ಗಂಡ-ಹೆಂಡ್ತಿ ಗಲಾಟೆ ತೋರಿಸೋ ನಿಮ್ಗೆ ಇದಕ್ಕೆಲ್ಲ ಪುರಸೊತ್ತು ಎಲ್ಲಿ?
ಬೆಂಗಳೂರು, ಸೆಪ್ಟೆಂಬರ್, 02: "ಸ್ವಾಮಿ ಬಡವರದ್ದೂ ಹಾಕಿ, ಸ್ವಾಮಿ, ನಮ್ಮದೂ ಸುದ್ದಿ ಮಾಡಿ, ಅದ್ಯಾರದ್ದೋ ಮದುವೆ, ಎಂಗೆಜ್ ಮೆಂಟ್ , ಗಂಡ-ಹೆಂಡ್ತಿ ಗಲಾಟೆ ಅಂಥೆಲ್ಲ ಇಡೀ ದಿನ ತೋರಿಸ್ತೀರಾ.." ನಮ್ಮ ಕಷ್ಟನೂ ಸ್ವಲ್ಪ ತೋರಿಸ್ರೀ...
ಕಾರ್ಮಿಕರ ಪ್ರತಿಭಟನೆ ವರದಿ ಮಾಡಲು ತೆರಳಿದ್ದ ವರದಿಗಾರನಿಗೆ ಎದುರಾದ ಪ್ರಶ್ನೆ ಇದು... ಫೋಟೋ ತೆಗೆಯುತ್ತಿದ್ದ ವರದಿಗಾರನನ್ನು ತಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಹಿರಿಯ ಕಾರ್ಮಿಕರೊಬ್ಬರು, ನೀವು ಪೇಪರಿನವರಾ? ಎಂದು ಕೇಳಿದರು.. ಇದಕ್ಕೆ ಹೂಂ.. ಅಂಥ ತಲೆಯಾಡಿಸಿದ್ದಕ್ಕೆ ಮಾಧ್ಯಮದವರ ಮೇಲೆ ಅಂತರಂಗದಲ್ಲಿ ಹುದುಗಿದ್ದ ಸಿಟ್ಟನ್ನೆಲ್ಲಾ ಮಹಾನುಭಾವ ಹೊರಕ್ಕೆ ಬಿಟ್ಟರು.[ಕಾರ್ಮಿಕರ ಕಷ್ಟಕ್ಕೆ ಕಣ್ಣೀರು ಹಾಕದ ಬೆಂಗಳೂರು]
ಅವಳ್ಯಾರೋ ಪಕ್ಕದ ದೇಶದ ಬಗ್ಗೆ ಅರ್ಥವಿಲ್ಲದ ಹೇಳಿಕೆ ನೀಡಿದರೆ ಇಡೀ ದಿನ ಏನು, ಎರಡು-ಮೂರು ದಿನ ಅದರ ಬಗ್ಗೆ ಚರ್ಚೆ ಮಾಡುತ್ತೀರಿ. ಇಲ್ಲಿ ದೇಶದ ಒಳಗೆ ಕಾರ್ಮಿಕರು ಬದುಕು ಕಟ್ಟಿಕೊಳ್ಳಲು ಹೆಣಗುತ್ತಿರುವುದು ನಿಮ್ಮ ಕಣ್ಣಿಗೆ ಕಾಣಲ್ಲವೇ?[ಜನಸಾಮಾನ್ಯರ ಪ್ರಕಾರ ಕನ್ನಡ ನ್ಯೂಸ್ ಚಾನೆಲ್ ಅಂದ್ರೆ? ಹೀಗೂ ಉಂಟು!]
ಟಿವಿ ಮಾಧ್ಯಮಗಳನ್ನೇ ಟಾರ್ಗೆಟ್ ಮಾಡಿಕೊಂಡು ಮಾತನಾಡಿದ ವ್ಯಕ್ತಿ, ನಿಮಗೆ ಬೇರೆ ಏನೂ ಕಾಣುವುದಿಲ್ಲ. ಬಡವರ ಮನೆ ಹೋದರೆ ನಿಮಗೆ ಏನಾಗಬೇಕು? ಇದೀಗ ದೊಡ್ಡವರ ಹೆಸರು ಬಂದ್ ಮೇಲೆ ಯಾಕೆ ಬಾಯಿ ಮುಚ್ಚಿಕೊಂಡ್ರಿ? ಎನ್ನುತ್ತಾ ರಾಜಕಾಲುವೆ ಗೊಂದಲಗಳನ್ನು ಉಲ್ಲೇಖ ಮಾಡಿದರು.
ಅದ್ಯಾವುದೋ ಶ್ರೀಮಂತರ ಮನೆ ಮಗಳು ಮನೆ ಬಿಟ್ಟು ಹೋದರೆ ದೊಡ್ಡ ಸುದ್ದಿ ಮಾಡುತ್ತೀರಿ? ಪ್ರತಿದಿನ ಗ್ರಾಮೀಣ ಭಾಗದಲ್ಲಿ ಅದೆಷ್ಟು ಹೆಣ್ಣು ಮಕ್ಕಳು ನಾಪತ್ತೆಯಾಗುತ್ತಿದ್ದಾರೆ ಅದು ನಿಮ್ಮ ಕಣ್ಣಿಗೆ ಕಾಣುವುದಿಲ್ಲವೆ? ಮನೆಯಿಂದ ಓಡಿಹೋದವಳನ್ನು ದೇಶಕ್ಕೆ ಹೋರಾಟ ಮಾಡಿದವರ ರೀತಿಯಲ್ಲಿ ತೋರಿಸಿದ್ದೀರಲ್ಲಾ??
ಅವರ ಪ್ರಶ್ನೆಗಳ ಸರಣಿ ಮುಂದುವರಿಯುತ್ತಲೇ ಇತ್ತು. ಕಾರ್ಮಿಕರ ಹೋರಾಟದ ಘೋಷಣೆಗಳ ನಡುವೆಯೂ ಹಿರಿಯ ಕಾರ್ಮಿಕರು ಹೇಳಿದ ಮೇಲಿನ ಮಾತುಗಳು ಎಷ್ಟು ಸತ್ಯ ಅಲ್ಲವೇ? ಮಾಧ್ಯಮಕ್ಕೂ ಆತ್ಮ ವಿಮರ್ಶೆ ಬೇಕಿದೆ.