ಎಚ್ಡಿಕೆ 'ದಂಗೆ' ಹೇಳಿಕೆ ವಿರುದ್ಧ ಬಿಜೆಪಿಯಿಂದ ರಾಜ್ಯಪಾಲರಿಗೆ ದೂರು
ಬೆಂಗಳೂರು, ಸೆಪ್ಟೆಂಬರ್ 21: ಮುಖ್ಯಮಂತ್ರಿ ಕುಮಾರಸ್ವಾಮಿ ಅವರ 'ದಂಗೆ' ಹೇಳಿಕೆಗೆ ವಿರುದ್ಧ ರಾಜ್ಯ ಬಿಜೆಪಿಯು ಕೇಂದ್ರ ಮಂತ್ರಿ ಸದಾನಂದಗೌಡ ಮತ್ತು ಮುಖಂಡ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ದೂರು ನೀಡಿದೆ.
ರಾಜ್ಯದ ಕಾನೂನು ಕಾಪಾಡಬೇಕಾದ ಜವಾಬ್ದಾರಿ ಹೊತ್ತಿರುವ ಮುಖ್ಯಮಂತ್ರಿಗಳೇ ಜನರನ್ನು ದಂಗೆ ಏಳಲು ಕರೆನೀಡುವುದು ರಾಜದ್ರೋಹ ಎನಿಸಿಕೊಳ್ಳುತ್ತದೆ. ಹಾಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿಯು ರಾಜ್ಯಪಾಲರನ್ನು ಆಗ್ರಹಿಸಿತು.
ಸಮ್ಮಿಶ್ರ ಸರ್ಕಾರಕ್ಕೆ ಇದೇ ರೀತಿ ತೊಂದರೆ ಕೊಡುತ್ತಲೇ ಇದ್ದರೆ ಬಿಜೆಪಿ ವಿರುದ್ಧ ರಾಜ್ಯದ ಜನ ದಂಗೆ ಏಳುವಂತೆ ಕರೆ ನೀಡುತ್ತೇನೆ ಎಂದು ನಿನ್ನೆ ಸಿಎಂ ಕುಮಾರಸ್ವಾಮಿ ಹೇಳಿದ್ದರು. ಅವರ ಹೇಳಿಕೆ ಕೊಟ್ಟ ಕೆಲ ಹೊತ್ತಿನ ನಂತರ ಯಡಿಯೂರಪ್ಪ ಮನೆ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದರು.

ಸಂಸದೆ ಶೋಭಾ ಕರಂದ್ಲಾಜೆ ನೇತೃತ್ವದ ಮತ್ತೊಂದು ಬಿಜೆಪಿ ಮುಖಂಡರ ತಂಡ ಇದೇ ವಿಚಾರವಾಗಿ ಪೊಲೀಸ್ ಡಿಐಜಿ ನೀಲಮಣಿರಾಜು ಅವರನ್ನು ಭೇಟಿಯಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ಇಷ್ಟೆ ಅಲ್ಲದೆ ಸಿಎಂ ಅವರ ದಂಗೆ ಹೇಳಿಕೆ ವಿರುದ್ಧ ಬಿಜೆಪಿಯು ಹಲವೆಡೆ ಪ್ರತಿಭಟನೆ ಮಾಡಿದ್ದು, ಸಿಎಂ ನಕ್ಸಲರಂತೆ ಮಾತನಾಡಿದ್ದಾರೆ. ಸಂವಿಧಾನಬದ್ಧ ಸ್ಥಾನದಲ್ಲಿರುವ ವ್ಯಕ್ತಿ ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ ಎಂದು ಹೇಳಿದರು.












Click it and Unblock the Notifications