ಬೆಂಗಳೂರು:ಮಾರುತಿ ದೇವಾಲಯ ಮುಜರಾಯಿ ವಶಕ್ಕೆ
ಬೆಂಗಳೂರು, ಜೂ.4: ಅರಮನೆ ರಸ್ತೆಯ ಶ್ರೀ ಭಗವಾನ್ ಮಾರುತಿ ದೇವಸ್ಥಾನವನ್ನು ಸುಪರ್ದಿಗೆ ತಗೆದುಕೊಂಡಿರುವ ಮುಜುರಾಯಿ ಇಲಾಖೆ ಬುಧವಾರ ಜೂ.4ರಂದು ಆಭರಣ ಹಾಗೂ ಇತರೆ ದಾಖಲೆಗಳನ್ನು ಪರಿಶೀಲಿಸಿತು.
ಮಾರುತಿ ದೇವಸ್ಥಾನ ಕ್ಷೇಮಾಭಿವೃದ್ಧಿ ಸಂಘದವರು ದೇವಾಲಯದಲ್ಲಿನ ಸಾರ್ವಜನಿಕ ಹಣ ಮತ್ತು ಆಸ್ತಿಯನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ, ಮುಜರಾಯಿ ಇಲಾಖೆ ಅಧಿಕಾರಿಗಳು ವಿಚಾರಣೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಿದ್ದರು.
ದೇವಾಲಯವನ್ನು ವಶಕ್ಕೆ ತೆಗೆದುಕೊಳ್ಳುವ ಮುನ್ನ ದೇವಸ್ಥಾನದ ಆಡಳಿತ ಮಂಡಳಿಯವರಿಗೆ ನೋಟಿಸ್ ನೀಡಲಾಗಿತ್ತು. ನೋಟಿಸ್ಗೆ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನಲೆಯಲ್ಲಿ ಖಜಾಂಚಿ ಶಂಕರ್ ಅವರ ಸಮ್ಮುಖದಲ್ಲಿ ದೇವಾಲಯವನ್ನು ಇಲಾಖೆ ತನ್ನ ವಶಕ್ಕೆ ಪಡೆದುಕೊಂಡಿದೆ.
ದೇವಾಲಯದ ಎರಡು ಕೊಠಡಿಗಳಲ್ಲಿದ್ದ ಬೆಳ್ಳಿ ಆಭರಣಗಳನ್ನು ಹಾಗೂ ಇತರೆ ವಸ್ತುಗಳನ್ನು ಎರಡು ದಿನಗಳಲ್ಲಿ ಪರಿಶೀಲಿಸಿ ವಶಕ್ಕೆ ಪಡೆಯಲಾಗುವುದು ಎಂದು ಮುಜರಾಯಿ ಇಲಾಖೆಯ ಬೆಂಗಳೂರು ನಗರ ಜಿಲ್ಲೆ ವಿಶೇಷ ಜಿಲ್ಲಾಧಿಕಾರಿ ಶೈಲಜಾ ಹೇಳಿದ್ದಾರೆ.[ಮುಜರಾಯಿ ಖಾತೆ ಸಿಎಂ ಸಿದ್ದರಾಮಯ್ಯ ಕೈಗೆ]
ಮಾರುತಿ ದೇವಸ್ಥಾನವು ಮುಜರಾಯಿ ಇಲಾಖೆಗೆ ಸೇರ್ಪಡೆಗೊಂಡಿದ್ದರೂ ಪೂಜೆ, ಅಲಂಕಾರ ಹಾಗೂ ಸೇವೆಗಳು ಎಂದಿನಂತೆ ಸಾಗುತ್ತವೆ. ಅರ್ಚಕರು, ಸಿಬ್ಬಂದಿ ಎಲ್ಲರೂ ಯಥಾಸ್ಥಿತಿಯಲ್ಲೇ ಮುಂದುವರಿಯುತ್ತಾರೆ.