ಪಾದಚಾರಿಗಳಿಗೆ ನರಕ ದರ್ಶನ ಮಾಡಿಸುವ ರೆಸಿಡೆನ್ಸಿ ರಸ್ತೆ
ಬೆಂಗಳೂರು, ಅಕ್ಟೋಬರ್. 11: ಬೆಂಗಳೂರು ಮಹಾನಗರದ ಪ್ರಮುಖ ರಸ್ತೆಗಳಲ್ಲಿ ಒಂದೆಲ್ಲಾ ಒಂದು ಕಾಮಗಾರಿಗಳು ನಡೆಯುತ್ತಲೇ ಇರುತ್ತವೆ. ಆದರೆ ಸಂಬಂಧಿಸಿದ ಆಡಳಿತ ಕೊಂಚ ಚಿಂತನೆ ನಡೆಸಿ ಕಾಮಗಾರಿ ಕೈಗೆತ್ತಿಕೊಂಡರೆ ಉತ್ತಮ ಇಲ್ಲವಾದರೆ ನಾಗರಿಕರು ಸಮಸ್ಯೆಯ ಸುಳಿಗೆ ಸಿಗಬೇಕಾಗುತ್ತದೆ.
ಈಗ ನಾವು ಹೇಳಹೊರಟಿರುವುದು ನಗರದ ಪ್ರಮುಖ ರಸ್ತೆ ರೆಸಿಡೆನ್ಸಿ ರೋಡ್ ಬಗ್ಗೆ. ವಾಹನ ಸವಾರರಿಗೆ ಗುಂಡಿಗಳು ಎದುರಾಗುವುದು ಸರ್ವೇ ಸಾಮಾನ್ಯ, ಆದರೆ ಇಲ್ಲಿ ಪಾದಚಾರಿಗಳು ಯಮಯಾತನೆ ಅನುಭವಿಸುವಂತಾಗಿದೆ.[ಕಸ, ಗುಂಡಿ, ಟ್ರಾಫಿಕ್ ಮುಕ್ತ ಮುಕ್ತ ಮುಕ್ತ ನಗರಕ್ಕೆ ರೆಡ್ಡಿ ಸೂತ್ರ]
ರೆಸಿಡೆನ್ಸಿ ರಸ್ತೆಯ ಎರಡೂ ಇಕ್ಕೆಲಗಳಲ್ಲಿ ಫುಟ್ ಪಾತ್ ಕಾಮಗಾರಿ ಆರಂಭಮಾಡಿ ತಿಂಗಳುಗಳೇ ಕಳೆದಿವೆ. ಸದಾ ವಾಹನ ದಟ್ಟಣೆಯಿಂದ ಕೂಡಿರುವ ರಸ್ತೆಯಲ್ಲಿ ಪಾದಚಾರಿಗಳು ಎಲ್ಲಿ ನಡೆದುಕೊಂಡು ಹೋಗಬೇಕು ಎಂಬುದನ್ನು ಬಿಬಿಎಂಪಿಯೇ ಹೇಳಬೇಕು. ಎರಡೂ ಕಡೆ ರಸ್ತೆಯನ್ನು ಅಗೆದು ಹಾಕಲಾಗಿದೆ. ಒಂದೆಡೆ ಖಾಸಗಿ ಶಾಲೆಯೊಂದಕ್ಕೆ ಸೇರಿದ ವಾಹನಗಳ ಸಾಲೇ ಇರುತ್ತದೆ. ಬೆಂಗಳೂರು ಕ್ಲಬ್ ಎದುರು ಬಸ್ ನಿಲುಗಡೆಯೂ ಇದೆ. ಪಾದಚಾರಿಗಳು ಪಡುತ್ತಿರುವ ಸಂಕಷ್ಟ ಕಣ್ಣಾರೆ ನೋಡಿಕೊಂಡು ಬನ್ನಿ...

ವಾಹನಗಳ ಮಧ್ಯೆ ಸಾಗಬೇಕು
ಒಬ್ಬ ಪಾದಚಾರಿಯಾಗಿ ನೀವು ಏನಾದರೂ ಇಲ್ಲಿ ಸಾಗಬೇಕು ಎಂದರೆ ವಾಹನಗಳನ್ನು ದಾಟಿಕೊಳ್ಳುತ್ತ, ಜಿಗಿಯುತ್ತ ಸಾಗಬೇಕು. ಸಿಗ್ನಲ್ ಬಿಟ್ಟ ವೇಳೆ ಮಧ್ಯ ರಸ್ತೆಯಲ್ಲಿ ಸಿಕ್ಕಿಹಾಕಿಕೊಂಡರೆ ಕತೆ ಮುಗಿದಂತೆಯೇ, ಪಾದಚಾರಿಗಳ ಈ ಪಡಿಪಾಟಿಲನ್ನು ಬಿಬಿಎಂಪಿ ಯಾವಾಗ ಅರಿತುಕೊಳ್ಳುವುದೋ?

ಮೇಯರ್ ಗಮನಕ್ಕೂ ತರಲಾಗಿದೆ
ಸಮಸ್ಯೆಯನ್ನು ನೂತನ ಮೇಯರ್ ಮಂಜುನಾಥ ರೆಡ್ಡಿ ಅವರ ಗಮನಕ್ಕೂ ತರಲಾಗಿದೆ, ಆದರೆ ಪರಿಹಾರ ಮಾತ್ರ ಶೂನ್ಯ. ಇದರ ಪರಿಣಾಮ ಶಾಂತಿನಗರ ಕಡೆಯಿಂದ ಎಂಜಿ ರೋಡ್ ಕಡೆ ಸಂಚರಿಸಬೇಕು ಎಂದರೆ ರಿಚ್ ಮಂಡ್ ಪ್ಲೈ ಓವರ್ ನಲ್ಲಿ ಮುಕ್ಕಾಲು ಗಂಟೆ ಕಾಯಬೇಕಾದ್ದು ಅನಿವಾರ್ಯ.

ಖಾಸಗಿ ಶಾಲೆವಾಹನ ರಸ್ತೆಯಲ್ಲಿ
ಖಾಸಗಿ ಶಾಲೆಗೆ ಸೇರಿದ ಬಸ್, ಟಿಟಿಗಳ ಸಾಲು ರಸ್ತೆಯ ಒಂದು ಭಾಗವನ್ನು ಆಕ್ರಮಿಸಿರುತ್ತದೆ. ಇತ್ತ ಕಾಮಗಾರಿಗೆಂದು ಹೊಂಡ ತೆಗೆಯಲಾಗಿದ್ದು ಬ್ಯಾರಿಕೇಡ್ ಅಳವಡಿಸಲಾಗಿದೆ.

ಮುಂದಾಲೋಚನೆ ಇರಲಿ
ಫುಟ್ ಪಾತ್ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದು ಉತ್ತಮ ಕೆಲಸವೇ. ಆದರೆ ನಾಗರಿಕರಿಗೆ ತೊಂದರೆಯಾಗದಂತೆ ಕೆಲಸ ಮಾಡುವ ಚಿಂತನೆ ನಡೆಸಬೇಕು. ಎರಡೂ ಇಕ್ಕೆಲಗಳ ಕಾಮಗಾರಿ ಒಮ್ಮೆಲೆ ಕೈ ಗೆತ್ತಿಕೊಳ್ಳುವ ಬದಲು ಒಂದು ಬದಿಯಲ್ಲಿ ಕೆಲಸ ಆರಂಭಿಸಿ ಮತ್ತೊಂದು ಬದಿಯನ್ನು ಪಾದಚಾರಿಗಳಿಗೆ ಮೀಸಲಿಟ್ಟಿದ್ದರೆ ಸಮಸ್ಯೆ ಉದ್ಭವವಾಗುತ್ತಿರಲಿಲ್ಲ.

ಸ್ಕೈ ವಾಕ್ ಗೆ ತೆರಳಲು ದಾರಿಯಿಲ್ಲ
ಒಂದು ವೇಳೆ ರಸ್ತೆ ದಾಟಬೇಕು ಎಂದು ಸ್ಕೈ ವಾಕ್ ಏರಲು ದಾರಿಯಿಲ್ಲ. ಏರುವ ಜಾಗದ ಸುತ್ತ ಮುತ್ತ ಮಣ್ಣು ಹಾಕಲಾಗಿದೆ. ಟೆಂಡರ್ ಶೂರ್ ಕಾಮಗಾರಿಗೆ ಜನ ಹಿಡಿಶಾಪ ಹಾಕುತ್ತಲೇ ತೆರಳಬೇಕಾಗಿದೆ.












Click it and Unblock the Notifications