ಬಿಎಂಆರ್ ಸಿಎಲ್ ನೌಕರರು ಮತ್ತೆ ಮುಷ್ಕರಕ್ಕೆ ಕರೆ ನೀಡುವ ಸಾಧ್ಯತೆ!
ಬೆಂಗಳೂರು, ಏಪ್ರಿಲ್ 23: ಬಿಎಂಆರ್ ಸಿಎಲ್ ನೌಕರರ ಸಂಘಕ್ಕೆ ಮಾನ್ಯತೆ, ವೇತನ ಹೆಚ್ಚಳ, ಗುತ್ತಿಗೆ ಕಾರ್ಮಿಕ ಪದ್ಧತಿ ರದ್ದು ಸೇರಿ ಹಲವು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಿಗಮ ನೌಕರರು ಮತ್ತೆ ಮುಷ್ಕರಕ್ಕೆ ಕರೆ ನೀಡುವ ಸಾಧ್ಯತೆಯಿದೆ.
ನಿಗಮದ ಅಧಿಕಾರಿಗಳ ಜತೆ ಸಿಬ್ಬಂದಿ 1 ತಿಂಗಳ ಕಾಲ ನಡೆಸಿದ ಸಂಧಾನ ಸಭೆ ಪೂರ್ಣ ವಿಲವಾಗಿದ್ದು, ಬೇಡಿಕೆ ಈಡೇರಿಕೆಗೆ ಮತ್ತಷ್ಟು ಸಮಯಾವಕಾಶ ಬೇಕು ಎಂದು ಬಿಎಂಆರ್ ಸಿಎಲ್ ತಿಳಿಸಿದೆ. ಜತೆಗೆ ಎಲ್ಲ ಅಂಶಗಳನ್ನು ಕೋರ್ಟ್ ಮುಂದೆಯೇ ಇಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ವಿಚಾರ ಕುರಿತು ಭಾನುವಾರ ಬಿಎಂಆರ್ ಸಿಎಲ್ ನೌಕರರ ಸಂಘದ ಪದಾಧಿಕಾರಿಗಳು ಸಭೆ ನಡೆಸಿದ್ದಾರೆ. ಸಂಘಟನೆಯ ನಿಲುವು ಕುರಿತು ಬಿಎಂಆರ್ ಸಿಎಲ್ ಗೆ ಸೋಮವಾರ ಪತ್ರ ಮುಖೇನ ತಿಳಿಸಲು ತೀರ್ಮಾನಿಸಲಾಗಿದೆ ಎಂದು ಉಪಾಧ್ಯಕ್ಷ ಸೂರ್ಯನಾರಾಯಣ ಮೂರ್ತಿ ತಿಳಿಸಿದ್ದಾರೆ.

ತಿಂಗಳ ಗಡುವು ನೀಡಿದ್ದ ಕೋರ್ಟ್: ಬೇಡಿಕೆ ಈಡೇರಿಕೆಗೆ ಆಗ್ರಹಿಸಿ 2018 ಮಾ.22ರಂದು ಮುಷ್ಕರಕ್ಕೆ ಸಿಬ್ಬಂದಿ ಸಜ್ಜಾಗಿದ್ದರು. ಆದರೆ ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ್ದ ಹೈಕೋರ್ಟ್ ಸಾರ್ವಜನಿಕರಿಗೆ ತೊಂದರೆಯಾಗುವ ಹಿನ್ನೆಲೆಯಲ್ಲಿ ಪರಸ್ಪರ ಮಾತುಕತೆ ಮೂಲಕ ಪರಿಹರಿಸಿಕೊಳ್ಳಲು ಸೂಚಿಸಿತ್ತು.
ಇದಕ್ಕೆ ಪೂರಕವಾಗುವಂತೆ ವಾರದಲ್ಲಿ 2 ದಿನ ಸಭೆ ನಡೆಸಲು ಸೂಚಿಸಿ, ನಿಗಮದ ಕಡೆಯಿಂದ ಮತ್ತು ಸಿಬ್ಬಂದಿ ಕಡೆಯಿಂದ ಇಂತಿಷ್ಟು ಜನರನ್ನು ಕೋರ್ಟ್ ಆಯ್ಕೆ ಮಾಡಿತ್ತು. ಈ ಸಭೆಗಳೆಲ್ಲವೂ ಪೂರ್ಣಗೊಂಡಿದ್ದು, ಯಾವುದೇ ಸಕಾರಾತ್ಮಕ ಭರವಸೆ ಸಿಬ್ಬಂದಿಗೆ ದೊರಕಿಲ್ಲ ಎನ್ನಲಾಗಿದೆ.
ಈ ಕಾರಣದಿಂದ ತಾತ್ಕಾಲಿಕವಾಗಿ ಮುಂದೂಡಲ್ಪಟ್ಟಿದ್ದ ಮುಷ್ಕರವನ್ನು ಮತ್ತೆ ನಡೆಸಲು, ಸಂಘಟನೆ ಕರೆ ನೀಡುವ ಸಾಧ್ಯತೆಯಿದೆ. ಬಿಎಂಆರ್ ಸಿಎಲ್ ಬೇಕೆಂದೇ ಬೇಡಿಕೆಗಳ ಈಡೇರಿಕೆ ವಿಚಾರವನ್ನು ಇಷ್ಟು ಎಳೆದಾಡುತ್ತಿದೆ. ಇದರಲ್ಲಿ ಎಲ್ಲ ಅಧಿಕಾರಿಗಳೂ ಶಾಮೀಲಾಗಿದ್ದಾರೆ ಎಂದು ಸೂರ್ಯನಾರಾಯಣ ಮೂರ್ತಿ ಆರೋಪಿಸಿದ್ದಾರೆ. ಕೋರ್ಟ್ನಲ್ಲಿಯೇ ತಮ್ಮ ನಿಲುವನ್ನು ತಿಳಿಸುವುದಾಗಿ ಸ್ಪಷ್ಟಪಡಿಸಿದರು.












Click it and Unblock the Notifications