ಕೊರೊನಾಕ್ಕೆ ಕಿಕ್ ಕೊಡಲು ನಿತ್ಯಾನಂದನಿಂದ ಪಚ್ಚೈ ಪತ್ತಿನಿ ವೃತ ಆರಂಭ!
ಬೆಂಗಳೂರು, ಮಾರ್ಚ್ 17; ಜಗತ್ತಿನಲ್ಲಿ ತಲ್ಲಣ ಸೃಷ್ಟಿಸಿರುವ ಕೊರೊನಾ ವೈರಸ್ ಗೆ (covid19) ಒಂದು ಗತಿ ಕಾಣಿಸಲು ಚೀನಾ ಅಮೆರಿಕ ಸೇರಿದಂತೆ ಅನೇಕ ಬಲಿಷ್ಠ ರಾಷ್ಟ್ರಗಳು ಹೆಣಗಾಡುತ್ತಿವೆ.
ಆದರೆ, ಕೊರೊನಾ ವೈರಸ್ ನ್ನು ಇಲ್ಲಿಗೆ ನಿಲ್ಲಿಸಲು ಅಥವಾ ಅದು ಮುಂದೆ ಪಸರಿಸದಂತೆ ಮಾಡಲು ವಿವಾದಿತ ಸ್ವಾಮೀಜಿ ಸ್ವ ಘೋಷಿತ ದೇವಮಾನವ ಬಿಡದಿಯ ನಿತ್ಯಾನಂದ ಸ್ವಾಮಿ ಅವರು ಘೋರ ವೃತ ಆರಂಭಿಸಿದ್ದೇನೆ ಎಂದು ಹೇಳಿದ್ದಾರೆ.
ಮಾಧ್ಯಮಗಳಿಗೆ ಈ ಮೇಲ್ ಮೂಲಕ ಪತ್ರಿಕಾ ಪ್ರಕಟಣೆ ನೀಡಿರುವ ನಿತ್ಯಾನಂದ ಸ್ವಾಮಿಗಳು, ಕೊರೊನಾ ಹೊಡೆದೊಡಿಸಲು, ಕೊರೊನಾ ಬರದಂತೆ ತಡೆಯಲು 28 ದಿನಗಳ ಪಚ್ಚೈ ಪತ್ತಿನಿ ಎಂಬ ಮಹಾ ವೃತ ಆರಂಭಿಸಿರುವುದಾಗಿ ಹೇಳಿದ್ದಾರೆ.

ಏನಿದು ಪಚ್ಚೈ ಪತ್ತಿನಿ ವೃತ?
28 ದಿನ ಘೋರ ಉಪವಾಸ ಕೈಗೊಳ್ಳುವುದು ಈ ಪಚ್ಚೈ ಪತ್ತಿನಿ ವೃತದ ಸಂಕ್ಷಿಪ್ತ ರೂಪ. ಇದರಲ್ಲಿ ಸ್ವಾಸ್ಥ್ಯ ಜೀವನಕ್ಕೆ ಉಪವಾಸ, ಶಿವಧ್ಯಾನ, ಮಹಾವಾಕ್ಯದ ಪಠಣ ನಡೆಯುತ್ತದೆ. ಇದಕ್ಕೆ ಕೊರೊನಾಕ್ಕಿಂತಲೂ ಬಲಶಾಲಿಯಾದ ರೋಗ ಹೋಗಲಾಡಿಸುವ ಶಕ್ತಿ ಇದೆ ಎಂದು ನಿತ್ಯಾನಂದ ಸ್ವಾಮಿ ಹೇಳಿದ್ದಾರೆ.

ಕೈಲಾಸ ದೇಶದಲ್ಲಿ ವೃತ
ಕೈಲಾಸ ದೇಶದಲ್ಲಿ (ಈಕ್ವೆಡಾರ್) ಈಗಾಗಲೇ ಕಳೆದ ಮೂರು ದಿನಗಳಿಂದಲೇ ಪಚ್ಚೈ ಪತ್ತಿನಿ ವೃತ ಆರಂಭಿಸಿರುವ ನಿತ್ಯಾನಂದ, ಪಚ್ಚೈ ಪತ್ತಿನಿ ವೃತ ಆರಂಭಿಸುವಂತೆ ತನ್ನ ಶಿಷ್ಯರಿಗೆ ಕರೆ ನೀಡಿದ್ದಾರೆ. ಮಾರಿಯಮ್ಮನಿಗೆ ನೈವೇದ್ಯ, ಎಳನೀರು, ಬೆಲ್ಲದ ನೀರು, ಮಜ್ಜಿಗೆ, ಕಬ್ಬಿನ ಹಾಲು ಮಾತ್ರ ಉಪವಾಸದ ವೇಳೆ ಸೇವಿಸಬಹುದು ಎಂದು ತಿಳಿಸಿದ್ದಾರೆ.

ಜನ ಭಯಗೊಳ್ಳಬಾರದು
ಕೊರೊನಾ ವೈರಸ್ ಮುನಿದ ಮಾರಿಯ ರೂಪ. ಇದಕ್ಕೆ ಜನ ಭಯಗೊಳ್ಳಬಾರದು, ಪಚ್ಚೈ ಪತ್ತಿನಿ ವೃತ ಮಾಡುವುದರಿಂದ ಮಾರಿಯಮ್ಮ ಸಂತುಷ್ಟಳಗುತ್ತಾಳೆ. ಇದು ವೈಜ್ಞಾನಿಕ ತಳಹದಿಯ ಮೇಲಿದೆ ಎಂದು ನಿತ್ಯಾನಂದ ಹೇಳಿದ್ದಾರೆ.

ಪರ್ಯಾಯ ಅಲ್ಲ
ನಾನು ನನ್ನ ಭಕ್ತರಿಗೆ ಈ ಪರಿಸ್ಥಿತಿಯಲ್ಲಿ ಪಚ್ಚೈ ಪತ್ತಿನಿ ವೃತ ಆರಂಭಿಸುವಂತೆ ಕರೆ ನೀಡಿದ್ದೇನೆ. ಆದರೆ, ಇದು ವೈದ್ಯಕೀಯ ಚಿಕಿತ್ಸೆ ಪದ್ದತಿಗೆ ಪರ್ಯಾಯ ಅಲ್ಲ. ರೋಗದ ಲಕ್ಷಣಗಳು ಇದ್ದರೆ ಅಂತವರು ಉತ್ತಮ ಚಿಕಿತ್ಸೆ ಪಡೆದುಕೊಳ್ಳಲಿ ಎಂದೂ ಸಹ ಈ ಮೇಲ್ ನ ಕೊನೆಯಲ್ಲಿ ಹೇಳಿದ್ದಾರೆ.












Click it and Unblock the Notifications