ಬ್ಯಾಡರಹಳ್ಳಿ ಬಿಜೆಪಿ ಮುಖಂಡನ ಆತ್ಮಹತ್ಯೆ ಹಿಂದಿನ ರಹಸ್ಯ!
ಬೆಂಗಳೂರು, ಮೇ.16: ಬ್ಯಾಡರಹಳ್ಳಿ ಬಿಬಿಎಂಪಿ ವಾರ್ಡ್ ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಪ್ರಕರಣದ ರಹಸ್ಯ ಬಯಲಾಗಿದೆ. ಮೇ.13 ರಂದು ಮನೆಯಲ್ಲಿಯೇ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು.
ಬ್ಯಾಡರಹಳ್ಳಿ ಠಾಣೆಯಲ್ಲಿ ಅನಂತರಾಜು ಪತ್ನಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದರು. ಅವರು ಬರೆದಿರುವ ಡೆತ್ನೋಟ್ನಲ್ಲಿ ಹನಿಟ್ರ್ಯಾಪ್ ಕಿರುಕುಳದ ಬಗ್ಗೆ ಉಲ್ಲೇಖಿಸಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆಬೀಸಿದ್ದಾರೆ.
ಅನಂತರಾಜು ಅನಾರೋಗ್ಯದ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾತು ಕೇಳಿಬರುತ್ತಿತ್ತು. ಆದರೆ ಡೆತ್ ನೋಟ್ ಸಿಕ್ಕಿದ್ದು ಸಾವಿಗೆ ಅಸಲಿ ಕಾರಣ ಏನು? ಎಂಬುದು ಬಯಲಾಗಿದೆ. ಈ ಸಾವಿನ ಹಿಂದೆ ಹನಿಟ್ರ್ಯಾಪ್ ಜಾಲವಿದ್ದು, ಕೆ. ಆರ್. ಪುರಂ ನಿವಾಸಿ ರೇಖಾ, ವಿನೋದ್ ಮತ್ತು ಸ್ಫಂದನ ಎಂಬುವರ ಮೇಲೆ ಅನಂತ್ ರಾಜ್ ಪತ್ನಿ ನೀಡಿದ ದೂರಿನ ಮೇಲೆ ಪ್ರಕರಣ ದಾಖಲಾಗಿದೆ.

ಫೇಸ್ಬುಕ್ ಮೂಲಕ ಪರಿಚಯ; ರೇಖಾ ಫೇಸ್ಬುಕ್ ಮೂಲಕ ಪರಿಚಯ ಮಾಡಿಕೊಂಡು ಅನಂತರಾಜು ಜೊತೆ ಇದ್ದ ಖಾಸಗಿ ವಿಡಿಯೋ, ಫೋಟೊ ಇಟ್ಟುಕೊಂಡು ಹಣ ಕೊಡದಿದ್ದರೆ ಬಿಜೆಪಿ ವರಿಷ್ಠರು, ಮಾಧ್ಯಮಗಳಿಗೆ ನೀಡುವುದಾಗಿ ಬೆದರಿಕೆ ಹಾಕಿದ್ದರು ಎಂಬುದು ಆರೋಪ.
ಅನಂತರಾಜು ಪತ್ನಿ ನೀಡಿರುವ ದೂರಿನಲ್ಲಿಯೂ ನನ್ನ ಗಂಡನಿಗೆ ರೇಖಾ, ವಿನೋದ್ ಮತ್ತು ಸ್ಫಂದನ ಎಂಬುವವರು ದೂರವಾಣಿ ಕರೆ ಮಾಡಿ ಕಿರುಕುಳ ನೀಡುತ್ತಿದ್ದರು. ರೇಖಾ ಎಂಬ ಮಹಿಳೆ ಫೇಸ್ಬುಕ್ ಮೂಲಕ ನನ್ನ ಗಂಡನಿಗೆ ಪರಿಚಯವಾಗಿ ನನ್ನ ಪತಿಯ ಅಮಾಯಕತೆ ಬಳಸಿಕೊಂಡು ಅವರ ಜೊತೆಗೆ ಸಲುಗೆ ಬೆಳೆಸಿಕೊಂಡಿದ್ದರು ಎಂದು ಹೇಳಿದ್ದಾರೆ.
ನಂತರ ದಿನಗಳಲ್ಲಿ ಅವರ ಖಾಸಗಿ ವಿಡಿಯೋ, ಫೋಟೋಗಳನ್ನು ಇಟ್ಟುಕೊಂಡು ರೇಖಾ, ವಿನೋದ್ ಮತ್ತು ಸ್ಪಂದನಾ ಎಂಬ ಮೂವರು ಹಣಕ್ಕಾಗಿ ಬೇಡಿಕೆ ಇಡುತ್ತಿದ್ದರು. ಒಮ್ಮೆ ನಮ್ಮ ಪತಿ ಅವರ ಕಿರುಕುಳ ತಾಳಲಾಗುತ್ತಿಲ್ಲ ನಾನು ಸಾಯುತ್ತೇನೆ ಎಂದು ನನ್ನ ಬಳಿ ಹೇಳಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಆದರೂ ಆ ಗ್ಯಾಂಗ್ ಮತ್ತೆ ಮತ್ತೆ ಫೋನ್ ಮಾಡಿ ಒಂದು ವೇಳೆ ಹಣ ಕೊಡದಿದ್ದರೆ ಬಿಜೆಪಿ ವರಿಷ್ಠರು, ಮಾಧ್ಯಮಗಳಿಗೆ ವಿಡಿಯೋ ಕೊಟ್ಟು ನೀವು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡುತ್ತೇನೆ ಎಂದು ಬೆದರಿಸಿದ್ದರು. ಕೆ. ಆರ್. ಪುರಂನಿಂದ ಫೋನ್ ಮಾಡುತ್ತಿದ್ದ ರೇಖಾ, ವಿನೋದ್ ಮತ್ತು ಸ್ಫಂದನ ಮೂವರು ನನ್ನ ಪತಿಯ ಸಾವಿಗೆ ಕಾರಣ ಎಂದು ದೂರು ನೀಡಿದ್ದಾರೆ.
ಅನಂತರಾಜು ಕ್ಷಮೆ; ತನಗೆ ಕಿರುಕುಳ ನೀಡುತ್ತಿರುವವರ ಬಗ್ಗೆ ಮೊದಲೇ ಪತ್ನಿ ಜೊತೆ ಹೇಳಿಕೊಂಡಿದ್ದ ಅನಂತರಾಜು ಕೊನೆಗೂ ಸಾವಿಗೆ ಶರಣಾಗಿದ್ದಾರೆ. ಸಾಯುವ ಮುನ್ನ ಡೆತ್ ನೋಟ್ನಲ್ಲಿ ಪತ್ನಿ ಕ್ಷಮೆಯಾಚಿಸಿದ್ದಾರೆ.
ಪ್ರಿಯ ಪತ್ನಿ ಕ್ಷಮಿಸಿಬಿಡು, ಅವರ ಕಿರುಕುಳ ನನಗೆ ತಾಳಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನಿಮಗೆಲ್ಲರಿಗೂ ಮೋಸ ಮಾಡುತ್ತಿದ್ದೇನೆ, ನಿಮ್ಮ ಬಳಿ ಕ್ಷಮೆ ಕೇಳಲು ಅರ್ಹನೂ ಅಲ್ಲ. ಒಂದು ಹೆಣ್ಣಿನ ಸಹವಾಸ ಮಾಡಿ ನಾನು ಈ ರೀತಿಯಾಗಿ ಸಾಯುವ ಪರಿಸ್ಥಿತಿ ತಂದುಕೊಂಡೆ ಎಂದು ಹೇಳಿದ್ದಾರೆ.

ಬಿಜೆಪಿ ಮುಖಂಡನ ಬಾಳಿಗೆ ಬೆಂಕಿಯಿಟ್ಟ ಕೆ. ಆರ್. ಪುರಂ ನಿವಾಸಿಗಳಾದ ರೇಖಾ, ವಿನೋದ್, ಸ್ಪಂದನ ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777











Click it and Unblock the Notifications