ಸಾವಿನ ಬಳಿಕ ಮತ್ತೊಂದು ಜೀವಕ್ಕೆ ಚೇತನ ತುಂಬಿದ ಚೇತನ್
ಬೆಂಗಳೂರು, ಜುಲೈ 23 : ಉದ್ಯಾನ ನಗರಿ ಬೆಂಗಳೂರು ಗುರುವಾರ ಮತ್ತೊಂದು ಜೀವಂತ ಹೃದಯ ಸಾಗಣೆಗೆ ಸಾಕ್ಷಿಯಾಯಿತು. ಅಪಘಾತದಲ್ಲಿ ಗಾಯಗೊಂಡಿದ್ದ 22 ವರ್ಷದ ಚೇತನ್ ಹೃದಯವನ್ನು ದಾನ ಮಾಡಿ ಮೊತ್ತೊಬ್ಬರ ಜೀವವನ್ನು ಉಳಿಸಿದ್ದಾರೆ. ಬೆಂಗಳೂರು ಸಂಚಾರಿ ಪೊಲೀಸರು ಜೀವಂತ ಹೃದಯ ಸಾಗಣೆಗೆ ಸಹಕಾರ ನೀಡಿದ್ದಾರೆ.
ಗುರುವಾರ ಬೆಳಗ್ಗೆ 8.30ರಿಂದ 9.30ರ ನಡುವೆ ಬನ್ನೇರುಘಟ್ಟ ರಸ್ತೆಯ ಸಾಗರ್ ಆಸ್ಪತ್ರೆಯಿಂದ ಹೊಸೂರು ರಸ್ತೆಯಲ್ಲಿರುವ ನಾರಾಯಣ ಹೃದಯಾಲಯಕ್ಕೆ ಜೀವಂತ ಹೃದಯ ತೆಗೆದುಕೊಂಡು ಹೋಗಲಾಯಿತು. [ಮಡಿದ ಜೀವನ್ ಫರ್ನಾಂಡೀಸ್ ಆತ್ಮ ಅಮರ]

ಬೆಂಗಳೂರು ಸಂಚಾರಿ ಪೊಲೀಸರು ಗ್ರೀನ್ ಕಾರಿಡಾರ್ ಮೂಲಕ ಹೃದಯ ತೆಗೆದುಕೊಂಡು ಹೋಗಲು ಸಿಗ್ನಲ್ ಫ್ರೀ ವ್ಯವಸ್ಥೆ ಮಾಡಿದ್ದರು. ಪಿ.ಗೋಪಾಲನ್ ಎನ್ನುವವರು ಸಾಗರ್ ಆಸ್ಪತ್ರೆಯಿಂದ ಜೀವಂತ ಹೃದಯ ಹೊತ್ತ ಆಂಬ್ಯುಲೆನ್ಸ್ಅನ್ನು ಸುಮಾರು 20 ನಿಮಿಷದಲ್ಲಿ ನಾರಾಯಣ ಹೃದಯಾಲಯಕ್ಕೆ ತೆಗೆದುಕೊಂಡು ಹೋದರು. [ಕುಡ್ಲದಲ್ಲಿ ಮಿಡಿದ ಜೀವಂತ ಹೃದಯ ಬೆಂಗಳೂರಿಗೆ]
ಹೃದಯದಾನ ಮಾಡಿದ ಚೇತನ್ : ಮಂಡ್ಯ ಮೂಲದ 22 ವರ್ಷದ ಚೇತನ್ ಹೃದಯವನ್ನು ದಾನ ಮಾಡಿ ಮತ್ತೊಬ್ಬರ ಜೀವವನ್ನು ಉಳಿಸಿದ್ದಾರೆ. ಬೆಂಗಳೂರು ಹೊರವಲಯದ ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಚೇತನ್ ಕೆಲಸ ಮಾಡುತ್ತಿದ್ದರು. ಜುಲೈ 15ರಂದು ಕೆಲಸ ಮಾಡುವಾಗ ಯಂತ್ರಗಳ ನಡುವೆ ಸಿಲುಕಿ ಚೇತನ್ ಗಾಯಗೊಂಡಿದ್ದರು.
ಎರಡು ದಿನಗಳ ನಂತರ ಅವರು ಮೆದುಳು ನಿಷ್ಕ್ರಿಯವಾಗಿದೆ ಎಂದು ವೈದ್ಯರು ಘೋಷಿದರು. 2014ರಲ್ಲಿ ಬೆಂಗಳೂರಿನಿಂದ ಚೆನ್ನೈಗೆ ಜೀವಂತ ಹೃದಯ ಸಾಗಣೆ ಮಾಡಿದ್ದನ್ನು ಕೇಳಿದ್ದ ಚೇತನ್ ತಂದೆ ರಾಮಣ್ಣ ಅವರು ಮಗನ ಹೃದಯವನ್ನು ದಾನ ಮಾಡಲು ಒಪ್ಪಿಗೆ ನೀಡಿದ್ದರು. ಅದರಂತೆ ಇಂದು ಬೆಳಗ್ಗೆ ಬೆಂಗಳೂರು ಸಂಚಾರಿ ಪೊಲೀಸರ ನೆರವಿನೊಂದಿಗೆ ಜೀವಂತ ಹೃದಯ ಸಾಗಣೆ ಮಾಡಲಾಗಿದೆ.
ಬೆಂಗಳೂರಿನಲ್ಲಿ ಜೀವಂತ ಹೃದಯ ಸಾಗಣೆ ಇದು ಹೊಸದೇನಲ್ಲ ಈಗಾಗಲೇ ಹಲವಾರು ಬಾರಿ ಇಂತಹ ಪ್ರಯತ್ನಗಳು ಯಶಸ್ವಿಯಾಗಿ ನಡೆದಿವೆ.
* 2014ರಲ್ಲಿ ಎರಡು ಬಾರಿ ಬೆಂಗಳೂರಿನಿಂದ ಚೆನ್ನೈಗೆ ಜೀವಂತ ಹೃದಯವನ್ನು ಸಾಗಣೆ ಮಾಡಲಾಗಿತ್ತು.
* 2015ರ ಜನವರಿಯಲ್ಲಿ ಎಂಎಸ್ ರಾಮಯ್ಯ ಆಸ್ಪತ್ರೆಯಿಂದ ಬಿಜಿಎಸ್ ಆಸ್ಪತ್ರೆಗೆ ಹೃದಯ ಸಾಗಣೆ ಮಾಡಲಾಗಿತ್ತು.
* 2015 ಫೆ. 28ರಂದು ಬೆಂಗಳೂರಿನಿಂದ ಹೈದರಾಬಾದ್ ಜೀವಂತ ಹೃದಯವನ್ನು ಸಾಗಣೆ ಮಾಡಲಾಗಿತ್ತು
* 2015 ಏ.13ರಂದು ಮಂಗಳೂರಿನಿಂದ ಜೀವಂತ ಹೃದಯವನ್ನು ಬಿಜಿಎಸ್ ಆಸ್ಪತ್ರೆಗೆ ತೆಗೆದುಕೊಂಡು ಬರಲಾಗಿತ್ತು.












Click it and Unblock the Notifications