾರಿ ಸುಂಕದ ನಷ್ಟವನ್ನು ಅಂದಾಜಿಸಿದೆ.












Click it and Unblock the Notifications