ಮುನಿರತ್ನಗೆ ಹೈಕಮಾಂಡ್ ಅಭಯ: ಕೆಲ ಹೊತ್ತಿನಲ್ಲಿ ಅಧಿಕೃತ ಪ್ರಕಟ!
ಬೆಂಗಳೂರು, ಅ. 07: ಪಕ್ಷದಿಂದ ಟಿಕೆಟ್ ಕೊಡದಿದ್ದರೆ ಸಾಮಾನ್ಯ ಕಾರ್ಯಕರ್ತನಾಗಿ ಮುಂದುವರೆಯುತ್ತೇನೆ ಎಂದಿದ್ದ ಮಾಜಿ ಶಾಸಕ ಮನಿರತ್ನ ಅವರ ಮಾತಿಗೆ ಬಿಜೆಪಿ ಹೈಕಮಾಂಡ್ ಮನ್ನಣೆ ಕೊಟ್ಟಿದೆ. ಇವತ್ತು ಮಧ್ಯಾಹ್ನ ಆರ್.ಆರ್. ನಗರ ಬಿಜೆಪಿ ಅಭ್ಯರ್ಥಿ ಹೆಸರನ್ನು ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಅಧಿಕೃತವಾಗಿ ಪ್ರಕಟ ಮಾಡಲಿದೆ.
'ಒನ್ಇಂಡಿಯಾ ಕನ್ನಡ'ಕ್ಕೆ ಬಿಜೆಪಿ ಉನ್ನತ ಮೂಲಗಳಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ ಇಂದು ಮಧ್ಯಾಹ್ನ 01.30ಕ್ಕೆ ಆರ್ ಆರ್ ನಗರ ಬಿಜೆಪಿ ಅಭ್ಯರ್ಥಿಯ ಹೆಸರು ಅಧಿಕೃತವಾಗಿ ಪ್ರಕಟವಾಗಲಿದೆ. ಈ ಮೊದಲು ನಡೆದಿದ್ದ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಎರಡು ಹೆಸರುಗಳನ್ನು ಹೈಕಮಾಂಡ್ಗೆ ಕಳುಹಿಸಲಾಗಿದೆ. ಆದರೂ ತಮ್ಮ ಎದುರು ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ತುಳಸಿ ಮುನಿರಾಜು ಅವರ ಹೆಸರನ್ನೂ ಸೇರಿಸಿ ಕೇಂದ್ರಕ್ಕೆ ಕಳುಹಿಸಿರುವುದು ಮಾಜಿ ಶಾಸಕ ಮುನಿರತ್ನ ಅವರ ಆತಂಕಕ್ಕೆ ಕಾರಣವಾಗಿದೆ. ಇದೇ ಹಿನ್ನೆಲೆಯಲ್ಲಿ ಮುನಿರತ್ನ ಅವರು ಇವತ್ತು ಬೆಳಗ್ಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ.

ಯಡಿಯೂರಪ್ಪ ಭೇಟಿ
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಮುನಿರತ್ನ ಅವರು ಇಂದು ಬೆಳಗ್ಗೆಯೆ ಭೇಟಿ ಮಾಡಿ ಚರ್ಚೆ ನಡೆಸಿದರು. ಯಡಿಯೂರಪ್ಪ ಅವರು ಬೆಳಗಾವಿಗೆ ತೆರಳುವ ಮುನ್ನ ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಭೇಟಿ ಮಾಡಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಚುನಾವಣೆಗೆ ಇನ್ನು ಕೇವಲ 26 ದಿನಗಳು ಮಾತ್ರ ಬಾಕಿಯಿವೆ. ನಾನಿನ್ನೂ ನಾಮಪತ್ರ ಸಲ್ಲಿಸಿಲ್ಲ. ಇದು ಮತದಾರರ ಮೇಲೆ ಪ್ರಭಾವ ಬೀರಿದರೆ ಸಮಸ್ಯೆ ಆಗುತ್ತದೆ ಎಂದು ಮುನಿರತ್ನ ಅವರು ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಪ್ರಚಾರ ಮುಂದುವರೆಸಿ
ತಮ್ಮನ್ನು ಭೆಟಿ ಮಾಡಿದ ಮುನಿರತ್ನ ಅವರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಭಯ ಹೇಳಿದ್ದಾರೆ. ಪ್ರಚಾರ ಮುಂದುವರೆಸು, ನಾನಿದ್ದೇನೆ. ನಿಮ್ಮ ಹೆಸರು ಇಂದು ಪ್ರಕಟವಾಗಲಿದೆ ಎಂದು ಯಡಿಯೂರಪ್ಪ ಭರವಸೆ ಕೊಟ್ಟಿದ್ದಾರೆ ಎನ್ನಲಾಗಿದೆ.
ತುಳಸಿ ಮುನಿರಾಜುಗೌಡ ಅವರನ್ನು ಪಕ್ಷದ ವತಿಯಿಂದ ಸಮಾಧಾನ ಮಾಡಲಾಗುತ್ತಿದೆ. ಆ ಬಗ್ಗೆ ಯಾವುದೇ ಆತಂಕ ಬೇಡ. ನಾನೂ ಕೂಡ ಶೀಘ್ರವೇ ಪ್ರಚಾರಕ್ಕೆ ಬರುತ್ತೇನೆ. ಉಳಿದ ತಯಾರಿಯನ್ನು ಮಾಡಿಕೊಳ್ಳಿ ಎಂದು ಮುನಿರತ್ನ ಅವರಿಗೆ ಯಡಿಯೂರಪ್ಪ ಅವರು ಹೇಳಿದ್ದಾರೆ.

ಹೈಕಮಾಂಡ್ ಅಭಯ
ಟಿಕೆಟ್ ಗೊಂದಲ ಹಿನ್ನೆಲೆಯಲ್ಲಿ ಆರ್ಆರ್ ನಗರದ ಮಾಜಿ ಶಾಸಕ ಮುನಿರತ್ನ ಅವರೂ ಕೂಡ ಬಿಜೆಪಿ ಹೈಕಮಾಂಡ್ ಕದ ತಟ್ಟಿದ್ದಾರೆ ಎಂಬ ಮಾಹಿತಿಯಿದೆ. ಮೈತ್ರಿ ಸರ್ಕಾರದ ಪತನದ ಸಂದರ್ಭದಲ್ಲಿ ಮುನಿರತ್ನ ಅವರನ್ನು ಕರೆ ಬಿಜೆಪಿಗೆ ತಂದಿರುವ ದಕ್ಷಿಣ ಕರ್ನಾಟಕ ಭಾಗದ ಬಿಜೆಪಿ ನಾಯಕ ಹಾಗೂ ಪರಿಷತ್ ಸದಸ್ಯರೊಬ್ಬರ ಮೂಲಕ ಹೈಕಮಾಂಡ್ ಜೊತೆಗೆ ಟಿಕೆಟ್ ಕುರಿತು ಮುನಿರತ್ನ ಮಾತನಾಡಿದ್ದಾರೆ.
ಹೈಕಮಾಂಡ್ ಕೂಡ ಪ್ರಚಾರ ಮುಂದುವರೆಸಿ ಎಂದು ಮುನಿರತ್ನ ಅವರಿಗೆ ಸೂಚಿಸಿದೆ. ಹೀಗಾಗಿ ಇಂದು ಅಧಿಕೃತವಾಗಿ ಟಿಕೆಟ್ ಘೋಷಣೆಯಾದ ಒಂದೆರಡು ದಿನಗಳಲ್ಲಿ ಮುನಿರತ್ನ ಅವರು ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ ಎಂಬ ಮಾಹಿತಿಯಿದೆ.
Recommended Video

ಆದರೂ ಗೊಂದಲ ಯಾಕೆ?
ಇಷ್ಟೆಲ್ಲ ಇದ್ದಾಗಲೂ ಎರಡು ಹೆಸರುಗಳನ್ನು ಕಳಿಸಿ ಗೊಂದಲ ಯಾಕೆ ಮಾಡಲಾಗಿದೆ ಎಂದು ಮುನಿರತ್ನ ಅವರು ಬಿಜೆಪಿ ನಾಯಕರ ಬಳಿ ಕೇಳಿದ್ದಾರಂತೆ. ಅದಕ್ಕೆ ಸಮಜಾಯಿಸಿ ಕೊಟ್ಟಿರುವ ಆ ನಾಯಕರು, ಬಿಜೆಪಿಯಲ್ಲಿ ಎಲ್ಲ ಆಕಾಂಕ್ಷಿಗಳ ಹೆಸರುಗಳನ್ನು ಬಿಜೆಪಿ ಕೇಂದ್ರ ಚುನಾವಣಾ ಸಮಿತಿಗೆ ಕಡ್ಡಾಯವಾಗಿ ಕಳುಹಿಸಲೇಬೇಕು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಕೇಂದ್ರ ಚುನಾವಣಾ ಸಮಿತಿಯ ಅಧ್ಯಕ್ಷರೂ ಆಗಿರುತ್ತಾರೆ. ಹೀಗಾಗಿ ಇದೊಂದು ಸಂಪ್ರದಾಯ. ಆಯಾ ಕ್ಷೇತ್ರಕ್ಕೆ ಆಕಾಂಕ್ಷಿ ಎಂದು ಅರ್ಜಿ ಹಾಕುವ ಎಲ್ಲರ ಹೆಸರುಗಳನ್ನು ಕೇಂದ್ರಕ್ಕೆ ಕಳುಹಿಸಲಾಗುತ್ತದೆ. ಆದರೆ ಅಂತಿಮವಾಗಿ ಹೈಕಮಾಂಡ್ ಯಾರಿಗೆ ಟಿಕೆಟ್ ಕೊಡಬೇಕು ಎಂಬುದನ್ನು ತೀರ್ಮಾನ ಮಾಡುತ್ತದೆ ಎಂದು ವಿವರಿಸಿದ್ದಾರೆ.
ಇನ್ನೆರಡು ದಿನಗಳಲ್ಲಿ ಆರ್ಆರ್ ನಗರ ಬಿಜೆಪಿ ಅಭ್ಯರ್ಥಿಯಾಗಿ ಮುನಿರತ್ನ ಅವರು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಬಿಜೆಪಿ ಉನ್ನತ ಮೂಲಗಳಿಂದ 'ಒನ್ಇಂಡಿಯಾ ಕನ್ನಡ'ಕ್ಕೆ ಮಾಹಿತಿ ಲಭ್ಯವಾಗಿದೆ.












Click it and Unblock the Notifications