ಬಿಬಿಎಂಪಿಯಲ್ಲೂ ಆಪರೇಷನ್ ಕಮಲ, ಮೇಯರ್ ಕುರ್ಚಿಗಾಗಿ ಕಸರತ್ತು
ಬೆಂಗಳೂರು, ಸೆಪ್ಟೆಂಬರ್ 27: ಬಿಬಿಎಂಪಿ ಮೇಯರ್ ಸ್ಥಾನಕ್ಕೆ ನಾಳೆ (ಸೆಪ್ಟೆಂಬರ್ 27) ರಂದು ಚುನಾವಣೆ ನಡೆಯಲಿದೆ. ಕಾಂಗ್ರೆಸ್ನ ಗಂಗಾಂಬಿಕೆ ಮಲ್ಲಿಕಾರ್ಜುನ ಅವರಿಗೆ ಸ್ಥಾನ ಪಕ್ಕಾ ಎನ್ನಲಾಗಿತ್ತು. ಆದರೆ ಬಿಜೆಪಿ ಇದಕ್ಕೆ ಅಡ್ಡಗಾಲು ಹಾಕುತ್ತಿದೆ.
ಆಪರೇಷನ್ ಕಮಲವನ್ನು ಬಿಬಿಎಂಪಿಯಲ್ಲಿಯೂ ಪ್ರಾರಂಭಿಸಿರುವ ಬಿಜೆಪಿ ಮೇಯರ್ ಸ್ಥಾನದಲ್ಲಿ ತಮ್ಮ ಪಕ್ಷದ ಸದಸ್ಯರನ್ನು ಕೂರಿಸಲು ರಾಜಕೀಯ ಪಟ್ಟುಗಳನ್ನು ಹಾಕುತ್ತಿದೆ. ಈಗಾಗಲೇ ಇಬ್ಬರು ಪಕ್ಷೇತರ ಕಾರ್ಪೊರೇಟರ್ಗಳನ್ನು ತನ್ನತ್ತ ಸೆಳೆದುಕೊಂಡಿದ್ದು, ಇನ್ನಷ್ಟು ಸದ್ಯರಿಗಾಗಿ ಬಲೆ ಬೀಸಿದೆ.
ಬಿಬಿಎಂಪಿ ಮೇಯರ್ ಆಯ್ಕೆ ದಿನಾಂಕ ನಿಗದಿ, ಚುನಾವಣೆ ಹೇಗೆ?
ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಪೊರೇಟರ್ಗಳಿಗೂ ಗಾಳ ಹಾಕುವ ಯತ್ನವನ್ನು ಬಿಜೆಪಿ ಮಾಡುತ್ತಿದೆ ಎನ್ನಲಾಗಿದ್ದು , ಬಿಜೆಪಿಯ ಮೇಯರ್ ಅಭ್ಯರ್ಥಿಯನ್ನು ನಾಳೆ ಚುನಾವಣೆಗೆ ಮುನ್ನಾ ಪ್ರಕಟಿಸಲಾಗುವುದು ಎಂದು ಮೂಲಗಳು ಹೇಳಿವೆ.
ಬೆಂಗಳೂರಿನ ನೂತನ ಮೇಯರ್ ಆಗಿ ಗಂಗಾಂಬಿಕೆ ಬಹುತೇಕ ಖಚಿತ
ನಾಳೆ (ಸೆಪ್ಟೆಂಬರ್ 28) ಬೆಳಿಗ್ಗೆ 11 ಗಂಟೆಗೆ ಮೇಯರ್ ಆಯ್ಕೆ ಚುನಾವಣೆಯು ಬಿಬಿಎಂಪಿಯಲ್ಲಿ ನಡೆಯಲಿದ್ದು, ಅದರ ನೇರ ಪ್ರಸಾರ ಸಹ ನೋಡಲು ಸಿಗಲಿದೆ.
ಬಿಜೆಪಿಯ ಈಗಿನ ಬಲವೆಷ್ಟು?
ಬಿಬಿಎಂಪಿಯಲ್ಲಿ ಬಿಜೆಪಿಯು 100 ಸದಸ್ಯರ ಬಲ ಹೊಂದಿದೆ 11 ಶಾಸಕರು, 6 ಎಂಎಲ್ಸಿ, 3 ಸಂಸದರು, 2 ರಾಜ್ಯಸಭಾ ಸದಸ್ಯರು, ಸೇರಿದರೆ ಒಟ್ಟು ಬಲ ಪ್ರಸ್ತುತ ಇರುವ ಬಲ 112 ಬಿಬಿಎಂಪಿ ಮೇಯರ್ ಚುನಾವಣೆ ಗೆಲ್ಲಲು 130 ಮತಗಳ ಅವಶ್ಯಕತೆ ಇದೆ ಹಾಗಾಗಿ ಬಿಜೆಪಿಯು ಇನ್ನೂ 18 ಸದಸ್ಯರನ್ನು ತನ್ನತ್ತ ಸೆಳೆಯಬೇಕಿದೆ. ಈಗಿನ ರಾಜಕೀಯ ಪರಿಸ್ಥಿತಿಯಲ್ಲಿ ಇದು ಕಷ್ಟ ಸಾಧ್ಯ ಎಂದೇ ಹೇಳಲಾಗುತ್ತಿದೆ.
ಗೈರು ಮಾಡಿಸಿದರೂ ಗೆದ್ದಂತೆ
ಬಿಜೆಪಿ ಪ್ರಸ್ತುತ 112 ಕಾರ್ಪೊರೇಟರ್ಗಳನ್ನು ಹೊಂದಿದೆ. ಜೊತೆಗೆ ಈಗ ಇಬ್ಬರು ಪಕ್ಷೇತರರನ್ನು ತಮ್ಮತ್ತ ಸೆಳೆದುಕೊಂಡಿದೆ ಎನ್ನಲಾಗಿದೆ. ಹಾಗೂ ಈ ಮುಂಚೆಯೇ ಒಬ್ಬ ಪಕ್ಷೇತರ ಬಿಜೆಪಿಗೆ ಬೆಂಬಲ ನೀಡಿದ್ದಾರೆ ಹಾಗಾಗಿ ಪಕ್ಷದ ಒಟ್ಟು ಬಲ 115 ಆದಂತಾಗುತ್ತದೆ. ಬಿಜೆಪಿಯು ಬೇರೆ 15 ಅಥವಾ 16 ಕಾರ್ಪೊರೇಟರ್ಗಳನ್ನು ತಮಗೆ ಮತ ಹಾಕಿಸಲು ಸಾಧ್ಯವಾಗದಿದ್ದರೂ ಚುನಾವಣೆ ದಿನ ಯಾರಿಗೂ ಮತಚಲಾಯಿಸದಂತೆ ಮಾಡುವಲ್ಲಿ ಯಶಸ್ವಿಯಾದರೂ ಸಹ ಬಿಜೆಪಿಗೆ ಮೇಯರ್ ಪಟ್ಟ ಒಲಿಯುತ್ತದೆ.
ಬೆಂಗಳೂರು ಮೇಯರ್ ಆಯ್ಕೆ ಹೇಗೆ ನಡೆಯುತ್ತೆ? ಇಲ್ಲಿದೆ ಮಾಹಿತಿ
ಕಾಂಗ್ರೆಸ್ ಏನು ಮಾಡುತ್ತಿದೆ?
ಬಿಜೆಪಿಯು ತನ್ನ ಚಟುವಟಿಕೆ ಬಿರುಸು ಮಾಡಿದ ಬೆನ್ನಲ್ಲೆ ಕಾಂಗ್ರೆಸ್ ಸಹ ಚುರುಕಾಗಿದ್ದು, ತನ್ನ ಸಸ್ಯರನ್ನು ಬಿಜೆಪಿಯಿಂದ ರಕ್ಷಿಸಲು ರೆಸಾರ್ಟ್ಗೆ ಕರೆದುಕೊಂಡು ಹೋಗುವ ಸಿದ್ಧತೆ ನಡೆಸಿದೆ. ಇಂದೇ ಎಲ್ಲರನ್ನೂ ನಗರದ ಹೊರವಲಯದ ರೆಸಾರ್ಟ್ಗೆ ಶಿಫ್ಟ್ ಮಾಡಲಾಗುತ್ತಿದೆ. ಜೆಡಿಎಸ್ನ ಕಾರ್ಪೊರೇಟರ್ಗಳನ್ನೂ ಸಹ ರೆಸಾರ್ಟ್ಗೆ ಕರೆದುಕೊಂಡು ಹೋಗಲಾಗುತ್ತಿದೆ. ರಾಮಲಿಂಗಾ ರೆಡ್ಡಿ, ಪರಮೇಶ್ವರ್ ಅವರು ಬಿಬಿಎಂಪಿ ಕಾಂಗ್ರೆಸ್ನ ಉಸ್ತುವಾರಿ ವಹಿಸಿದ್ದಾರೆ. ರಾಮಲಿಂಗಾ ರೆಡ್ಡಿ ಬೆಂಬಲಿತ ಅಭ್ಯರ್ಥಿಗೇ ಮೇಯರ್ ಸ್ಥಾನ ದಕ್ಕುವ ಸಾಧ್ಯತೆ ದಟ್ಟವಾಗಿದೆ.
ಮೇಯರ್ ಅಭ್ಯರ್ಥಿ ಯಾರು?
ಬಿಜೆಪಿಯು ಪ್ರತಿಮಾ ರಮೇಶ್ ಅಥವಾ ಶೋಭಾ ಆಂಜಿನಪ್ಪ ಅವರಲ್ಲಿ ಯಾರನ್ನಾದರೂ ಒಬ್ಬರನ್ನು ತನ್ನ ಮೇಯರ್ ಅಭ್ಯರ್ಥಿಯಾಗಿ ನಾಳೆ ಪ್ರಕಟಿಸಲಿದೆ. ಕಾಂಗ್ರೆಸ್ ಪಕ್ಷವು ಈಗಾಗಲೇ ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರನ್ನು ಅಭ್ಯರ್ಥಿಯಾಗಿ ಪ್ರಕಟಿಸಿದೆ. ಜೆಡಿಎಸ್ ಪಕ್ಷ ಉಪಮೇಯರ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಬಿಬಿಎಂಪಿ ಮೇಯರ್ ಚುನಾವಣೆ: ಕಾಂಗ್ರೆಸ್ ಹಿರಿಯ ನಾಯಕರ ಮಧ್ಯೆ ಜಟಾಪಟಿ
ಕಾಂಗ್ರೆಸ್ ಹಾಗೂ ಜೆಡಿಎಸ್ ಬಲ ಎಷ್ಟು?
ಕಾಂಗ್ರೆಸ್ ನಲ್ಲಿ ಕಾರ್ಪೊರೇಟರ್ ಗಳು 75, ಎಂಎಲ್ಎ 15, ಎಂಎಲ್ ಸಿ8, ಎಂಪಿ 2, ರಾಜ್ಯಸಭಾ ಎಂಪಿ 6 ಒಟ್ಟು 106 ಮತಗಳಿರುತ್ತವೆ. ಜೆಡಿಎಸ್ ನಲ್ಲಿ ಕಾರ್ಪೊರೇಟರ್ ಗಳು 15, ಎಂಎಲ್ 2, ಎಂಎಲ್ ಸಿ 4,ಎಂಪಿ ೦, ರಾಜ್ಯಸಭಾ ಎಂಪಿ 1 ಜೆಡಿಎಸ್ ಒಟ್ಟು 22 ಮತಗಳಿರುತ್ತವೆ. 8 ಪಕ್ಷೇತರ ಕಾರ್ಪೊರೇಟರ್ಗಳಿದ್ದು ಇವರಲ್ಲಿ ಏಳು ಜನ ಈ ಮುಂಚೆ ಕಾಂಗ್ರೆಸ್ಗೆ ಬೆಂಬಲ ನೀಡಿದ್ದರು. ಬೆಂಬಲ ಮುಂದುವರೆಸಿದರೆ ಮೇಯರ್ ಸ್ಥಾನ ಆಯ್ಕೆ ಕಾಂಗ್ರೆಸ್ಗೆ ಸುಲಭವಾಗಲಿದೆ. ಪಕ್ಷೇತರರು ಕೈಕೊಟ್ಟರೆ ಕಷ್ಟವಾಗುತ್ತದೆ.
ಎರಡು ಬಾರಿ ಅವಮಾನ ಅನುಭವಿಸಿದ್ದ ಬಿಜೆಪಿ
ಈ ಮುಂಚೆ ಎರಡು ಬಾರಿ ಸಹ ಬಿಜೆಪಿಯು ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಅವಮಾನ ಎದುರಿಸಿದೆ. ಎರಡೂ ಬಾರಿ ಮೇಯರ್ ಆಯ್ಕೆ ನಡೆದಾಗ ಬಿಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿತ್ತು ಆದರೆ ಅವರ ಅಭ್ಯರ್ಥಿಗಳು ಸೋತಿದ್ದರು. ಹಾಗಾಗಿ ಈ ಬಾರಿ ಮೇಯರ್ ಚುನಾವಣೆಗೆ ಭಾಗವಹಿಸುವುದಿಲ್ಲ ಎಂದು ಎಣಿಸಲಾಗುತ್ತು ಆದರೆ ಈ ಬಾರಿಯೂ ಬಿಜೆಪಿ ಕಣಕ್ಕಿಳಿಯುತ್ತಿದೆ.
ಬಿಬಿಎಂಪಿಯಲ್ಲಿ ಬಿಜೆಪಿ ಉಸ್ತುವಾರಿ ಯಾರಿಗೆ?
ಬಿಜೆಪಿಯ ಹಿರಿಯ ಮುಖಂಡ ಆರ್.ಅಶೋಕ್ ಅವರು ಬಿಬಿಎಂಪಿ ಬಿಜೆಪಿಯ ಉಸ್ತುವಾರಿ ವಹಿಸಿದ್ದು, ಅವರು ಈ ಮುಂಚೆ ಸಹ ತಮ್ಮ ಪಕ್ಷದ ಕಾರ್ಪೊರೇಟರ್ಗಳ ಸಭೆ ಕರೆದು ಮಾತನಾಡಿದ್ದಾರೆ. ಅಲ್ಲದೆ ಅವರ ಮುಂದಾಳತ್ವದಲ್ಲೇ ಪಕ್ಷೇತರರನ್ನು ತಮ್ಮ ಪಕ್ಷಕ್ಕೆ ಎಳೆದುಕೊಳ್ಳಲಾಗುತ್ತಿದೆ. ಈ ಹಿಂದೆ ಕೂಡ ಅವರಿಗೆ ಜವಾಬ್ದಾರಿ ವಹಿಸಲಾಗಿತ್ತು.