ಕಾಂಗ್ರೆಸ್ 'ಸತ್ಯಮೇವ ಜಯತೆ' ಬಲೂನಿಗೆ 'ಡೊನೇಶನ್ ಗೇಟ್' ಪಿನ್ ಚುಚ್ಚಿದ ಬಿಜೆಪಿ
ಗುರುವಾರ ಮುಂಜಾನೆ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದ ಕಾಂಗ್ರೆಸ್ 'ಸತ್ಯಮೇವ ಜಯತೆ'ಗೆ ಕೇವಲ 12 ಗಂಟೆಗಳೊಳಗೆ ತಿರುಗೇಟು ನೀಡುವಲ್ಲಿ ಬಿಜೆಪಿ ಸಫಲವಾಗಿದೆ.
ಬೆಂಗಳೂರು, ಫೆಬ್ರವರಿ 24: ಗುರುವಾರ ಮುಂಜಾನೆ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದ ಕಾಂಗ್ರೆಸ್ 'ಸತ್ಯಮೇವ ಜಯತೆ'ಗೆ ಕೇವಲ 12 ಗಂಟೆಗಳೊಳಗೆ ತಿರುಗೇಟು ನೀಡುವಲ್ಲಿ ಬಿಜೆಪಿ ಸಫಲವಾಗಿದೆ. ಸಂಜೆ ವೇಳೆ 'ಡೊನೇಶನ್ ಗೇಟ್' ಬಹಿರಂಗವಾಗುತ್ತಿದ್ದಂತೆ ಕಾಂಗ್ರೆಸ್ ಬಾಯಿ ಮುಚ್ಚಿ ಕುಳಿತುಕೊಳ್ಳಬೇಕಾದ ಸ್ಥಿತಿ ತಲುಪಿದೆ.
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾವನದಲ್ಲಿ ಕಾಂಗ್ರೆಸ್ ಗುರುವಾರ ಸತ್ಯಮೇವ ಜಯತೆ ಹೆಸರಿನಲ್ಲಿ ರ್ಯಾಲಿ ಹಮ್ಮಿಕೊಂಡಿತ್ತು. ಇದರಲ್ಲಿ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್, ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವರಾದ ರಾಮಲಿಂಗಾರೆಡ್ಡಿ, ಕೆ ಜೆ ಜಾರ್ಜ್, ಕೃಷ್ಣ ಬೈರೇಗೌಡ, ಸೇರಿದಂತೆ ಹಲವು ನಾಯಕರು ಭಾಗವಹಿಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು.[ಡೊನೇಷನ್ ಗೇಟ್ ಹಗರಣ : ಯಾರು ಏನು ಹೇಳುತ್ತಿದ್ದಾರೆ?]
ಕಾಂಗ್ರೆಸ್ ಮುಕ್ತ ಕರ್ನಾಟಕ ಕನಸು ಸಾಧ್ಯವಿಲ್ಲ ಎಂದು ಬಿಜೆಪಿ ವಿರುದ್ದ ಕೈ ನಾಯಕರು ಅಬ್ಬರಿಸಿದ್ದರು. ರ್ಯಾಲಿ ಉದ್ಘಾಟಿಸಿ ಮಾತನಾಡಿದ್ದ ಪರಮೇಶ್ವರ್, ಕಾಂಗ್ರೆಸ್ ಮುಕ್ತ ಕರ್ನಾಟಕ ನಿಮ್ಮ ಜನ್ಮದಲ್ಲೂ ಸಾಧ್ಯವಿಲ್ಲ. ಜೈಲಿಗೆ ಹೋಗಿ ಬಂದ ನೀವು (ಯಡಿಯೂರಪ್ಪ) ರಾಜ್ಯಾದ್ಯಂತ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದೀರಿ. ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಜನ ತಕ್ಕ ಪಾಠ ಕಲಿಸುತ್ತಾರೆ. ಜೈಲಿಗೆ ಹೋಗಿ ಬಂದ ನೀವು ಜನರಿಗೆ ಹೇಗೆ ಮುಖ ತೋರಿಸುತ್ತೀರಿ. ನಿಮಗೆ ನೈತಿಕತೆ ಎಲ್ಲಿದೆ," ಎಂದು ಯಡಿಯೂರಪ್ಪ ವಿರುದ್ದ ಅಬ್ಬರಿಸಿ ಬೊಬ್ಬಿರಿದಿದ್ದರು.
ಸಂಜೆ ವೇಳೆಗ ಪಟಾಕಿ ಠುಸ್
ಆದರೆ ಸಂಜೆ ವೇಳೆಗೆ ರಾಷ್ಟ್ರೀಯ ಮಾಧ್ಯಮದಲ್ಲಿ 'ಡೊನೇಶನ್ ಗೇಟ್' ಹಗರಣ ಬಹಿರಂಗವಾಗಿದೆ. ಇದಕ್ಕೆ ವಿಡಂಬನಾತ್ಮಕವಾಗಿ ಉತ್ತರ ನೀಡಿದ ಬಿಜೆಪಿ 'ಸತ್ಯಮೇವ ಜಯತೆ' ಅಂತ ಒಂದೇ ಸಾಲಿನ ಟ್ವೀಟ್ ಮಾಡಿ ಕಾಂಗ್ರೆಸ್ ಗೆ ಚುಚ್ಚಿದೆ.[ಗೋವಿಂದರಾಜ್ ಡೈರಿ ಸ್ಪೋಟ: ಕೋಟಿ ಕೋಟಿ ಹಣದ ಸಂಪೂರ್ಣ ವಿವರ]
ಸತ್ಯಮೇವ ಜಯತೆ
— BJP Karnataka (@BJP4Karnataka) February 23, 2017
BJP puns on Congress' Satyameva Jayate after diary expose
ರಾಷ್ಟ್ರೀಯ ಮಾಧ್ಯಮ ಬಿಡುಗಡೆ ಮಾಡಿದ ಡೈರಿಯ ದಾಖಲೆಗಳಲ್ಲಿ ಹಲವರ ಇನಿಶಿಯಲ್ ಗಳಿದ್ದು ಇದು ಕಾಂಗ್ರೆಸಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಬಿಜೆಪಿ ಮೇಲೆ ದಾಳಿ ಮಾಡುತ್ತಿದ್ದ ಕಾಂಗ್ರೆಸ್ ನಾಯಕರಿಗೆ ಈಗ ಸ್ಪಷ್ಟನೆ ನೀಡುವುದರಲ್ಲೇ ಸಾಕು ಸಾಕಾಗಿ ಹೋಗಿದೆ.
ವಿಶೇಷ ಎಂದರೆ 2013ರಲ್ಲಿ ಇದೇ ರೀತಿ ಬಿಜೆಪಿನ ಹಗರಣಗಳಿಂದ ನಲುಗಿ ಹೋಗಿತ್ತು. ಇದೀಗ 2018ರ ಚುನಾವಣೆಗೂ ಮುನ್ನ ಕಾಂಗ್ರೆಸ್ ಹಗರಣಗಳ ಆರೋಪ ಎದುರಿಸುತ್ತಿದೆ.