ಉಬರ್ ಕಂಪನಿಗೆ ಟ್ರಾಫಿಕ್ ಕಮೀಷನರ್ ಖಡಕ್ ಎಚ್ಚರಿಕೆ
ಶುಕ್ರವಾರದೊಳಗೆ ರೈಡ್- ಶೇರಿಂಗ್ ಸೇವೆ ನಿಲ್ಲಿಸದಿದ್ದಲ್ಲಿ ಉಗ್ರ ಕ್ರಮ ಎಂದಿರುವ ಟ್ರಾಫಿಕ್ ಕಮೀಷನರ್ ಎಂ.ಕೆ. ಅಯ್ಯಪ್ಪ
ಬೆಂಗಳೂರು, ಫೆಬ್ರವರಿ 3: ತನ್ನ ರೈಡ್ -ಶೇರಿಂಗ್ ಸೇವೆಯನ್ನು ಸ್ಥಗಿತಗೊಳಿಸುವ ನಿಟ್ಟಿನಲ್ಲಿ ಹಿಂದೇಟು ಹಾಕುತ್ತಿರುವ ಉಬರ್ ಟ್ಯಾಕ್ಸಿ ಸೇವಾ ಸಂಸ್ಥೆಗೆ ಬೆಂಗಳೂರು ಟ್ರಾಫಿಕ್ ಕಮೀಷನರ್ ಎಂ.ಕೆ. ಅಯ್ಯಪ್ಪ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಉಬರ್ ಸಂಸ್ಥೆಯು ಉಬರ್ ಪೂಲ್ ಎಂಬ ರೈಡ್- ಶೇರಿಂಗ್ ವ್ಯವಸ್ಥೆಯನ್ನು ನೀಡುತ್ತಿದೆ.
ಇತ್ತೀಚೆಗಷ್ಟೇ, ಶೇರಿಂಗ್ ಅಥವಾ ಪೂಲ್ ರೈಡ್- ಶೇರಿಂಗ್ ಸೇವೆಯನ್ನು ಅಂತ್ಯಗೊಳಿಸಲು ಸರ್ಕಾರ ಸೂಚನೆ ನೀಡಿತ್ತು. ಅದರಂತೆ, ಶುಕ್ರವಾರ (ಫೆಬ್ರವರಿ 3) ಈ ಸೇವೆಗಳನ್ನು ನಿಲ್ಲಿಸಲು ಗಡುವು ವಿಧಿಸಲಾಗಿದೆ.
ಆದರೆ, ಪೊಲೀಸರ ಈ ಸೂಚನೆಗೆ ಉಬರ್ ಕ್ಯಾಬ್ ಸೇವಾ ಸಂಸ್ಥೆ ಆಕ್ಷೇಪ ವ್ಯಕ್ತಪಡಿಸಿದೆ. ಆ ಕಂಪನಿಯ ವ್ಯವಸ್ಥಾಪಕರಾದ ಕ್ರಿಶ್ಚಿಯನ್ ಫ್ರೀಸ್ ಅವರು ಮಾತನಾಡಿ, ''ಉಬರ್ ಪೂಲ್ ಸೇವೆಯು ಕಾನೂನು ಬದ್ಧವಾಗಿದೆಯೆಂಬ ನಂಬಿಕೆ ನಮ್ಮದಾಗಿದೆ. ಹಾಗಾಗಿ, ಅದನ್ನು ನಿಲ್ಲಿಸಲಾರೆವು'' ಎಂದು ತಿಳಿಸಿದ್ದಾರೆ.
ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಅಯ್ಯಪ್ಪ, ''ಸೇವೆಯು ಕಾನೂನುಬದ್ಧವಲ್ಲ ಎಂದು ಸರ್ಕಾರ ಹೇಳುತ್ತಿಲ್ಲ. ಕೆಲವಾರು ಕಾರಣಗಳಿಂದಾಗಿ ಸೇವೆಯನ್ನು ನಿಲ್ಲಿಸುವಂತೆ ಸೂಚಿಸಲಾಗಿದೆ. ಇದನ್ನು ಶುಕ್ರವಾರದೊಳಗೆ ಮಾನ್ಯ ಮಾಡದ ಟ್ಯಾಕ್ಸಿ ಸೇವಾ ಕಂಪನಿಗಳ ಉಗ್ರ ಕ್ರಮ ಕೈಗೊಳ್ಳಲಾಗುತ್ತದೆ'' ಎಂದು ಎಚ್ಚರಿಸಿದ್ದಾರೆ.
ಏತನ್ಮಧ್ಯೆ, ಆನ್ ಲೈನ್ ಮೂಲಕ ತನ್ನ ಉಬರ್ ಪೂಲ್ ಸೇವೆಯ ಬೆಂಬಲಕ್ಕಾಗಿ ಜನರಿಂದ ಸಹಿ ಸ್ವೀಕರಿಸುವ ಅಭಿಯಾನ ಆರಂಭಿಸಿದೆ.