ಕಪ್ಪು ಹಣ ವಾಪಸ್ ತರೋದು ಸುಲಭ ಅಲ್ಲ
ಬೆಂಗಳೂರು, ನ. 28: ವಿದೇಶಗಳಲ್ಲಿರುವ ಕಪ್ಪು ಹಣ ಮರಳಿ ತರುವುದು ಸುಲಭವಲ್ಲ. ಈ ಕಾರ್ಯದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನೇಕ ಕಾನೂನು ತೊಡಕುಗಳು ಎದುರಾಗುತ್ತವೆ. ಅವುಗಳನ್ನೆಲ್ಲ ನಿವಾರಿಸಲು ಸಾಕಷ್ಟು ಸಮಯ ಹಿಡಿಯುತ್ತದೆ ಎಂದು ಜಾತ್ಯತೀತ ಜನತಾದಳದ ವರಿಷ್ಠ ಎಚ್.ಡಿ. ದೇವೇಗೌಡರು ತಿಳಿಸಿದರು. [ಕಪ್ಪು ಹಣ: ಈಗಿನ ಪಟ್ಟಿಯಲ್ಲಿ ಶೇ. 1ರಷ್ಟೂ ಹೆಸರಿಲ್ಲ]
ಪಕ್ಷದ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರ ಜೊತೆ ಅವರು ಮಾತನಾಡಿದರು. ಚುನಾವಣೆ ಪ್ರಚಾರದಲ್ಲಿ ನರೇಂದ್ರ ಮೋದಿಯವರು ನೂರು ದಿನಗಳಲ್ಲಿ ಕಪ್ಪು ಹಣ ವಾಪಸ್ ತರುವುದಾಗಿ ಘೋಷಿಸಿದ್ದರು. ಬಡತನ, ನಿರುದ್ಯೋಗ ತೊಲಗಿಸಲು ಕಪ್ಪುಹಣ ಬಳಸುವುದಾಗಿ ತಿಳಿಸಿದ್ದರು. ಆದರೆ, ಅದು ಹೇಳಿದಷ್ಟು ಸುಲಭವಲ್ಲ. ಬಿಜೆಪಿ ಸರ್ಕಾರ ಬಂದು ಆರು ತಿಂಗಳಾಗಿದ್ದರೂ ಭರವಸೆ ಈಡೇರಿಲ್ಲ ಎಂದರು. [ಕಪ್ಪು ಹಣ ಹೊಂದಿದ ಉದ್ಯಮಿಗಳ ವಿವರ]
ಆಸ್ಟ್ರೇಲಿಯಾದಲ್ಲಿ ನಡೆದ ಜಿ 20 ರಾಷ್ಟ್ರಗಳ ಶೃಂಗ ಸಭೆಯಲ್ಲಿ ಕೂಡ ಎಲ್ಲ ರಾಷ್ಟ್ರಗಳು ವಿದೇಶಗಳಲ್ಲಿರುವ ಕಪ್ಪು ಹಣ ವಾಪಸ್ ತರುವ ಕುರಿತು ಒಮ್ಮತ ವ್ಯಕ್ತಪಡಿಸಿವೆ. ಇಂದಿನ ವಿತ್ತ ಸಚಿವ ಅರುಣ ಜೈಟ್ಲಿ, ಕಾಂಗ್ರೆಸ್ ಸರ್ಕಾರದಲ್ಲಿ ವಿತ್ತಸಚಿವರಾಗಿದ್ದ ಪ್ರಣಬ್ ಮುಖರ್ಜಿ ಕೂಡ ಹಣ ವಾಪಸ್ ತರುವುದಾಗಿ ತಿಳಿಸಿದ್ದರು ಎಂದು ದೇವೇಗೌಡರು ನೆನಪಿಸಿಕೊಂಡರು. [ಕಪ್ಪು ಹಣ ವಾಪಸಾತಿಗೆ ಎಲ್ಲರ ಸಹಕಾರ ಬೇಕು]
ಅನೇಕ ದೇಶಗಳಲ್ಲಿ ಕಪ್ಪು ಹಣ: ಸ್ವಿಟ್ಜರ್ಲೆಂಡ್, ಇಂಡೋನೇಷಿಯಾ, ಸಿಂಗಪೂರ, ಮಲೇಷಿಯಾ ಮತ್ತಿತರ ದೇಶಗಳಲ್ಲೂ ಭಾರತೀಯರ ಭಾರೀ ಪ್ರಮಾಣದ ಹಣ ಇದೆ. ಅನೇಕ ರಾಜಕಾರಣಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು ವಿದೇಶಗಳಲ್ಲಿ ಭಾರೀ ಮೊತ್ತದ ಹಣ ಇಟ್ಟಿದ್ದಾರೆ. ಅವರಿಗೆಲ್ಲ ಹಿಂದಿನ ಸರ್ಕಾರಗಳು ರಾಜಕೀಯ ರಕ್ಷಣೆ ನೀಡಿದ್ದಾರೆ ಎಂದರು. [ಖಾತೆದಾರರ ಹೆಸರು ಬಹಿರಂಗ]
ಡಿಸೆಂಬರ್ನಲ್ಲಿ ಪದಾಧಿಕಾರಿಗಳ ಪಟ್ಟಿ: ಪಕ್ಷದ ಪದಾಧಿಕಾರಿಗಳ ಪಟ್ಟಿಯನ್ನು ಡಿಸೆಂಬರ್ ಎರಡನೇ ವಾರದಲ್ಲಿ ಪ್ರಕಟಿಸಲಾಗುವುದು. ಎಲ್ಲ ಸಮುದಾಯದವರಿಗೂ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸ್ವಲ್ಪ ಕಾಲಾವಕಾಶ ಅಗತ್ಯ ಎಂದು ಹೇಳಿದರು.