ನವೆಂಬರ್ 17ರಿಂದ ಮೂರು ದಿನ ಬೆಂಗಳೂರು ಟೆಕ್ ಸಮ್ಮಿಟ್: ಕಾರ್ಯಕ್ರಮದ ವಿವರ
ಬೆಂಗಳೂರು, ನವೆಂಬರ್ 9: ರಾಜ್ಯ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ- ಬಿಟಿ ಮತ್ತು ಎಸ್ ಅಂಡ್ ಟಿ ಇಲಾಖೆ ಹಾಗೂ ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರು ನಗರದಲ್ಲಿ ನವೆಂಬರ್ 17ರಿಂದ 19 ರವರೆಗೆ ಬೆಂಗಳೂರು ತಾಂತ್ರಿಕ ಸಭೆ ಆಯೋಜಿಸಲಾಗಿದೆ.
ಬೆಂಗಳೂರು ಟೆಕ್ ಸಮಾವೇಶ ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದ್ದು, ನಗರದ ಖಾಸಗಿ ಹೋಟೆಲ್ನಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡುರನ್ನು ಆಹ್ವಾನಿಸಲಾಗಿದೆ. ಅವರೇ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಕಾರ್ಯಕ್ರಮದಲ್ಲಿ 30ಕ್ಕೂ ಹೆಚ್ಚು ದೇಶಗಳು ಭಾಗವಹಿಸುವ ಸಾಧ್ಯತೆ ಇದ್ದು, ಕೇವಲ ಟೆಕ್ ಸಂಸ್ಥೆಗಳಲ್ಲದೇ, ಸ್ಟಾರ್ಟ್ಅಪ್ ಹಾಗೂ ಬಯೋ ಟೆಕ್ನಾಲಜಿ ಕಂಪನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿವೆ. ಬಿಟಿಎಸ್ 2021 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥೆ ಸೌಮ್ಯ ಸ್ವಾಮಿನಾಥಾನ್ ಮಾತನಾಡಲಿದ್ದಾರೆ ಎಂದು ಮಾಹಿತಿ ನೀಡಲಾಗಿದೆ.
ಭಾರತ- ಅಮೆರಿಕ ರಾಷ್ಟ್ರಗಳ ಪ್ರತ್ಯೇಕ ಸಮಾವೇಶ ನಡೆಯಲಿದ್ದು, ಐಟಿ, ಬಿಟಿ ಹಾಗೂ ಸ್ಟಾರ್ಟಪ್ಗಳ ಕುರಿತು ಪಶ್ಚಿಮ, ಉತ್ತರ, ಮಧ್ಯ ಅಮೆರಿಕ ಪ್ರಾಂತ್ಯ- ಭಾರತದ ಸಮನ್ವಯತೆ ಹಾಗೂ ನೂತನ ಅವಕಾಶಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಹೇಳಲಾಗಿದೆ.
ನೊಬೆಲ್ ಪ್ರಶಸ್ತಿ ವಿಜೇತ ಡಾ. ವೆಂಕಟ್ ರಾಮನ್, ರಾಮಾಕೃಷ್ಣನ್, ಮೈಕ್ರೋಸಾಫ್ಟ್ ಅಧ್ಯಕ್ಷ ಅನಂತ್ ಮಹೇಶ್ವರಿ, ಆ್ಯಪಲ್ ಸಂಸ್ಥೆಯ ಉಪಾಧ್ಯಕ್ಷೆ ಪ್ರಿಯ ಬಾಲಾಸುಬ್ರಮಣ್ಯಂ, ಭಾರತದ ಲೇಖಕ ಚೇತನ್ ಭಗತ್ ಸೇರಿದಂತೆ ಹಲವು ಗಣ್ಯರು ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.

ಈ ಕಾರ್ಯಕ್ರಮದ ಕುರಿತು ಖಾಸಗಿ ಹೋಟೆಲ್ನಲ್ಲಿ ಮಂಗಳವಾರ (ನವೆಂಬರ್ 9) ನಡೆದ ಪತ್ರಿಕಾಗೋಷ್ಠಿಯಲ್ಲಿ ಐಟಿ- ಬಿಟಿ ಸಚಿವ ಅಶ್ವಥ್ ನಾರಾಯಣ, ಇನ್ಪೋಸಿಸ್ ಸಹ ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣ, ಬಯೋಕಾನ್ ಸಂಸ್ಥಾಪಕಿ ಕಿರಣ್ ಮಝುಂದಾರ್ ಷಾ, ಬಿಗ್ ಬಾಸ್ಕೆಟ್ ಹೂಡಿಕೆದಾರ ಗಣೇಶ್ ಕೃಷ್ಣನ್, ಐಟಿ- ಬಿಟಿ ಇಲಾಖೆ ಕಾರ್ಯದರ್ಶಿ ಇ.ವಿ. ರಮಣ್ ರೆಡ್ಡಿ ಭಾಗಿಯಾಗಿದ್ದರು.
ನ.11ರಿಂದ 14ರವರೆಗೆ ಬೆಂಗಳೂರಿನಲ್ಲಿ ಕೃಷಿ ಮೇಳ
ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ನೇತೃತ್ವದಲ್ಲಿ ನ.11ರಿಂದ 14ರವರೆಗೆ ಹೆಬ್ಬಾಳದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ)ದಲ್ಲಿ ಕೃಷಿ ಮೇಳ 2021 ಆಯೋಜಿಸಲಾಗಿದೆ.
ಕೃಷಿ, ತೋಟಗಾರಿಕೆ, ರೇಷ್ಮೆ, ಜಲಾನಯನ ಅಭಿವೃದ್ಧಿ, ಅರಣ್ಯ, ಪಶುಸಂಗೋಪನೆ ಮೀನುಗಾರಿಕೆ, ಕೃಷಿ ಮಾರುಕಟ್ಟೆ, ಗ್ರಾಮೀಣಾಭಿವೃದ್ಧಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನಡೆಯುವ ಈ ಕೃಷಿ ಮೇಳದಲ್ಲಿ ರೈತರ ಆದಾಯ ದ್ವಿಗುಣಗೊಳಿಸುವಿಕೆಗೆ ಕೃಷಿ ತಾಂತ್ರಿಕತೆಗಳು ಪ್ರಮುಖ ವಿಷಯವಾಗಿದೆ.
ಈ ಕೃಷಿ ಮೇಳದಲ್ಲಿ 10 ಹೊಸ ತಳಿಗಳು ಹಾಗೂ 28 ತಂತ್ರಜ್ಞಾನಗಳ ಬಿಡುಗಡೆ ಮಾಡಲಾಗುತ್ತದೆ. ಕೃಷಿ ಸಾಧಕರಿಗೆ ಪುರಸ್ಕಾರ ಮಾಡಲಾಗುತ್ತದೆ. ಕೃಷಿ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆಗಳು ಇರುತ್ತವೆ. ರೈತರಿಂದ ರೈತರಿಗಾಗಿ ಚರ್ಚಾಗೋಷ್ಠಿ, ತೋಟಗಾರಿಕೆ ಬೆಳೆಗಳ ಮತ್ತು ನಿಖರ ಕೃಷಿ ಪ್ರಾತ್ಯಕ್ಷಿಕೆ, ಸಾವಯವ ಕೃಷಿ ಪದ್ಧತಿಗಳು, ಸುಧಾರಿತ ಕೃಷಿ ಯಂತ್ರೋಪಕರಣಗಳ ಪ್ರದರ್ಶನ, ಕೃಷಿ ಪರಿಕರಗಳ ಹಾಗೂ ಪ್ರಕಟಣೆಗಳ ಮಾರಾಟ ವ್ಯವಸ್ಥೆ ಇತ್ಯಾದಿಗಳು ಇರುತ್ತವೆ.
ಕೃಷಿ ಮೇಳದಲ್ಲಿ 450ಕ್ಕೂ ಅಧಿಕ ಮಳಿಗೆಗಳು ಇರುತ್ತವೆ. ನಾಲ್ಕು ದಿನಗಳ ಕಾಲ ನಡೆಯುವ ಈ ಮೇಳದಲ್ಲಿ ನಿತ್ಯ 10-15 ಸಾವಿರ ಮಂದಿ ಭೇಟಿ ನೀಡುವ ನಿರೀಕ್ಷೆ ಇದೆ. ಮೇಕೆ, ಹೋತ, ಹೋರಿಗಳ ಪ್ರದರ್ಶನವೂ ಇರುತ್ತದೆ. ರೈತರ ಕೃಷಿ ಸಮಸ್ಯೆಗಳಿಗೆ ಭೌತಿಕವಾಗಿ ಹಾಗೂ ಝೂಮ್ ಸಭೆಯ ಮೂಲಕ ತಜ್ಞರಿಂದ ವೈಜ್ಞಾನಿಕ ಸಲಹೆ ನೀಡಲಾಗುತ್ತದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್. ರಾಜೇಂದ್ರ ಪ್ರಸಾದ್ ತಿಳಿಸಿದ್ದಾರೆ.