ಕೊನೆಗೂ ಸದಾನಂದ ಗೌಡರಿಗೆ ಉತ್ತರ ಸಿಕ್ತು!
ಬೆಂಗಳೂರು, ಮಾ.5 : ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆ ವಿಚಾರದ ಹಗ್ಗ-ಜಗ್ಗಾಟ ಅಂತ್ಯಗೊಂಡಿದ್ದು, ಉತ್ತರ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಆರ್ ಅಶೋಕ್ ಸ್ಪಷ್ಟಪಡಿಸಿದ್ದಾರೆ. ಇದರಿಂದಾಗಿ ಮಾಜಿ ಸಿಎಂ ಡಿವಿ ಸದಾನಂದ ಗೌಡರಿಗೆ ಕ್ಷೇತ್ರದ ಟಿಕೆಟ್ ದೊರಕುವುದು ಖಾತ್ರಿಯಾಗಿದೆ.
ಮಾಜಿ ಡಿಸಿಎಂ ಆರ್ ಅಶೋಕ್ ನಿವಾಸಲ್ಲಿ ಮಂಗಳವಾರ ಸಂಜೆ ನಡೆದ ಸಭೆಯ ಬಳಿಕ ತಾವು ಕರ್ನಾಟಕದ ರಾಜಕಾರಣದಲ್ಲೇ ಇರಬೇಕು ಎಂದು ಬೆಂಬಲಿಗರು ಇಚ್ಛೆ ಪಟ್ಟಿದ್ದಾರೆ. ಆದ್ದರಿಂದ ತಾವು ಲೋಕಸಭೆ ಚುನಾವಣೆಗೆ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ. ಈ ಕುರಿತು ನಾಯಕರಿಗೆ ಮಾಹಿತಿ ನೀಡುತ್ತೇನೆ ಎಂದು ಅಶೋಕ್ ತಿಳಿಸಿದರು. [ಲೋಕಸಭೆ ಚುನಾವಣೆ ವೇಳಾಪಟ್ಟಿ]
ಒಕ್ಕಲಿಗರ ಪ್ರಾಬಲ್ಯವಿರುವ ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಗಾಗಿ ಡಿವಿ ಸದಾನಂದ ಗೌಡ ಮತ್ತು ಆರ್ ಅಶೋಕ್ ಪೈಪೋಟಿ ನಡೆಸಿದ್ದರು. ಸದ್ಯ ಸ್ಪರ್ಧೆಯಿಂದ ಆರ್ ಅಶೋಕ್ ಹಿಂದೆ ಸರಿದಿದ್ದು, ರಾಷ್ಟ್ರೀಯ ನಾಯಕರ ಸೂಚನೆಯಂತೆ ಮಾಜಿ ಸಿಎಂ ಡಿವಿ ಸದಾನಂದ ಗೌಡರಿಗೆ ಟಿಕೆಟ್ ದೊರೆಯುವುದು ಖಾತ್ರಿಯಾಗಿದೆ. [ಕರ್ನಾಟಕದ ಲೋಕಸಭೆ ವೇಳಾಪಟ್ಟಿ]

ಮೂವರ ಜಟಾಪಟಿ ನಡೆದಿತ್ತು
ಮಾಜಿ ಸಿಎಂ ಡಿವಿ ಸದಾನಂದ ಗೌಡ, ಮಾಜಿ ಡಿಸಿಎಂ ಆರ್ ಅಶೋಕ್ ಮತ್ತು ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಗಾಗಿ ಪೈಪೋಟಿ ನಡೆಸಿದ್ದರು. ಇದರಿಂದಾಗಿ ಪಕ್ಷದ ನಾಯಕರಿಗೆ ಅಭ್ಯರ್ಥಿ ಆಯ್ಕೆ ಸವಾಲಿನ ಕೆಲಸವಾಗಿತ್ತು.

ಸಂಭಾವ್ಯ ಪಟ್ಟಿಯಲ್ಲಿ ಕ್ಷೇತ್ರ ಹಂಚಿಕೆ
ಅಶೋಕ್ ಅವರಿಗೆ ಬೆಂಗಳೂರು ಉತ್ತರ, ಸದಾನಂದ ಗೌಡರಿಗೆ ಮೈಸೂರು ಮತ್ತು ಶೋಭಾ ಕರಂದ್ಲಾಜೆ ಅವರಿಗೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರವೆಂದು ಬಿಜೆಪಿ ನಾಯಕರು ಸಂಭಾವ್ಯ ಪಟ್ಟಿ ತಯಾರಿಸಿದ್ದರು. [ಬಿಜೆಪಿ ಸಂಭಾವ್ಯ ಪಟ್ಟಿ]

ಹಿಂದೆ ಸರಿದ ಅಶೋಕ್
ಆದರೆ, ಅಶೋಕ್ ತಮ್ಮ ಬೆಂಬಲಿಗರನ್ನು ಉತ್ತರ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಮಾಡುತ್ತಾರೆ. ಕೊನೆ ಕ್ಷಣದಲ್ಲಿ ಅವರು ಸ್ಪರ್ಧೆಯಿಂದ ಹಿಂದೆ ಸರಿಯುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಇದರ ಸುಳಿವು ಅರಿತ ವರಿಷ್ಠ ನಾಯಕರು, ಡಿವಿ ಸದಾನಂದ ಗೌಡರಿಗೆ ಟಿಕೆಟ್ ನೀಡಬೇಕು ಎಂದು ಸೂಚನೆ ನೀಡಿದ್ದರು. [ಬಗೆಹರಿದಿಲ್ಲ ಬೆಂಗಳೂರು ಉತ್ತರದ ಸಮಸ್ಯೆ]

ಅಂತಿಮ ಸಭೆ
ಮಂಗಳವಾರ ಆರ್ ಅಶೋಕ್ ನಿವಾಸದಲ್ಲಿ ಡಿವಿ ಸದಾನಂದ ಗೌಡ, ಅನಂತ್ ಕುಮಾರ್ ಮತ್ತು ಅಶೋಕ್ ಸಭೆ ನಡೆಸಿದರು. ಸಭೆಯ ನಂತರ ತಮ್ಮ ನಿರ್ಧಾರ ಪ್ರಕಟಿಸಿರುವ ಅಶೋಕ್ ತಾವು ಸ್ಪರ್ಧಿಸುವುದಿಲ್ಲ. ಪಕ್ಷದ ಘೋಷಿಸುವ ಅಭ್ಯರ್ಥಿಯ ಗೆಲುವಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.

ಬೆಂಬಲಿಗರಿಂದಲೂ ಅಭ್ಯರ್ಥಿಗೆ ಬೆಂಬಲ
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಪಕ್ಷ ಸೂಚಿಸಿದ ಅಭ್ಯರ್ಥಿಯನ್ನು ಬೆಂಬಲಿಸಲು ಉತ್ತರ ಲೋಕಸಭಾ ವ್ಯಾಪ್ತಿಯ ಬಿಜೆಪಿ ಶಾಸಕರು ಹಾಗೂ ಪಾಲಿಕೆ ಸದಸ್ಯರು ನಿರ್ಧರಿಸಿದ್ದಾರೆ. ಉತ್ತರ ಲೋಕಸಭಾ ಕ್ಷೇತ್ರಕ್ಕೆ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರ ಹೆಸರನ್ನು ಪಕ್ಷದ ವರಿಷ್ಠರು ಅಂತಿಮಗೊಳಿಸುವ ನಿರೀಕ್ಷೆ ಇದೆ.












Click it and Unblock the Notifications