ಸಿಎಂ ಆಗುವ ಮೊದಲೇ ಕುಮಾರಸ್ವಾಮಿ ಆದೇಶಗಳಿಗೆ ತಡೆ ನೀಡಿದ ಯಡಿಯೂರಪ್ಪ
ಬೆಂಗಳೂರು, ಜುಲೈ 26: ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡುವ ಮುನ್ನವೇ ಬಿಎಸ್ ಯಡಿಯೂರಪ್ಪ ಅವರು ಸರ್ಕಾರದ ಆಡಳಿತಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಮಹತ್ವದ ಸೂಚನೆ ನೀಡಿದ್ದಾರೆ.
ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರವು ಈ ತಿಂಗಳ ಆರಂಭದಿಂದ ಅನುಮೋದನೆ ನೀಡಿರುವ ಕಾಮಗಾರಿಗಳು, ವರ್ಗಾವಣೆ ಆದೇಶಗಳಿಗೆ ತಡೆ ನೀಡುವಂತೆ ಯಡಿಯೂರಪ್ಪ ನಿರ್ದೇಶಿಸಿದ್ದಾರೆ.
ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರಿಗೆ ಪತ್ರ ಬರೆದಿರುವ ಯಡಿಯೂರಪ್ಪ ಅವರು, ಜುಲೈ ತಿಂಗಳಿನಲ್ಲಿ ಸರ್ಕಾರ ನೀಡಿರುವ ವಿವಿಧ ಮಹತ್ವದ ಆದೇಶಗಳಿಗೆ ಕೂಡಲೇ ತಡೆ ನೀಡುವಂತೆ ಸೂಚಿಸಿದ್ದಾರೆ.
ಯಡಿಯೂರಪ್ಪ ಅವರ ಸೂಚನೆಯನ್ನು ಈಗಾಗಲೇ ಜಾರಿಗೆ ತಂದಿರುವ ಮುಖ್ಯಕಾರ್ಯದರ್ಶಿ ಟಿಎಂ ವಿಜಯಭಾಸ್ಕರ್ ಅವರು ಎಲ್ಲ ಇಲಾಖೆಗಳಿಗೂ ಈ ಸಂಬಂಧ ಸೂಚನೆ ಹೊರಡಿಸಿದ್ದಾರೆ.

ಹೊಸ ಕಾಮಗಾರಿಗಳನ್ನು ಜಾರಿಗೊಳಿಸುವಂತಿಲ್ಲ
'ಮಾನ್ಯ ನಿಯೋಜಿತ ಮುಖ್ಯಮಂತ್ರಿಗಳು ಜುಲೈ 2019ರ ತಿಂಗಳಿನಲ್ಲಿ ಅನುಮೋದನೆಗೊಂಡಿರುವ ಎಲ್ಲ ಹೊಸ ಕಾಮಗಾರಿಗಳಿಗೆ ಸಂಬಂಧಿಸಿದ ಆದೇಶಗಳನ್ನು ತಕ್ಷಣವೇ ಮುಂದಿನ ಪರಿಶೀಲನೆ ಆಗುವವರೆಗೆ ತಡೆ ಹಿಡಿಯುವಂತೆ ಸರ್ಕಾರದ ಎಲ್ಲ ಇಲಾಖೆಗಳ ಅಪರ ಕಾರ್ಯದರ್ಶಿ/ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಲು ಸೂಚನೆ ನೀಡಿರುತ್ತಾರೆ' ಎಂದು ಪತ್ರ ಬರೆದಿದ್ದಾರೆ.

ವರ್ಗಾವಣೆ ಆದೇಶ ಜಾರಿಗೆ ತಡೆ
'ಮಾನ್ಯ ನಿಯೋಜಿತ ಮುಖ್ಯಮಂತ್ರಿಗಳು, ಜುಲೈ 2019ರ ಮಾಹೆಯಲ್ಲಿ ವರ್ಗಾವಣೆಗೆ ಸಂಬಂಧಿಸಿದ ಪ್ರಸ್ತಾವಗಳ ಮೇಲೆ ಅನುಮೋದನೆಗೊಂಡು, ಜಾರಿಯಾಗದೇ ಇರುವ ಆದೇಶಗಳನ್ನು ಮುಂದಿನ ಆದೇಶದವರೆಗೆ ಜಾರಿ ಮಾಡದಂತೆ ಹಾಗೂ ಈಗಾಗಲೇ ಹೊರಡಿಸಿರುವ, ಆದರೆ ಚಾಲನೆಗೊಳ್ಳದಿರುವ ವರ್ಗಾವಣೆ ಸಂಬಂಧಿತ ಪ್ರಸ್ತಾವಗಳ ಮೇಲಿನ ಆದೇಶಗಳನ್ನು ಮುಂದಿನ ಆದೇಶದವರೆಗೆ ಚಾಲನೆಗೊಳಿಸದಂತೆ ಸೂಚಿಸಿದ್ದಾರೆ' ಎಂದು ಅವರು ಎಲ್ಲ ಇಲಾಖೆಗಳಿಗೆ ಪತ್ರಬರೆದಿದ್ದಾರೆ.

2 ಸಾವಿರಕ್ಕೂ ಹೆಚ್ಚು ವರ್ಗಾವಣೆ, ಕಾಮಗಾರಿ
ಜುಲೈ ತಿಂಗಳಿನಲ್ಲಿ ಎರಡು ಸಾವಿರಕ್ಕೂ ಹೆಚ್ಚು ವರ್ಗಾವಣೆಗಳು, ಹೊಸ ಕಾಮಗಾರಿಗಳು, ಬಡ್ತಿ ಮುಂತಾದವುಗಳಿಗೆ ಕುಮಾರಸ್ವಾಮಿ ಅವರ ಸರ್ಕಾರ ಅನುಮೋದನೆ ನಡೆದಿತ್ತು. ಮುಖ್ಯವಾಗಿ ಲೋಕೋಪಯೋಗಿ ಸಚಿವರಾಗಿದ್ದ ಎಚ್ ಡಿ ರೇವಣ್ಣ ಅವರ ಇಲಾಖೆಯಲ್ಲಿ ಹೆಚ್ಚಿನ ವರ್ಗಾವಣೆ ಮತ್ತು ಬಡ್ತಿಗಳನ್ನು ತರಾತುರಿಯಲ್ಲಿ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈಗ ಅವೆಲ್ಲದಕ್ಕೂ ತಡೆ ಬಿದ್ದಿದೆ ಎನ್ನಲಾಗಿದೆ.

ಯೋಜನೆಗಳ ಕಥೆ ಏನು?
ಯಡಿಯೂರಪ್ಪ ಅವರು ಪ್ರಮಾಣವಚನ ಸ್ವೀಕರಿಸುವ ಮುನ್ನವೇ ಹಿಂದಿನ ಸರ್ಕಾರದ ಅನೇಕ ಆದೇಶಗಳನ್ನು ತಡೆಹಿಡಿದಿದ್ದಾರೆ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಅವರು ಇವುಗಳ ಜಾರಿ ಅಥವಾ ರದ್ದು ಕುರಿತು ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಸಮ್ಮಿಶ್ರ ಸರ್ಕಾರವು ಸಿದ್ದರಾಮಯ್ಯ ಅವರ ಸರ್ಕಾರದ ಯೋಜನೆಗಳನ್ನು ಸ್ಥಗಿತಗೊಳಿಸದೆ ಮುಂದುವರಿಸಿತ್ತು. ಯಡಿಯೂರಪ್ಪ ಅವರ ಸರ್ಕಾರ ಅವುಗಳನ್ನು ಮುಂದುವರಿಸಲಿದೆಯೇ ಇಲ್ಲವೇ ಎಂಬ ಕುತೂಹಲ ಉಂಟಾಗಿದೆ. ಇಂದಿರಾ ಕ್ಯಾಂಟೀನ್, ಅನ್ನಭಾಗ್ಯ, ಶಾದಿ ಭಾಗ್ಯ ಸೇರಿದಂತೆ ಅನೇಕ ಯೋಜನೆಗಳ ವಿರುದ್ಧ ಬಿಜೆಪಿ ನಿರಂತರ ಟೀಕೆಗಳನ್ನು ವ್ಯಕ್ತಪಡಿಸಿತ್ತು. ಇವುಗಳಿಗೂ ಬಿಎಸ್ವೈ ಅಂತ್ಯ ಹಾಡಲಿದ್ದಾರೆಯೇ ಇಲ್ಲವೇ ಎಂಬುದನ್ನು ಕಾದುನೋಡಬೇಕು.












Click it and Unblock the Notifications