ಅವಕಾಶ ಸಿಕ್ಕಾಗ ಸರ್ಕಾರ ರಚಿಸದಿರಲು ನಾವೇನು ಸನ್ಯಾಸಿಗಳೇ?: ಯಡಿಯೂರಪ್ಪ
ಬೆಂಗಳೂರು, ಜುಲೈ 1: ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಅವರ ರಾಜೀನಾಮೆ ಕುರಿತು ತಮಗೆ ಯಾವ ಮಾಹಿತಿಯೂ ಇಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಆನಂದ್ ಸಿಂಗ್ ಹೇಳಿದ್ದಾರೆ.
ಸೋಮವಾರ ಸುದ್ದಿಗೋಷ್ಠಿ ನಡೆಸಿದ ಅವರು, ಆನಂದ್ ಸಿಂಗ್ ಅವರ ರಾಜೀನಾಮೆ ವಿಚಾರ ಮಾಧ್ಯಮಗಳಿಂದ ತಮಗೆ ತಿಳಿದುಬಂದಿದೆ ಎಂದು ಹೇಳಿದರು.
ನಾವು ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಯಾವುದೇ ತಂತ್ರಗಾರಿಕೆ, ಕುತಂತ್ರ ಇನ್ಯಾವುದನ್ನೂ ನಡೆಸುತ್ತಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಕನಿಷ್ಠ 20 ಅತೃಪ್ತ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಇದ್ದಾರೆ ಎಂದು ಎರಡು ತಿಂಗಳಿನಿಂದ ಹೇಳುತ್ತಲೇ ಬಂದಿದ್ದೇನೆ. ಅವರನ್ನು ನಮ್ಮ ಪಕ್ಷಕ್ಕೆ ಸೆಳೆದುಕೊಳ್ಳುವ ಪ್ರಯತ್ನಕ್ಕೆ ನಾವು ಮುಂದಾಗಿಲ್ಲ. ಅವರು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಅವಲಂಬಿತವಾಗಿರುತ್ತದೆ ಎಂದರು.

ಸರ್ಕಾರ ಉರುಳಿಸುವುದರ ಬಗ್ಗೆಯಾಗಲೀ, ಶಾಸಕರನ್ನು ಸೆಳೆಯುವುದರ ಬಗ್ಗೆಯಾಗಲೀ ಯಾವುದೇ ಸಂದರ್ಭದಲ್ಲಿ ನನ್ನ ಬಾಯಿಂದ ಹೇಳಿಕೆ ಬಂದಿಲ್ಲ. ಅವರಾಗಿಯೇ ಪಕ್ಷಕ್ಕೆ ಬಂದಾಗ ನೋಡೋಣ ಎಂದಿದ್ದೇನೆ. ಒಂದು ವೇಳೆ ಅವರು ಪಕ್ಷ ಬಿಟ್ಟು ಬಂದರೆ ಹೊಸದಾಗಿ ಮಧ್ಯಂತರ ಚುನಾವಣೆಗೆ ಹೋಗುವ ಪ್ರಶ್ನೆ ಇಲ್ಲ. ನಾವೇನು ಸನ್ಯಾಸಿಗಳೇ? ಪಕ್ಷಕ್ಕೆ ಬಂದ ಮುಖಂಡರೊಂದಿಗೆ ಸೇರಿ ಸರ್ಕಾರ ರಚಿಸಿ ಒಳ್ಳೆಯ ಆಡಳಿತ ನೀಡುತ್ತೇವೆ ಎಂದು ಹೇಳಿದರು.
ರಾಜ್ಯದ ಆಡಳಿತ ಪರಿಸ್ಥಿತಿ ಚೆನ್ನಾಗಿಲ್ಲ. ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಯುತ್ತಿಲ್ಲ. ಹೊಸ ಯೋಜನೆಗಳು ಜಾರಿಗೆ ಬರುತ್ತಿಲ್ಲ. ಹಳೆಯ ಕಾಮಗಾರಿಗಳ ಬಿಲ್ ಇಟ್ಟುಕೊಂಡೇ ಸರ್ಕಾರ ಕುಳಿತಿದೆ. ಬಾಕಿ ಉಳಿದಿರುವ ಕಾಮಗಾರಿಗಳ ಪರ್ಸಂಟೇಜ್ಗೆ ಕಾದುಕೊಂಡಿದ್ದಾರೆ. ಕಮಿಷನ್ ಏಜೆಂಟ್ಗಳಂತೆ ವರ್ತಿಸುತ್ತಿದ್ದಾರೆ. ಇದು ನಿದ್ರಾವಸ್ಥೆಯಲ್ಲಿರು, ಭ್ರಷ್ಟಾಚಾರದಲ್ಲಿ ತೊಡಗಿರುವ, ಅಭಿವೃದ್ಧಿ ಕಾರ್ಯಗಳಿಗೆ ಗಮನ ಕೊಡದ ಬೇಜವಾಬ್ದಾರಿ ಸರ್ಕಾರ ಎಂದು ಟೀಕಿಸಿದರು.
ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ನೀರು ತರುವ ಯೋಜನೆ ಅವೈಜ್ಞಾನಿಕ. ಈ ಪ್ರಯತ್ನ ಸಾಧ್ಯವಾಗುವುದಿಲ್ಲ. ಯಾವುದೇ ಕಾರಣಕ್ಕೂ ಯೋಜನೆ ಜಾರಿಗೆ ಬಿಡುವುದಿಲ್ಲ. ಬೆಂಗಳೂರಿನಲ್ಲಿ ಒತ್ತುವರಿಯಾಗಿರುವ ಭೂಮಿಯನ್ನು, ಕೆರೆ-ಕಾಲುವೆಗಳನ್ನು ಮೊದಲು ತೆರವುಗೊಳಿಸಿ. ಇಲ್ಲಿನ ನೀರಿನ ಮೂಲಗಳನ್ನು ಬಳಸಿಕೊಳ್ಳಲಿ ಎಂದು ಹೇಳಿದರು.












Click it and Unblock the Notifications