ಅಲೆಯ ಮೇಲೆ ನಗುವ ಹುಟ್ಟು! ಕಾರ್ಟೂನು ಹಬ್ಬ!
ಬೆಂಗಳೂರು-ನವೆಂಬರ್ 09:ಸೃಜನಶೀಲ ಕಲಾಪ್ರಕಾರಗಳಲ್ಲಿ ವ್ಯಂಗ್ಯಚಿತ್ರವೂ ಕೂಡ ಒಂದು. ವ್ಯಂಗ್ಯಚಿತ್ರವೆಂದರೆ ಒಬ್ಬರ ಕಾರ್ಯವೈಖರಿ ಮತ್ತಿತರೆ ಸೂಕ್ಷ್ಮ ವಿಚಾರಗಳನ್ನು ಅತ್ಯಂತ ಎಚ್ಚರಿಕೆಯಿಂದ ಗಮನಿಸಿ ಅನಿಸಿಕೆಗಳನ್ನು ಹಾಸ್ಯರೂಪದಲ್ಲಿ ಯಾರ ಮನಸ್ಸಿಗೂ ನೋವಾಗದಂತೆ ಚಕ್ಕನೆ ಪ್ರತಿಕ್ರಯಿಸುವ ರೀತಿ.
ನಮ್ಮ ಸುತ್ತಮುತ್ತಲಿನ ಆಗುಹೋಗುಗಳ ಬಗೆಗೆ ಹಾಸ್ಯ, ವ್ಯಂಗ್ಯ, ವಿಡಂಬನೆ ಹಾಗೂ ಚಿಕಿತ್ಸಕ ದೃಷ್ಟಿಯಿಂದ ಪ್ರತಿಕ್ರಿಯಿಸುವ ವ್ಯಂಗ್ಯಚಿತ್ರ ಸಮಕಾಲೀನ ಜಗತ್ತಿನಲ್ಲಿ ಮಾಧ್ಯಮದ ಮುಖ್ಯವಾಹಿನಿಯಲ್ಲಿ ಗುರುತರ ಸ್ಥಾನ ಪಡೆದಿದೆ. ಸಮಾಜದ ಸಂವಹನ ಶಕ್ತಿಯನ್ನು ಅತ್ಯಂತ ಪರಿಣಾಮಕಾರಿಯಾಗಿಸುವ ಶಕ್ತಿ ಕೂಡ ವ್ಯಂಗ್ಯಚಿತ್ರ ಮಾಧ್ಯಮಕ್ಕಿದೆ.

ಹೊಸ ಅಲೆಯ ಸಾಮಾಜಿಕ ಜಾಲತಾಣದಲ್ಲೂ ವ್ಯಂಗ್ಯಚಿತ್ರ ಮುನ್ನೆಲೆಗೆ ಬರುತ್ತಿರುವುದು ಅದರ ಪ್ರಸ್ತುತತೆಗೆ ಹಿಡಿದ ಕೈಗನ್ನಡಿ. ಕಾರ್ಟೂನು ಕುಂದಾಪುರ ಸಂಸ್ಥೆಯು ಸಹಯೋಗದಲ್ಲಿ ಪ್ರಸಿದ್ಧ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಆಯೋಜಿಸಿರುವ "ಅಲೆಯ ಮೇಲೆ ನಗೆಯ ಹುಟ್ಟು" ಎನ್ನುವ ಶೀರ್ಷಿಕೆಯೊಂದಿಗೆ ನವೆಂಬರ್ 16ರಿಂದ 18ರವರೆಗೆ ಕುಂದಾಪುರದ ಕಲಾಮಂದಿರದಲ್ಲಿ ಕಾರ್ಟೂನು ಹಬ್ಬವನ್ನು ಆಯೋಜಿಸಿದೆ.
ಕಾರ್ಟೂನು ಹಬ್ಬದಲ್ಲಿ ಏನೇನಿದೆ?
ಪತ್ರಕರ್ತೆ ಡಾ. ಸಂಧ್ಯಾ ಎಸ್.ಪೈ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಉದ್ಯೋನ್ಮುಖ ವ್ಯಂಗ್ಯಚಿತ್ರಕಾರರಿಗೆ ಕಾರ್ಟೂನು ಮೊಗ್ಗು ಎನ್ನುವ ಸ್ಪರ್ಧೆ, ಪ್ರಸಿದ್ಧ ವ್ಯಂಗ್ಯಚಿತ್ರಗಾರ್ತಿ ಮಾಯಾ ಕಾಮತ್ ಸ್ಮರಣಾರ್ಥ ಮಾಯಾ ಕಾಮತ್ ಕಾರ್ಟೂನು ಸ್ಪರ್ಧೆ ಹಾಗೂ ಮಕ್ಕಳಿಗಾಗಿ ಸ್ಕೂಲ್ ಟೂನ್ಸ್ ಎನ್ನುವ ಶೀರ್ಷಿಕೆಯಲ್ಲಿ ವ್ಯಂಗ್ಯಚಿತ್ರ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಎರಡನೆಯ ದಿನ ಚಿಕ್ಕಮಗಳೂರು ಎಸ್.ಪಿ. ಕೆ. ಅಣ್ಣಾಮಲೈ, ಶಿರಸಿ ಉಪವಿಭಾಗಾಧಿಕಾರಿ ರಾಜು ಮೊಗವೀರ ಅವರು ಸೈಬರ್ ಕ್ರೈಮ್ ಕುರಿತು ಮಾಹಿತಿ ನೀಡಲಿದ್ದಾರೆ.ಕುಂದಾಪುರದ ಡಾ.ಬಿ.ಬಿ. ಹೆಗಡೆ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಂದ ಸಮಾಜದ ಸೈಬರ್ ಸ್ವಾಸ್ತ್ಯದ ಕಳಕಳಿಯೊಂದಿಗೆ "ಸೈಬರ್ ಖಬರ್" ಮಾಹಿತಿ ವ್ಯಂಗ್ಯಚಿತ್ರ ಪ್ರದರ್ಶನ ಕೂಡ ನಡೆಯಲಿದೆ. ವೈರಲ್ ಕಾರ್ಟೂನು ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ ಚಿತ್ರಗಳ ಪ್ರದರ್ಶನ ಹಾಗೂ ಖ್ಯಾತ ವ್ಯಂಗ್ಯಚಿತ್ರಕಾರರಿಂದ ಲೈವ್ ಕಾರ್ಟೂನ್ ರಚನೆ ನಡೆಯಲಿದೆ.
ಕುಂದಾಪುರದ ಸೇಂಟ್ ಮೇರಿಸ್ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಹಯೋಗದೊಂದಿಗೆ ಕ್ಯಾರಿಕೇಚರ್ ಚಿತ್ರಿಸುವ ಮೂಲಕ ಸೇಂಟ್ ಮೇರಿಸ್ ಕನ್ನಡ ಮಾಧ್ಯಮ ಶಾಲೆಗೆ ನಿಧಿ ಸಂಗ್ರಹಿಸುವ ವಿಶಿಷ್ಟ ಕಾರ್ಯಕ್ರಮ ಜರುಗಲಿದೆ.
ಮೂರನೆಯ ದಿನ ಅಂತಿಮ ದಿನವಾಗಿದ್ದು ಕುಂದಾಪುರದ ಸಮುದಾಯ ಸಂಸ್ಥೆಯ ಸಹಯೋಗದೊಂದಿಗೆ ಮಾಸ್ಟರ್ ವ್ಯಂಗ್ಯಚಿತ್ರಕಾರರಾದ ಗುಜ್ಜಾರಪ್ಪ, ರಾಮಧ್ಯಾನಿ, ಜಯರಾಂ ಉಡುಪ ಅವರೊಡನೆ ಸಂವಾದದ ಜತೆಗೆ ಬಹುಮಾನವಿತರಣೆ ಕಾರ್ಯಕ್ರಮವಿರಲಿದೆ.












Click it and Unblock the Notifications