ಬೆಂಗಳೂರು ಗಲಭೆ; ಜೆಡಿಎಸ್ ನಾಯಕನ ಬಂಧನ
ಬೆಂಗಳೂರು, ಆಗಸ್ಟ್ 17 : ಬೆಂಗಳೂರಿನಲ್ಲಿ ನಡೆದ ಗಲಭೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಜೆಡಿಎಸ್ ನಾಯಕನನ್ನು ಬಂಧಿಸಿದ್ದಾರೆ. ಇದುವರೆಗೂ ಬಂಧಿತರಾದವರ ಸಂಖ್ಯೆ 310ಕ್ಕೆ ಏರಿಕೆಯಾಗಿದೆ.
ಕೆ. ಎಂ. ಅಬ್ದುಲ್ ವಾಜಿದ್ ಪಾಶಾರನ್ನು ಪೊಲೀಸರು ಬಂಧಿಸಿದ್ದಾರೆ. ಅಬ್ದುಲ್ ವಾಜಿದ್ ಪಾಶಾ ಪುಲಿಕೇಶಿ ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಮತ್ತು ಕರ್ನಾಟಕ ಟಿಪ್ಪು ಟೈಗರ್ ಅಲ್ಫತ್ ಟ್ರಸ್ಟ್ ಅಧ್ಯಕ್ಷ.
ಕೆಲವು ದಿನಗಳ ಹಿಂದೆ 'ಶಾಸಕ ಅಖಂಡ ಶ್ರೀನಿವಾಸಮೂರ್ತಿ ಕಾಣೆಯಾಗಿದ್ದಾರೆ' ಎಂದು ಫೇಸ್ಬುಕ್ ಫೋಸ್ಟ್ ಅನ್ನು ಕೆ. ಎಂ. ಅಬ್ದುಲ್ ವಾಜಿದ್ ಪಾಶಾ ಹಾಕಿದ್ದರು. ಅಖಂಡ ಶ್ರೀನಿವಾಸಮೂರ್ತಿ ಬೆಂಬಲಿಗರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದರು.
ಪೊಲೀಸರು ಇಬ್ಬರನ್ನೂ ಕರೆಸಿ ಠಾಣೆಯಲ್ಲಿಯೇ ರಾಜಿ ಮಾಡಿಸಿ ಕಳಿಸಿದ್ದರು. ಈಗ ಗಲಭೆ ನಡೆದ ಬಳಿಕ ಭಾನುವಾರ ರಾತ್ರಿ ಕೆ. ಎಂ. ಅಬ್ದುಲ್ ವಾಜಿದ್ ಪಾಶಾರನ್ನು ಪೊಲೀಸರು ಬಂಧಿಸಿದ್ದಾರೆ.

ನವೀನ್ ಪೊಲೀಸ್ ಕಸ್ಟಡಿ ಅಂತ್ಯ
ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸೋದರಳಿಯ ನವೀನ್ ಒಂದು ಸಮುದಾಯದ ವಿರುದ್ಧ ಫೇಸ್ ಬುಕ್ ಪೋಸ್ಟ್ ಹಾಕಿದ್ದಾರೆ ಎಂದು ಆರೋಪಿಸಿ ಆರಂಭವಾದ ಗಲಭೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. ನವೀನ್ ಪೊಲೀಸ್ ಕಸ್ಟಡಿ ಇಂದು ಅಂತ್ಯವಾಗಲಿದೆ. ಸಿಸಿಬಿ ಪೊಲೀಸರು ವಿಡಿಯೋ ಕಾನ್ಪರೆನ್ಸ್ ಮೂಲಕ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ.

310 ಜನರು ಬಂಧನ, 52 ಎಫ್ಐಆರ್
ಕಾವಲ್ ಭೈರಸಂದ್ರ, ಡಿ. ಜೆ. ಹಳ್ಳಿ, ಕೆ. ಜಿ. ಹಳ್ಳಿ ಪ್ರದೇಶಗಳಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ 310 ಜನರನ್ನೂ ಇದುವರೆಗೂ ಬಂಧಿಸಲಾಗಿದೆ. 52 ಎಫ್ಐಆರ್ ದಾಖಲು ಮಾಡಲಾಗಿದೆ. ಸೈಬರ್ ಕ್ರೈಂ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡುತ್ತಿದ್ದು, ಬಂಧಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ನಿಷೇಧಾಜ್ಞೆ ಮುಂದುವರಿಕೆ
ಮಂಗಳವಾರ ರಾತ್ರಿ ಗಲಭೆ ನಡೆದ ಕಾವಲ್ ಭೈರಸಂದ್ರ, ಡಿ. ಜೆ. ಹಳ್ಳಿ, ಕೆ. ಜಿ. ಹಳ್ಳಿ ಪ್ರದೇಶಗಳಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆದರೆ, ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಆಗಸ್ಟ್ 18ರ ತನಕ ನಿಷೇಧಾಜ್ಞೆ ಮುಂದುವರೆಸಿ ಆದೇಶ ಹೊರಡಿಸಿದ್ದಾರೆ.

ವಾಜಿದ್ ಪಾಶಾ ಬಂಧನ ಏಕೆ?
ಅಖಂಡ ಶ್ರೀನಿವಾಸಮೂರ್ತಿ ಮತ್ತು ನವೀನ್ ವಿರುದ್ಧ ಆಗಾಗ ಕೆ. ಎಂ. ಅಬ್ದುಲ್ ವಾಜಿದ್ ಪಾಶಾ ಅಸಮಾಧಾನ ವ್ಯಕ್ತಪಡಿಸುತ್ತಿದ್ದ. ನವೀನ್ ವಿರುದ್ಧ ದೂರು ನೀಡಿದ ತಂಡದಲ್ಲಿಯೂ ವಾಜಿದ್ ಇದ್ದ. ನವೀನ್ ಬಂಧಿಸಲು ಪೊಲೀಸರು ಎರಡು ಗಂಟೆ ಸಮಯ ಕೇಳಿದ್ದಾಗ ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿದ್ದ.












Click it and Unblock the Notifications