'ಸರ್ಕಾರದ ಪತನಕ್ಕೆ ಸಂಪುಟ ವಿಸ್ತರಣೆಯೇ ಅಡಿಗಲ್ಲು' : ಡಿವಿಎಸ್
ಬೆಂಗಳೂರು, ಜೂನ್ 10: 'ರಾಜ್ಯ ಸರ್ಕಾರವು ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿಲ್ಲ, ಕೇಂದ್ರದ ಅನುದಾನ ಬಳಸಿಕೊಳ್ಳುತ್ತಿಲ್ಲ, ನಿಧಾನ ಧೋರಣೆ ಅನುಸರಿಸುತ್ತಿದೆ' ಎಂದು ಕರ್ನಾಟಕ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಅವರು ಮತ್ತೆ ಎಚ್ ಡಿ ಕುಮಾರಸ್ವಾಮಿ ಅವರ ಸರ್ಕಾರದ ಗೇಲಿ ಮಾಡಿದ್ದಾರೆ.
ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಕಾಂಗ್ರೆಸ್ ಸರ್ಕಾರದ ಬಿಕ್ಕಟ್ಟು ಶಮನಕ್ಕೆ ಸಚಿವ ಸಂಪುಟ ವಿಸ್ತರಣೆ ನಾಂದಿ ಹಾಡಲಿದೆ ಎಂಬ ಮಾತಿಗೆ ಟಾಂಗ್ ಕೊಟ್ಟಿರುವ ಡಿವಿಎಸ್, 'ಸರ್ಕಾರದ ಪತನಕ್ಕೆ ಸಂಪುಟ ವಿಸ್ತರಣೆಯೇ ಅಡಿಗಲ್ಲಾಗಲಿದೆ' ಎಂದಿದ್ದಾರೆ.

ಸರ್ಕಾರವನ್ನು ಉಳಿಸಿಕೊಳ್ಳಲು ಉಭಯ ಪಕ್ಷಗಳು ಶಕ್ತಿಮೀರಿ ಶ್ರಮಿಸುತ್ತಿರುವುದು ಸುಳ್ಳಲ್ಲ, ಜೂನ್ 12ರಂದು ರಾಜ್ಯಪಾಲ ವಜುಭಾಯಿವಾಲ ಅವರ ಭೇಟಿಗೆ ಸಮಯ ನಿಗದಿಪಡಿಸಿಕೊಂಡಿರುವ ಕುಮಾರಸ್ವಾಮಿ ಅವರು ತಮ್ಮ ಸರ್ಕಾರದ ಪತನಕ್ಕೆ ಮುಹೂರ್ತ ನಿಗದಿ ಮಾಡಿದ್ದಂತಾಗಿದೆ ಎಂದರು.
ಎಚ್ಡಿಕೆ ಸಚಿವ ಸಂಪುಟದಲ್ಲಿ ಬಾಕಿ ಉಳಿದಿರುವ ಮೂರು ಸ್ಥಾನಗಳ ಪೈಕಿ ಪಕ್ಷೇತರರಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ. ಈ ಪೈಕಿ ಜೆಡಿಎಸ್ 2 ಹಾಗೂ ಕಾಂಗ್ರೆಸ್ಸಿನಿಂದ ಒಬ್ಬರಿಗೆ ಸ್ಥಾನ ಸಿಗಲಿದೆ.
ಪಕ್ಷೇತರ ಶಾಸಕ ನಾಗೇಶ್, ಕೆಪಿಜೆಪಿ ಶಾಸಕ ಆರ್ ಶಂಕರ್ ಅವರಿಗೆ ಸಚಿವರಾಗುವ ಯೋಗ ಕೂಡಿ ಬಂದಿದೆ. ಮಿಕ್ಕಂತೆ ಬಂಡಾಯ ಎದ್ದಿರುವ ಹಿರಿಯ ಕಾಂಗೆಸ್ಸಿಗ ರಾಮಲಿಂಗಾ ರೆಡ್ಡಿ, ಜೆಡಿಎಸ್ ಎಂಎಲ್ಸಿ ಬಿಎಂ ಫಾರೂಕ್ ಅವರಿಗೂ ಸ್ಥಾನ ಕಲ್ಪಿಸುವ ಒತ್ತಡ ಉಂಟಾಗಿದೆ.
2019ರ ಲೋಕಸಭೆ ಚುನಾವಣೆಯಲ್ಲಿ 28 ಸ್ಥಾನಗಳ ಪೈಕಿ ಬಿಜೆಪಿ 25, ಕಾಂಗ್ರೆಸ್ 1, ಜೆಡಿಎಸ್ 1 ಹಾಗೂ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಪೂರ್ವ ನಿರ್ಧಾರದಂತೆ 34 ಸ್ಥಾನಗಳ ಪೈಕಿ ಕಾಂಗ್ರೆಸ್ 22 ಹಾಗೂ ಜೆಡಿಎಸ್ 12 ಸಚಿವ ಸ್ಥಾನವನ್ನು ಹಂಚಿಕೊಂಡಿವೆ.












Click it and Unblock the Notifications