Bommasandra-Hosur Metro: ಹೊಸೂರು-ಬೊಮ್ಮಸಂದ್ರ ಮೆಟ್ರೋ, ನಿಲ್ದಾಣ ಮತ್ತು ಮಾರ್ಗ ವಿವರ
ಬೆಂಗಳೂರು, ಆಗಸ್ಟ್ 28: ದಕ್ಷಿಣ ಭಾರತದ ಮೊಟ್ಟ ಮೊದಲ ಅಂತರರಾಜ್ಯ ಮೆಟ್ರೋ ಯೋಜನೆ ಕುರಿತು ಚರ್ಚೆಗಳು ನಡೆಯುತ್ತಿವೆ. ತಮಿಳುನಾಡು ಮತ್ತು ಕರ್ನಾಟಕ ಸಂಪರ್ಕಿಸುವ ಹೊಸೂರು-ಬೊಮ್ಮಸಂದ್ರ ಮೆಟ್ರೋ ರೈಲು ಯೋಜನೆ ಕುರಿತು ಮತ್ತಷ್ಟು ಮಾಹಿತಿ ಲಭ್ಯವಾಗಿದೆ. ಮಂಗಳವಾರ ಚೆನ್ನೈ ಮೆಟ್ರೋ ರೈಲು ನಿಗಮ (ಸಿಎಂಆರ್ಎಲ್) ಅಧಿಕಾರಿಗಳು ಬೆಂಗಳೂರು ನಗರಕ್ಕೆ ಭೇಟಿ ನೀಡಿದ್ದರು. ಈ ಯೋಜನೆ ಇನ್ನೂ ಪ್ರಸ್ತಾವನೆಯ ಹಂತದಲ್ಲಿದೆ.
ಒಟ್ಟು 23 ಕಿ. ಮೀ. ಗಳ ಹೊಸೂರು-ಬೊಮ್ಮಸಂದ್ರ ನಡುವಿನ ಮೆಟ್ರೋ ರೈಲು ಯೋಜನೆಯ ಕಾರ್ಯಸಾಧ್ಯತಾ ವರದಿ ಅಂತಿಮ ಹಂತದಲ್ಲಿದೆ. ಯೋಜನೆ ಒಟ್ಟು 12 ನಿಲ್ದಾಣಗಳನ್ನು ಒಳಗೊಂಡಿದೆ. ಮೊದಲು ಯೋಜನೆಯನ್ನು 20 ಕಿ. ಮೀ. ಎಂದು ಅಂದಾಜಿಸಲಾಗಿತ್ತು. ಬಳಿಕ ತಮಿಳುನಾಡಿನಲ್ಲಿ ವಿಸ್ತರಣೆ ಮಾಡಲಾಗುತ್ತಿದೆ.

ಈ ಮೆಟ್ರೋ 23 ಕಿ. ಮೀ. ಮಾರ್ಗದಲ್ಲಿ 12 ಕಿ. ಮೀ. ಮಾರ್ಗ ಕರ್ನಾಟಕದಲ್ಲಿ ಮತ್ತು 11 ಕಿ. ಮೀ. ಮಾರ್ಗ ತಮಿಳುನಾಡಿನಲ್ಲಿ ಇರಲಿದೆ. ಬಾಲಾಜಿ ರೈಲ್ರೋಡ್ ಸಿಸ್ಟಮ್ ಲಿಮಿಟೆಡ್ ಈ ಯೋಜನೆಯ ಕಾರ್ಯಸಾಧ್ಯತಾ ವರದಿಯನ್ನು ಅಂತಿಮಗೊಳಿಸುತ್ತಿದೆ. ಚೆನ್ನೈ ಮೆಟ್ರೋ ರೈಲು ನಿಗಮ (ಸಿಎಂಆರ್ಎಲ್) ಅಧಿಕಾರಿಗಳು ಮಂಗಳವಾರ ಬೆಂಗಳೂರಿನಲ್ಲಿ ಬಿಎಂಆರ್ಸಿಎಲ್ ಅಧಿಕಾರಿಗಳನ್ನು ಭೇಟಿಯಾಗಿ, ಯೋಜನೆ ಕುರಿತು ಚರ್ಚಿಸಿದ್ದಾರೆ.
ಜಿಲ್ಲಾಡಳಿತದ ಜೊತೆ ಸಭೆ: ಸಿಎಂಆರ್ಎಲ್ ಮುಖ್ಯಸ್ಥ ಎಂ. ಎ. ಸಿದ್ಧಿಕ್ಕಿ ನೇತೃತ್ವದ ಅಧಿಕಾರಿಗಳ ತಂಡ ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ. ಮಹೇಶ್ವರರಾವ್ ಭೇಟಿ ಮಾಡಿತು. ಬಳಿಕ ಹೊಸೂರಿಗೆ ಭೇಟಿ ನೀಡಿ, ಕೃಷ್ಣಗಿರಿ ಜಿಲ್ಲಾಡಳಿತ ಅಧಿಕಾರಿಗಳ ಜೊತೆ ಮೆಟ್ರೋ ಮಾರ್ಗ ಕಾರ್ಯ ಸಾಧ್ಯತೆ ಕುರಿತು ಮಾತುಕತೆಯನ್ನು ನಡೆಸಿತು.
ಕೇಂದ್ರ ಗೃಹ ಮತ್ತು ನಗರ ವ್ಯವಹಾರಗಳ ಮಂತ್ರಾಲಯ (ಎಂಓಹೆಚ್ಯುಎ) ಈಗಾಗಲೇ ಕರ್ನಾಟಕದ ಒಪ್ಪಿಗೆಯ ಜೊತೆಗೆ ಹೊಸೂರು-ಬೊಮ್ಮಸಂದ್ರ ನಡುವಿನ ಮೆಟ್ರೋ ರೈಲು ಯೋಜನೆಯ ಮುಂದಿನ ಕಾರ್ಯ ಕೈಗೊಳ್ಳಿ ಎಂದು ಸೂಚಿಸಿದೆ. ಆದ್ದರಿಂದ ಕಳೆದ ವರ್ಷದ ಡಿಸೆಂಬರ್ನಲ್ಲಿ ಬಾಲಾಜಿ ರೈಲ್ರೋಡ್ ಸಿಸ್ಟಮ್ ಲಿಮಿಟೆಡ್ ಕಾರ್ಯ ಸಾಧ್ಯತಾ ವರದಿಯನ್ನು ತಯಾರು ಮಾಡುವ ಕಾರ್ಯವನ್ನು ಆರಂಭಿಸಿದೆ.
ತಮಿಳುನಾಡು ಸರ್ಕಾರದ ಅಧಿಕಾರಿಯೊಬ್ಬರು ಮಾಧ್ಯಮಗಳ ಜೊತೆ ಯೋಜನೆ ಕುರಿತು ಮಾತನಾಡಿದ್ದಾರೆ, "ಹೊಸೂರು-ಬೊಮ್ಮಸಂದ್ರ ನಡುವಿನ ಮೆಟ್ರೋ ರೈಲು ಯೋಜನೆಯಲ್ಲಿ 12 ನಿಲ್ದಾಣಗಳಿವೆ. ನಾವು ಮಾರ್ಗದಲ್ಲಿ ಡಿಪೋ ನಿರ್ಮಾಣಕ್ಕೆ ಸಹ ಯೋಜನೆ ರೂಪಿಸುತ್ತಿದ್ದೇವೆ" ಎಂದು ಹೇಳಿದ್ದಾರೆ.
ಸದ್ಯದ ಮಾಹಿತಿ ಪ್ರಕಾರ ಹೊಸೂರು ಬಸ್ ಟರ್ಮಿನಲ್, ಎಸ್ಐಪಿಸಿಒಟಿ ಇಂಡಸ್ಟ್ರಿಯಲ್ ಪಾರ್ಕ್, ಅತ್ತಿಬೆಲೆ, ಅತ್ತಿಬೆಲೆ ಇಂಡಸ್ಟ್ರಿಯಲ್ ಏರಿಯಾ, ನಾರಾಯಣ ಆಸ್ಪತ್ರೆ ಮತ್ತು ಬೊಮ್ಮಸಂದ್ರ ನಿಲ್ದಾಣಗಳು ಯೋಜನೆಯಲ್ಲಿ ಸೇರಿವೆ.
ತಮಿಳುನಾಡು ರಾಜ್ಯ ಸರ್ಕಾರ ಸದ್ಯ ಯೋಜನೆಯ ಕಾರ್ಯ ಸಾಧ್ಯತಾ ವರದಿಗೆ ಅನುದಾನವನ್ನು ನೀಡಿದೆ. ಈ ಮೆಟ್ರೋ ಯೋಜನೆಗೆ ಹೇಗೆ ಅನುದಾನ ಹಂಚಿಕೆ ಮಾಡಿಕೊಳ್ಳಬೇಕು? ಎಂದು ವಿವರವಾದ ಕಾರ್ಯಸಾಧ್ಯತಾ ವರದಿ ಅಂತಿಮಗೊಂಡ ಬಳಿಕ ತೀರ್ಮಾನಿಸಲಾಗುತ್ತದೆ.
ಹೊಸೂರು-ಬೊಮ್ಮಸಂದ್ರ ನಡುವಿನ ಮೆಟ್ರೋ ರೈಲು ಯೋಜನೆ ಕುರಿತು ಕರ್ನಾಟಕ ಬೇರೆಯದೇ ಅಭಿಪ್ರಾಯವನ್ನು ಹೊಂದಿದೆ. ಬಿಎಂಆರ್ಸಿಎಲ್ ಬೊಮ್ಮಸಂದ್ರದಿಂದ ಅತ್ತಿಬೆಲೆ ತನಕ ಹಳದಿ ಮಾರ್ಗವನ್ನು ವಿಸ್ತರಣೆ ಮಾಡುವ ಕುರಿತು ತನ್ನದೇ ಆದ ಕಾರ್ಯಸಾಧ್ಯತಾ ವರದಿಯನ್ನು ತಯಾರು ಮಾಡುತ್ತಿದೆ.
ಬಿಎಂಆರ್ಸಿಎಲ್ ಚೆನ್ನೈ ಮೆಟ್ರೋ ರೈಲು ನಿಗಮ (ಸಿಎಂಆರ್ಎಲ್) ಅಧಿಕಾರಿಗಳು ಮಂಗಳವಾರ ಬೆಂಗಳೂರಿನಲ್ಲಿ ಬಿಎಂಆರ್ಸಿಎಲ್ ಅಧಿಕಾರಿಗಳನ್ನು ಭೇಟಿಯಾಗಿದ್ದನ್ನು ಖಚಿತಪಡಿಸಿದೆ. ಆದರೆ ಯಾವುದೇ ಅಂತಿಮ ತೀರ್ಮಾನವಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಯೋಜನೆ ಕುರಿತು ಚರ್ಚಿಸಿದ್ದಾರೆ. ಹೊಸೂರು ಮೆಟ್ರೋ ಯೋಜನೆಗೆ ಬಿಎಂಆರ್ಸಿಎಲ್ ಬೆಂಬಲವಿದೆಯೇ? ಎಂಬುದಕ್ಕೆ ಯಾವುದೇ ಅಧಿಕಾರಿಗಳು ಪ್ರತಿಕ್ರಿಯೆ ನೀಡಿಲ್ಲ.
ಈಗಾಗಲೇ ತಮಿಳುನಾಡು ಸರ್ಕಾರ ಎರಡು ತಿಂಗಳ ಹಿಂದೆ ಹೊಸೂರಿನಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಲಾಗುತ್ತದೆ ಎಂದು ಘೋಷಣೆ ಮಾಡಿತ್ತು. ಕೈಗಾರಿಕೆಗಳ ಬೆಳವಣಿಗೆ ಮತ್ತು ಪ್ರಯಾಣಿಕರ ಸಂಖ್ಯೆಯನ್ನು ಗಮನಿಸಿ ವಿಮಾನ ನಿಲ್ದಾಣದ ಯೋಜನೆ ಘೋಷಣೆ ಮಾಡಲಾಗಿತ್ತು. ಮತ್ತೊಂದು ಕಡೆ ಹೊಸೂರು-ಬೊಮ್ಮಸಂದ್ರ ನಡುವಿನ ಮೆಟ್ರೋ ರೈಲು ಯೋಜನೆಯ ವರದಿಯೂ ತಯಾರಾಗುತ್ತಿದೆ.












Click it and Unblock the Notifications