ಶಿವರಾತ್ರಿಗೆ ದೇಗುಲಗಳು ಸಿದ್ಧ: ಅಷ್ಟಮುಖಿ ಪಶುಪತಿನಾಥ ಶಿವಲಿಂಗ ದರ್ಶನ!
ಬೆಂಗಳೂರು, ಫೆಬ್ರವರಿ 12 : ನಗರದ ಎಲ್ಲಾ ಶಿವಾಲಯಗಳು ಮಂಗಳವಾರ (ಫೆ.13)ರಂದು ನಡೆಯುವ ಶಿವರಾತ್ರಿ ಆಚರಣೆಗೆ ಸಿದ್ಧವಾಗುತ್ತಿದೆ. ಅಂದು ಶಿವರಾತ್ರಿ ಉಪವಾಸ, ಜಾಗರಣೆ ಮಾಡಿ ಶಿವ ಸ್ಮರಣೆ ಮಾಡಲು ಭಕ್ತರು ಕೂಡ ಸಜ್ಜಾಗಿದ್ದಾರೆ.
ನಗರದ ಕಾಡುಮಲ್ಲೇಶ್ವರ ಮಲ್ಲಿಕಾರ್ಜುನ ಸ್ವಾಮಿ ದೇವಾಲಯ, ಗವಿಪುರಂನ ಗವಿಗಂಗಾಧರೇಶ್ವರ ದೇವಾಲಯ, ಗುಟ್ಟಹಳ್ಳಿ ಪಂಚಲಿಂಗೇಶ್ವರ ಸ್ವಾಮಿ ದೇವಾಲಯ, ಹಲಸೂರು ಸೋಮೇಶ್ವರ, ಮುರುಗೇಶಪಾಳ್ಯ ಸೇರಿದಂತೆ ಅನೇಕ ಶಿವ ದೇವಾಲಯಗಳು ಹಾಗೂ ವಿವಿಧ ದೇವಾಲಯಗಳಲ್ಲಿ ಶಿವರಾತ್ರಿ ಸಿದ್ಧತೆ ಪೂರ್ಣಗೊಂಡಿದೆ.
ಶಿವನಿಗೆ ವಿಶೇಷ ಪೂಜೆ: ಅಂದು ಎಲ್ಲಾ ಶಿವ ದೇವಾಲಯಗಳಲ್ಲಿ ಶಿವಲಿಂಗ ಮೂರ್ತಿಗೆ ವಿವಿಧ ಪೂಜೆ, ಅಭಿಷೇಕ, ರುದ್ರಾಭಿಷೇಕ, ಶಿವನಿಗೆ ಬಿಲ್ವಪತ್ರೆ ಅರ್ಪಿಸುವ ಪೂಜೆ, ಮಹಾಮಂಗಳಾರತಿ, ಶಿವಸಹಸ್ರನಾಮ ಪಠಣ, ಸಂಕೀರ್ತನೆ, ಪುರಾಣ ಪಠಣ, ವೇದಾಂತ ಉಪನ್ಯಾಸ, ಸಂಗೀತೋತ್ಸವ ಮತ್ತು ಅಹೋರಾತ್ರಿ ಶಿವನಾಮ ಜಪ ಜರುಗಲಿದೆ. ಶಿವನ ಆರಾಧಕರು ಜಾಗರಣೆ ನಡೆಸಲು ವಿವಿಧ ದೇವಸ್ಥಾನಗಳಲ್ಲಿ ಪ್ರತ್ಯೇಕವಾಗಿ ವ್ಯವಸ್ಥೆ ಮಾಡಲಾಗಿದೆ.

ಕಾಡು ಮಲ್ಲೇಶ್ವರ ದೇವಾಲಯ: ಮಲ್ಲೇಶ್ವರದಲ್ಲಿರುವ ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿಯಂದು ಮುಂಜಾನೆ ೪ಕ್ಕೆ ರುದ್ರಾಭಿಷೇಕ ಜರುಗಳಿದೆ.5.30 ಕ್ಕೆ ಮಹಾ ಮಂಗಳಾರತಿ ನಂತರ 24 ಗಂಟೆಗಳ ಕಾಲ ನಿರಂತರವಾಗಿ ಜಲಾಭಿಷೇಕ ನೆರವೇರಲಿದೆ. ಅಂದು ರಾತ್ರಿ 10.30ಕ್ಕೆ ಗಿರಿಜಾ ಕಲ್ಯಾಣೋತ್ಸವ ಹಾಗೂ ರುದ್ರ ಪಾರಾಯಣ ನಡೆಯಲಿದೆ.
ಗವಿಪುರಂ ದೇವಾಲಯ: ಐತಿಹಾಸಿಕ ದೇವಸ್ಥಾನದಲ್ಲಿ ಬೆಳಗ್ಗೆ 6 ರಿಂದ ಮರುದಿನ ಬೆಳಗ್ಗೆ 4 ರವರೆಗೆ ಸತತವಾಗಿ ಶಿವಲಿಂಗಕ್ಕೆ ಅಭಿಷೇಕ, ವಿಶೇಷ ಅಲಂಕಾರ ನೆರವೇರಲಿದೆ. ಅಂದು ಲಕ್ಷಾಂತರ ಭಕ್ತಾಧಿಗಳಿಗೆ ದೇವರ ದರ್ಶನಕ್ಕೆ ಅನುವಾಗುವಂತೆ ದೇವಸ್ಥಾನದ ದಕಷಿಣ ಸಾಲಿನಲ್ಲಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ.
ವಾಸವಿ ದೇವಸ್ಥಾನ: ದೇಶದ 13 ನೇ ಜ್ಯೋತಿರ್ಲಿಂಗವೆಂದು ಪ್ರಸಿದ್ಧಿಯಾಗಿರುವ ಮಧ್ಯಪ್ರದೇಶದ ಮಂದಸೌರ್ ನಗರದ ಅಷ್ಟಮುಖಿ ಪಶುಪತಿನಾಥ ಶಿವಲಿಂಗದ ವಿಶೇಷ ದರ್ಶನವನ್ನು ವಿಜಯನಗರ ಆರ್ಯವೈಶ್ಯ ಮಂಡಳಿ ಕಲ್ಪಿಸಿದೆ. ಫೆ.13 ರಿಂದ15 ರವರೆಗೆ ಭಕ್ತಾದಿಗಳ ದರ್ಶನಕ್ಕೆ ಲಭ್ಯವಿರಲಿದೆ.











Click it and Unblock the Notifications