BBMP: ಬೆಂಗಳೂರು ವಿವಿ ಕ್ಯಾಂಪಸ್ನಲ್ಲಿ ತ್ಯಾಜ್ಯ ಸಂಗ್ರಹ ಸ್ಥಗಿತ
ನವೆಂಬರ್ 26, ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್ನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯು ಮುಂದಿನ ಜನವರಿಯಿಂದ ಕಸ ಸಂಗ್ರಹಿಸದೇ ಇರಲು ತೀರ್ಮಾನಿಸಿದೆ. ಈ ಸಂಬಂಧ ಬಿಬಿಎಂಪಿ ವಿಶ್ವವಿದ್ಯಾಲಯಕ್ಕೆ ನೋಟಿಸ್ ನೀಡಿದೆ.
ಬೆಂಗಳೂರು ವಿಶ್ವವಿದ್ಯಾಲಯದ (ಜ್ಞಾನಭಾರತಿ) ಎಲ್ಲ ವಿಭಾಗಗಳು ಸೇರಿದಂತೆ ಸಾವಿರಾರು ವಿದ್ಯಾರ್ಥಿನಿಲಯಗಳಿಂದ ಪ್ರತಿನಿತ್ಯ ಉತ್ಪತ್ತಿಯಾಗುವ ಘನತ್ಯಾಜ್ಯ ಪ್ರತ್ಯೇಕಿಸಲಾಗುತ್ತಿಲ್ಲ. ಉತ್ಪತ್ತಿಯಾಗುವ ಹಸಿ, ಒಣ, ಜೈವಿಕ ಎಂದು ಪ್ರತ್ಯೇಕವಾಗಿ ವಿಂಗಡಿಸಬೇಕು. ಆದರೆ ವಿಶ್ವವಿದ್ಯಾಲಯ ಈ ರೀತಿ ತ್ಯಾಜ್ಯ ಸಂಸ್ಕರಣೆಗೆ ಯಾವುದೇ ಕ್ರಮ ಕೈಗೊಳ್ಳದೇ ಹಾಗೇಯೇ ಬಿಡುತ್ತಿದೆ. ಈ ಕಾರಣದಿಂದ ಘನತ್ಯಾಜ್ಯ ಸಂಗ್ರಹ ಸೇವೆಯನ್ನು ಬಿಬಿಎಂಪಿ ಮುಂದಿನ ವರ್ಷದಿಂದ ನಿಲ್ಲಿಸಲಿದೆ. ಈ ಕುರಿತು ರಾಜರಾಜೇಶ್ವರಿನಗರ ವಲಯದ ಜಂಟಿ ಆಯುಕ್ತರು ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿಯವರಿಗೆ ಪತ್ರ ಬರೆದಿದ್ದಾರೆ.
ಈ ಹಿಂದೆ ಜ್ಞಾನಭಾರತಿಯಲ್ಲಿ ಕೆಲವೆಡೆ ತ್ಯಾಜ್ಯ ಪ್ರತ್ಯೇಕಿಸದೇ ಹಾಗೆ ಬಿಟ್ಟಿದ್ದ ಕಸದ ರಾಶಿಗೆ ಬೆಂಕಿ ಹಚ್ಚಲಾಗಿತ್ತು. ಈ ಕುರಿತು ಮಾಧ್ಯಮಗಳಲ್ಲಿ ವರದಿಯೂ ಆಗಿತ್ತು. ಅದಾಗಿಯೂ ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್ನಲ್ಲಿ ಘನತ್ಯಾಜ್ಯ ನಿರ್ವಹಣೆ ಮಾಡದೇ ನಿರ್ಲಕ್ಷ್ಯ ವಹಿಸಲಾಗಿದೆ.
ವಿದ್ಯಾರ್ಥಿ ನಿಲಯಗಳಲ್ಲಿ ತ್ಯಾಜ್ಯವನ್ನು ವಿಶ್ವವಿದ್ಯಾಲಯದ ಆವರಣದಲ್ಲೇ ಸಂಸ್ಕರಿಸಲು ಸರ್ಕಾರದ ಆದೇಶವಿದ್ದರೂ ಅದನ್ನು ಪಾಲಿಸುತ್ತಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು 2021ರ ಏಪ್ರಿಲ್ನಿಂದಲೂ ಬಿಬಿಎಂಪಿ ಅನೇಕ ಪತ್ರಗಳನ್ನು ವಿಶ್ವವಿದ್ಯಾಲಯಕ್ಕೆ ಕಳುಹಿಸಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ.
ಬಿಬಿಎಂಪಿ ಪತ್ರಗಳಿಗೆ ಸ್ಪಂದನೆ ಇಲ್ಲ
ಆದರೆ ಒಂಬತ್ತು ವಿದ್ಯಾರ್ಥಿನಿಲಯಗಳಿದ್ದು, ಹೆಚ್ಚಿನ ಗಾಡಿಯನ್ನು ಒದಗಿಸಬೇಕು ಎಂದು ಕುಲಸಚಿವರು ಪತ್ರ ಬರೆದಿದ್ದಾರೆ. ಆದರೆ, ಸರ್ಕಾರ ಹಾಗೂ ಬಿಬಿಎಂಪಿ ಸೂಚಿಸಿದಂತೆ ತ್ಯಾಜ್ಯ ಸಂಸ್ಕರಿಸುವ ಘಟಕ ಸ್ಥಾಪನೆ ಬಗ್ಗೆ ಯಾವುದೇ ಮಾಹಿತಿಯನ್ನು ವಿಶ್ವವಿದ್ಯಾಲಯ ಈವರೆಗೂ ನೀಡಿಲ್ಲ.
ವಿಶ್ವವಿದ್ಯಾಲಯ ವ್ಯಾಪ್ತಿಯ ವಿದ್ಯಾರ್ಥಿ ನಿಲಯಗಳು, ಎಂಜಿನಿಯರಿಂಗ್, ಸ್ನಾತಕೋತ್ತರ ವಿಭಾಗ ಹಾಗೂ ಆಡಳಿತ ವಿಭಾಗದಿಂದ ದಿನನಿತ್ಯ ಹೆಚ್ಚಿನ ತ್ಯಾಜ್ಯ ಸಂಗ್ರಹವಾಗುತ್ತಿದೆ. ಇದು ಬೃಹತ್ ಪ್ರಮಾಣದ ತ್ಯಾಜ್ಯ ಉತ್ಪಾದಕ ವ್ಯಾಪ್ತಿಗೆ ಬರುತ್ತದೆ. ಆದ್ದರಿಂದ ವಿಶ್ವವಿದ್ಯಾಲಯ ಆವರಣದಲ್ಲೇ ತ್ಯಾಜ್ಯ ಪ್ರತ್ಯೇಕಿಸಲು, ಸಮರ್ಪಕವಾಗಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಕಳೆದ ಮಾರ್ಚ್ನಲ್ಲಿ ಆರ್ಆರ್ ನಗರದ ಜಂಟಿ ಆಯುಕ್ತರು ಸೂಚಿಸಿದ್ದರು. ಆದರೆ ಕಸ ಪ್ರತ್ಯೇಕಿಸದ ಕಾರಣ ಜನವರಿಯಿಂದ ತ್ಯಾಜ್ಯ ಸಂಗ್ರಹಿಸದಿರಲು ಬಿಬಿಎಂಪಿ ತಿಳಿಸಿದೆ.