ಭಾರತ್ ಬಂದ್ : ಮೆಜೆಸ್ಟಿಕ್ನಲ್ಲಿ ವಾಟಾಳ್ ಜಟಕಾ ಸವಾರಿ
ಬೆಂಗಳೂರು, ಜನವರಿ 09 : ಕಾರ್ಮಿಕ ಸಂಘಟನೆಗಳು 2ನೇ ದಿನವೂ ಬಂದ್ ನಡೆಸುತ್ತಿವೆ. ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಬಂದ್ಗೆ ಬೆಂಬಲ ನೀಡಿದ್ದು, ವಿನೂತನ ಪ್ರತಿಭಟನೆ ನಡೆಸಿದರು.
ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ಗೆ ಕನ್ನಡ ಒಕ್ಕೂಟದ ಅಧ್ಯಕ್ಷ ಮತ್ತು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಬೆಂಬಲ ನೀಡಿದ್ದಾರೆ. ಜನವರಿ 8ರಂದು ಅವರು ಹಾಸಿಗೆ, ದಿಂದಿನೊಂದಿಗೆ ಪ್ರತಿಭಟನೆ ನಡೆಸಿದ್ದರು.
ಬಂದ್ನ ಎರಡನೇ ದಿನವಾದ ಬುಧವಾರ ವಾಟಾಳ್ ನಾಗರಾಜ್ ಅವರು ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಿಂದ ಜಟಕಾ ಬಂಡಿಯಲ್ಲಿ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಆಗಮಿಸಿದರು.

ತಮ್ಮ ಬೆಂಬಲಿಗರ ಜೊತೆ ಮೆಜೆಸ್ಟಿಕ್ನಲ್ಲಿ ಪ್ರತಿಭಟನೆ ನಡೆಸಿ ಕಾರ್ಮಿಕ ಸಂಘಟನೆಗಳಿಗೆ ಬೆಂಬಲ ಘೋಷಣೆ ಮಾಡಿದರು. ಮೆಜೆಸ್ಟಿಕ್ನ ಬಿಎಂಟಿಸಿ ಬಸ್ ನಿಲ್ದಾಣ ಬಂದ್ನಿಂದ ಖಾಲಿಯಾಗಿದ್ದು, ಅಲ್ಲಿ ವಾಟಾಳ್ ಜಟಕಾ ಸವಾರಿ ಮಾಡಿದರು.
ಬೃಹತ್ ಪ್ರತಿಭಟನೆ : ಭಾರತ್ ಬಂದ್ನ 2ನೇ ದಿನವಾದ ಬುಧವಾರ ಬೆಂಗಳೂರಿನಲ್ಲಿ ಕಾರ್ಮಿಕ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸುತ್ತಿವೆ. ಟೌನ್ಹಾಲ್ನಿಂದ ಆರಂಭವಾಗಿರುವ ಮೆರವಣಿಗೆ ರಾಜಭವನ ತಲುಪಲಿದೆ.
ಪ್ರತಿಭಟನಾಕಾರರು ರಾಜಭವನಕ್ಕೆ ತೆರಳಲು ಪೊಲೀಸರು ಅನುಮತಿ ನೀಡಿಲ್ಲ. ಆದ್ದರಿಂದ, ಎಲ್ಲರೂ ಫ್ರೀಡಂಪಾರ್ಕ್ಗೆ ತೆರಳಿದ್ದಾರೆ. ಪ್ರತಿಭಟನಾನಿರತರ ನಿಯೋಗ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಿದ್ದಾರೆ.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳು ಎರಡು ದಿನದ ದೇಶವ್ಯಾಪ್ತಿ ಮಷ್ಕರಕ್ಕೆ ಕರೆ ನೀಡಿದ್ದವು. ಮುಷ್ಕರ ಹಿನ್ನಲೆಯಲ್ಲಿ ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ ಸಂಚಾರ ಬುಧವಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.












Click it and Unblock the Notifications