ಬೆಂಗಳೂರಿಗೆ ಈ ಕಾರಣಕ್ಕೆ ವಲಸಿಗರ ಸಂಖ್ಯೆ ಹೆಚ್ಚಳ ಸಾಧ್ಯತೆ: ಕನ್ನಡಿಗರ ಆತಂಕ!
ಬೆಂಗಳೂರು-ಎರ್ನಾಕುಲಂ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ. ಇದರ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಕನ್ನಡಿಗರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಬೆಂಗಳೂರು - ಉತ್ತರ ಕರ್ನಾಟಕದ ನಡುವೆ ರೈಲು ಸಂಪರ್ಕ ಕೊರತೆ ಇದೆ. ಅಲ್ಲದೇ ದಕ್ಷಿಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಬೇಡಿಕೆ ಇದೆ. ಆದರೆ ಇವರು ಮಾತ್ರ ಹೊರ ರಾಜ್ಯಗಳಿಗೆ ಅನುಕೂಲ ಮಾಡಿಕೊಡುವುದರಲ್ಲಿ ನಿರತರಾಗಿದ್ದಾರೆ ಎಂದು ಕನ್ನಡಿಗರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಸಂಸದರಾದ ಪಿ.ಸಿ ಮೋಹನ್ ಹಾಗೂ ತೇಜಸ್ವಿ ಸೂರ್ಯ ಅವರ ಟ್ವೀಟ್ಗೆ ಕನ್ನಡಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. ಹಾಗಾದರೆ ಬೆಂಗಳೂರು-ಎರ್ನಾಕುಲಂ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಆದ್ಯತೆ ಸಿಗುತ್ತದೆ. ಆದರೆ, ಬಹಳ ಅಗತ್ಯವಿರುವ ಬೆಂಗಳೂರು - ಮಂಗಳೂರು ಮಾರ್ಗದ ಜನರಿಗೆ ಈ ಸೌಲಭ್ಯ ಇಲ್ಲ. ನಮ್ಮ ಕರ್ನಾಟಕದ ಸಂಸದರಿಂದ ಅದ್ಭುತ ಕೆಲಸ - ಅವರಿಗೆ ಏನೂ ತಿಳಿದಿಲ್ಲವೋ ಅಥವಾ ಮೂರ್ಖತನವೇ ಎಂದು ನೆಟ್ಟಿಗರೊಬ್ಬರು ತೇಜಸ್ವಿ ಸೂರ್ಯ ಅವರ ಟ್ವೀಟ್ಗೆ ರಿಯಾಕ್ಟ್ ಮಾಡಿದ್ದಾರೆ.

ಬಾಸ್, ಉತ್ತರ ಕರ್ನಾಟಕಕ್ಕೆ ಅದ್ಯಾತೆ ಕೊಡೋದು ಬಿಟ್ಟು. ಮಲೆಯಾಳಿಗಳ ತುಂಬ್ಸಕ್ಕೆ ಕರ್ನಾಟಕದಲ್ಲಿ ಇದು ಬೇಕಿತ್ತಾ ನಿಮಗೆ, ದಯವಿಟ್ಟು ಹೇಳಿ ಇದು ಹೇಗೆ ಬೆಂಗಳೂರಿಗೆ ಹಾಗೂ ಕನ್ನಡಿಗರಿಗೆ ಪ್ರಯೋಜನ ಆಗಲಿದೆ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಕೇರಳದವರು ನಿಮಗೆ (ಬಿಜೆಪಿಗೆ) ವೋಟ್ ಹಾಕುವುದಿಲ್ಲ. ಕರ್ನಾಟಕದವರು ನಿಮಗೆ ವೋಟ್ ಮಾಡಿದ್ದಾರೆ. ಅವರಿಗೆ ಮೊದಲು ಈ ಸೇವೆಗಳನ್ನು ವಿಸ್ತರಿಸಿ ಎಂದು ಕನ್ನಡಿಗರು ಆಗ್ರಹಿಸಿದ್ದಾರೆ.
ಕೇರಳದವರು ಇಲ್ಲಿ ಬಂದು ತಮಗೆ ವೋಟ್ ಹಾಕಲ್ಲ ಬಿಡಿ ಸೂರ್ಯ ಅವರೇ. ಬೀದರ್, ಬಳ್ಳಾರಿ, ಹೊಸಪೇಟೆ, ಗದಗ, ಬಾಗಲಕೋಟೆ, ವಿಜಯಪುರ, ಕೊಪ್ಪಳ ಜಿಲ್ಲೆಗಳಿಗೆ ವಂದೇಭಾರತ್ ಎಕ್ಸ್ಪ್ರೆಸ್ ಮೂಲಕ ಇನ್ನೂ ಸಂಪರ್ಕ ಕಲ್ಪಿಸಲಾಗಿಲ್ಲ. ಜಿಲ್ಲೆಗಳ ಪ್ರತಿನಿಧಿಗಳಿಗೆ ಧನ್ಯವಾದಗಳು ಎಂದು ಮತ್ತೊಬ್ಬ ನೆಟ್ಟಿಗರು ತಿವಿದಿದ್ದಾರೆ.
ಅಲ್ಲ ಗುರು ಇದು ಹೇಗೆ ಕರ್ನಾಟಕ ಜನರಿಗೆ ಉಪಯೋಗ. ಸುಮ್ನೆ ಎಲ್ಲದ್ರಲ್ಲೂ ಹಬ್ಬ. ಮನು ಎನ್ನುವವರು, ಇನ್ನೂ ಎಷ್ಟು ವಲಸಿಗರು ಬೆಂಗಳೂರಿಗೆ ಬರಬೇಕು.. ಕಲ್ಯಾಣ ಕರ್ನಾಟಕ, ಕರಾವಳಿ ಕರ್ನಾಟಕ ಭಾಗಗಳಿಗೆ ಸರಿಯಾದ ರೈಲುಗಳು ಇಲ್ಲ ಅದರ ಕಡೆ ಗಮನಕೊಡಿ ಎಂದಿದ್ದಾರೆ.
ಅಯ್ಯೋ ಎನ್ ಕರ್ಮ, ಕರ್ನಾಟಕದ ಪ್ರಜೆಗಳೇ ದಯವಿಟ್ಟು ಈ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ವೋಟ್ ಹಾಕಬೇಡಿ. ಗೆದ್ದು ಇವರು ಮಾಡೊದು ಬೇರೆ ರಾಜ್ಯಗಳ ಅಭಿವೃದ್ಧಿ. ಏನೂ ಉಪಯೋಗ ಇಲ್ಲಾ ಕರ್ನಾಟಕಕ್ಕೆ. ಶೇಕಡ 80% ವಲಸೆ ಜನ ತುಂಬಿಸುವ ಕೆಲಸ ನಡಿಯುತ್ತಿದೆ ಬೆಂಗಳೂರಲ್ಲಿ ಎಂದು ಮತ್ತೊಬ್ಬ ನೆಟ್ಟಿಗರು ರಿಯಾಕ್ಟ್ ಮಾಡಿದ್ದಾರೆ.
ವಲಸಿಗರ ಸಂಖ್ಯೆ ಹೆಚ್ಚಾಗುವ ಆತಂಕ: ಇನ್ನು ಬೆಂಗಳೂರಿಗೆ ದಕ್ಷಿಣ ಭಾರತದ ಕೇರಳ ಸೇರಿದಂತೆ ವಿವಿಧ ರಾಜ್ಯಗಳ ನಗರಗಳಿಗೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸೇವೆ ಕಲ್ಪಿಸುವುದರಿಂದ ಬೆಂಗಳೂರಿನಲ್ಲಿ ಮುಂದಿನ ದಿನಗಳಲ್ಲಿ ವಲಸೆ ಪ್ರಮಾಣ ಹೆಚ್ಚಳವಾಗಲಿದೆ. ಮುಂದಿನ ದಿನಗಳಲ್ಲಿ ವಲಸೆ ಸಂಖ್ಯೆ ಹೆಚ್ಚಾಗಲಿದೆ ಎಂದು ಕನ್ನಡಿಗರು ಆಕ್ರೋಶ ಮತ್ತು ಆತಂಕ ಹೊರ ಹಾಕಿದ್ದಾರೆ. ಬೆಂಗಳೂರಿಗೆ ವಲಸೆ ಬರುವವರನ್ನು ತಡೆಯಬೇಕು ಈ ನಿಟ್ಟಿನಲ್ಲಿ ನಿಯಮ ರೂಪಿಸಬೇಕು ಎಂದು ಆಗ್ರಹಿಸಿದ್ದಾರೆ.












Click it and Unblock the Notifications