ಸಂಸದ ತೇಜಸ್ವಿ ಸೂರ್ಯ ನಡೆಗೆ ಭಾರೀ ವಿರೋಧ: ಹಣಕೊಟ್ಟು ಲಸಿಕೆ ನೀಡುವ ಕಾರ್ಯಕ್ರಮ ರದ್ದು
ಬೆಂಗಳೂರು, ಮೇ 27: ಒಂದೆಡೆ ಕರ್ನಾಟಕದಲ್ಲಿ ಸರ್ಕಾರ ನಡೆಸುವ ಲಸಿಕಾ ಕಾರ್ಯಕ್ರಮಕ್ಕೆ ಲಸಿಕೆ ಕೊರತೆಯಿಂದಾಗಿ ಹಿನ್ನಡೆಯಾಗಿದೆ. ಇಂತಾ ಸಂದರ್ಭದಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಖಾಸಗಿ ಆಸ್ಪತ್ರೆಯ ಪರವಾಗಿ ಹಣ ಕೊಟ್ಟು ನಡೆಸುವ ಲಸಿಕಾ ಕಾರ್ಯಕ್ರಮಕ್ಕೆ ಪ್ರಚಾರ ನಡೆಸಿದ್ದರು. ಯುವ ಸಂಸದರ ಈ ನಡೆಗೆ ತೀವ್ರ ಟೀಕೆಗಳು ವ್ಯಕ್ತವಾಗಿತ್ತು. ಇದೀಗ ಈ ಖಾಸಗಿ ಆಸ್ಪತ್ರೆಯ ಹಣಕೊಟ್ಟು ನೀಡುವ ಲಸಿಕಾ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಲಭ್ಯವಿಲ್ಲದಿದ್ದಾಗ ತೇಜಸ್ವಿ ಸೂರ್ಯ ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆ ಪಡೆದುಕೊಳ್ಳುವ ಪ್ರಚಾರದಲ್ಲಿ ಭಾಗಿಯಾಗಿದ್ದರು. ಇದಕ್ಕೆ ನಗರದ ನಿವಾಸಿಗಳು ಹಾಗೂ ವಿವಿಧ ಕ್ಷೇತ್ರಗಳ ಪ್ರಮುಖರಿಂದ ಸಾಕಷ್ಟು ಟೀಕೆಗಳು ವ್ಯಕ್ತವಾಗಿತ್ತು. ಈ ಸಂದರ್ಭದಲ್ಲಿ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರದ ಮೇಲೆಯೂ ಆಕ್ರೋಶಗಳು ವ್ಯಕ್ತವಾಗತೊಡಗಿತ್ತು. ರಾಜ್ಯ ಸರ್ಕಾರ ಸಾರ್ವಜನಿಕ ಆಸ್ಪತ್ರೆಗಳಿಗೆ ವಾಕ್ಸಿನ್ ಲಭ್ಯವಾಗುವಂತೆ ಮಾಡಲು ವಿಫಲವಾದ ಕಾರಣ ಖಾಸಗಿ ಆಸ್ಪತ್ರೆಗಳು ಮೇಲುಗೈ ಸಾಧಿಸಲು ಅವಕಾಶ ಮಾಡಿಕೊಟ್ಟಿದೆ ಎಂಬ ಟೀಕೆಗಳು ಕೇಳಿಬಂದಿತ್ತು.
ಈ ಹಣಕೊಟ್ಟು ಲಸಿಕೆ ಹಾಕಿಸಿಕೊಳ್ಳುವ ಕಾರ್ಯಕ್ರಮ ರದ್ದುಗೊಳಿಸಿರುವುದನ್ನು ಸಂಸದ ತೇಜಸ್ವಿ ಸೂರ್ಯ ಅವರ ಕಛೇರಿಯ ಟ್ವಿಟ್ಟರ್ ಖಾತೆಯಿಂದ ಮಾಹಿತಿ ನೀಡಲಾಗಿದೆ. "ದಯವಿಟ್ಟು ಗಮನಿಸಿ, ಶಾಲಿನಿ ಅಂಗಳದಲ್ಲಿ ಇಂದು ಲಸಿಕಾ ಕಾರ್ಯಕ್ರಮ ಇರುವುದಿಲ್ಲ" ಎಂದು ಹೇಳುವ ಮೂಲಕ ಗುರುವಾರ ನಡೆಯಬೇಕಿದ್ದ ಈ ಲಸಿಕಾ ಕಾರ್ಯಕ್ರಮ ರದ್ದುಗೊಳಿಸಿರುವುದನ್ನು ಖಚಿತಪಡಿಸಿದೆ.

ದೇಶಾದಲ್ಲಿ ಕೊರೊನಾ ವೈರಸ್ನ ಕೆಟ್ಟ ಪರಿಣಾಮವನ್ನು ಎದುರಿಸುತ್ತಿರುವುದರಲ್ಲಿ ಕರ್ನಾಟಕ ಹಾಗೂ ಬೆಂಗಳೂರು ಕೂಡ ಒಂದಾಗಿದೆ. ಇಂತಾ ಸಂದರ್ಭದಲ್ಲಿ ರಾಜ್ಯದಲ್ಲಿ ಲಸಿಕೆಯ ತೀವ್ರ ಕೊರತೆಗಳು ಉಂಟಾಗುತ್ತಿದೆ. ಸುಮಾರು ಒಂದು ವಾರಗಳಿಂದ ಲಸಿಕೆಯ ಕೊರತೆಯ ಕಾರಣದಿಂದಾಗಿ ಲಸಿಕಾ ಕೇಂದ್ರಗಳಲ್ಲಿ ವಾಕ್ಸಿನ್ ಪಡೆಯಲು ಸಾಧ್ಯವಾಗದೆ ಜನರು ವಾಪಾಸಾಗುತ್ತಿದ್ದಾರೆ. ಹೀಗಾಗಿ ಸಂಸದ ತೇಜಸ್ವಿ ಸೂರ್ಯ ಅವರ ಈ ನಡೆ ವಿವಾದಕ್ಕೆ ಕಾರಣವಾಗಿತ್ತು.
ಈ ಮಧ್ಯೆ ರಾಜ್ಯ ಆರೋಗ್ಯ ಸಚಿವ ಕೆ ಸುಧಾಕರ್ ಕರ್ನಾಟಕ 1.25,000 ಡೋಸ್ ಕೊವಾಕ್ಸಿನ್ ಲಸಿಕೆಯನ್ನು ಕೇಂದ್ರದ ಕೋಟಾ ಅಡಿಯಲ್ಲಿ ಸ್ವೀಕರಿಸಿದೆ ಎಂದು ತಿಳಿಸಿದ್ದಾರೆ. "ಒಟ್ಟಾರೆ ಕೇಂದ್ರದ ಕೋಟಾ ಅಡಿಯಲ್ಲಿ 12,91,280 ಕೊವಾಕ್ಸಿನ್ ಡೋಸ್ಗಳನ್ನು ಕರ್ನಾಟಕ ಸ್ವೀಕರಿಸಿದೆ. 1,44,170 ಡೋಸ್ಗಳನ್ನು ನೇರವಾಗಿ ರಾಜ್ಯ ಸರ್ಕಾರ ಖರೀದಿಸಿದೆ" ಎಂದು ಟ್ವಿಟ್ಟರ್ನಲ್ಲಿ ಮಾಹಿತಿ ನೀಡಿದ್ದಾರೆ.












Click it and Unblock the Notifications