Bengaluru Summer: ವಾಡಿಕೆಗಿಂತ 3ಪಟ್ಟು ಹೆಚ್ಚಿನ ತಾಪಮಾನ ದಾಖಲು: ಮಾರ್ಚ್ ಭವಿಷ್ಯ ನುಡಿದ IMD
ಬೆಂಗಳೂರು, ಫೆಬ್ರವರಿ 08: ಉದ್ಯಾನ ನಗರಿ ಎಂದು ಹಸಿರಿಗೆ ಹೆಸರಾದ ಬೆಂಗಳೂರಿನಲ್ಲಿ ಈ ಭಾರಿ ಎಲ್ಲಿಲ್ಲದ ಶಾಖದ ವಾತಾವರಣ ನಿರ್ಮಾಣವಾಗಿದೆ. ಬೇಸಿಗೆಯ ಬಿಸಿಯ (Bengaluru Heat Wave) ಅಲೆಯನ್ನು ಫೆಬ್ರವರಿ ತಿಂಗಳಲ್ಲಿಯೇ ನಗರವಾಸಿಗಳು ಅನುಭವಿಸುತ್ತಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ಪ್ರಸ್ತುತ ದಿನಗಳಲ್ಲಿ ವಾಡಿಕೆಗಿಂತ ಅತ್ಯಧಿಕ ತಾಪಮಾನ ದಾಖಲಾಗುತ್ತಿದೆ. ಇಂದು ಮತ್ತು ನಾಳೆ ವಾಡಿಕೆಗಿಂತ ತುಸು ಹೆಚ್ಚೆ ಶಾಖವನ್ನು ಅನುಭವಿಸಲು ಬೆಂಗಳೂರಿಗರು ಸಜ್ಜಾಗಬೇಕಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಐಎಂಡಿ ವರದಿ ಪ್ರಕಾರ, ಗರಿಷ್ಠ ತಾಪಮಾನವು 29 ಡಿಗ್ರಿ ಸೆಲ್ಸಿಯಸ್ ದಾಖಲಾಗಬೇಕು. ಆದರೆ ಗುರುವಾರ 33 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ನಾಳೆ ಶುಕ್ರವಾರ (ಫೆ.9)ರಂದು ಸಹ ಇದೇ ರೀತಿಯ ಶಾಖದ ವಾತಾವರಣ ಕಂಡು ಬರಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ನಕ್ಷೆ ಸಹಿತ ತಾಪಮಾನದ ಮಾಹಿತಿ
ಈ ಮೇಲಿನ ನಕ್ಷೆ (ಫೋಟೋ)ಯಲ್ಲಿ ನೀವು ಗಮನಿಸಬಹುದು. ಕೆಂಪು ಬಣ್ಣದ ರೇಖೆಯು ವಾಡಿಕೆಯ ತಾಪಮಾನವಾದರೆ, ನೀಲಿ ಬಣ್ಣ ಹೆಚ್ಚುತ್ತಿರುವ ಗರಿಷ್ಠ ತಾಪಮಾನವನ್ನು ಸೂಚಿಸುತ್ತದೆ. ಕನಿಷ್ಠ ತಾಪಮಾನವನ್ನು ಹಸಿರು ರೇಖೆ ಗುರುತಿಸಿದರೆ, ಹಳದಿ ರೇಖೆಯು ಬೆಳಗಿನ ಮತ್ತು ರಾತ್ರಿ ವೇಳೆ ಕನಿಷ್ಠ ತಾಪಮಾನದ ಇಳಿಕೆ (ವಾಡಿಕೆಗಿಂತ ಕಡಿಮೆ) ತಾಪಮಾನವನ್ನು ತೋರ್ಪಸುತ್ತದೆ. ಇಲ್ಲಿ ದಿನಾಂಕ ಸಹಿತ ಮಾಹಿತಿ ಪಡೆಯಬಹುದಾಗಿದೆ.
ಬೆಂಗಳೂರಿನ ಹವಾಮಾನವು ನಗರದ ನಿವಾಸಿಗಳಿಗೆ ವಿಪರೀತ ಕಿರಿ ನೀಡುತ್ತಿದೆ. ಮನೆಯಿಂದ ಕೊಡೆ ಸಹಿತ ಹೊರಟವರು ಕೆಲವೇ ನಿಮಿಷಗಳಲ್ಲಿ ಟ್ರಾಫಿಕ್ ನಲ್ಲಿ ಓಡಾಡಿ ಬಸವಳಿಯುತ್ತಿದ್ದಾರೆ. ಬೆವೆತು ಬಿಸಿಲಿಗೆ ಹಿಡಿಶಾಪ ಹಾಕುವಷ್ಟರ ಮಟ್ಟಿಗೆ ಚಳಿಗಾಲದಲ್ಲಿ ಬಿಸಿಲು ಮೈ ಸುಡುತ್ತಿದೆ.
33 ° C ಮೀರಿದ ಬೆಂಗಳೂರು ಉಷ್ಣಾಂಶ
ತಾಪಮಾನವು ಈಗಾಗಲೇ 33 ° C ಅನ್ನು ಮೀರಿ ದಾಖಲಾಗುತ್ತಿದೆ. ಇದು ಸಾಮಾನ್ಯಕ್ಕಿಂತ ಮೂರು ಪಟ್ಟು ಹೆಚ್ಚು ಎನ್ನಲಾಗಿದೆ. ಮುಂದಿನ 48 ಗಂಟೆ ನಗರದಲ್ಲಿ 33 ° C ತಾಪಮಾನ ದಾಖಲಾಗಿದೆ.
ಇದಷ್ಟೇ ಅಲ್ಲದೇ ಮುಂದಿನ ದಿನಗಳು ಅಂದರೆ ಫೆಬ್ರವರಿ ಮತ್ತು ಮಾರ್ಚ್ ದಿನಗಳು ಇದೇ ರೀತಿ ಶಾಖದಿಂದ ಕೂಡಿರಲಿವೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಪ್ರಕಾರ, ಬೆಂಗಳೂರಿಗರು ಕನಿಷ್ಠ 48 ಗಂಟೆಗಳ ಕಾಲ ಈ ಬೆಚ್ಚಗಿನ ಹವಾಮಾನವನ್ನು ನಿರೀಕ್ಷಿಸಬಹುದು.

ಜಿಲ್ಲೆಗಳಲ್ಲು ಒಣ ಹವೆ: ತಂಪು ಪಾನೀಯವೇ ಆಸರೆ
ಬೆಂಗಳೂರು ಮಾತ್ರವಲ್ಲದೇ ಕರ್ನಾಟಕ ಅನೇಕ ಜಿಲ್ಲೆಗಳು ಬಿಸಿಲಿನ ಶಾಖ ಅನುಭವಿಸುತ್ತಿವೆ. ಬೆಳಗ್ಗೆ ರಾತ್ರಿ ಚಳಿ ಹೆಚ್ಚಿದ್ದ ಕಡೆಗಳಲ್ಲಿ ಸಹ ಮಧ್ಯಾಹ್ನ ವಿಪರಿತ ತಾಪಮಾನ ದಾಖಲಾಗುತ್ತಿದೆ. ಜನರು ಎಳನೀರು, ತಂಪು ಪಾನೀಯ, ಐಸ್ಕ್ರೀಮ್, ಸನ್ ಸ್ಕಿನ್ ಮೊರೆ ಹೋಗುತ್ತಿದ್ದಾರೆ.
ರಾಜ್ಯದಲ್ಲಿ ಈ ವರ್ಷ ಮುಂಗಾರು -ಹಿಂಗಾರು ಹಂಗಾಮಿನಲ್ಲಿ ನಿರೀಕ್ಷಿತ ಮಳೆ ಆಗಿಲ್ಲ. ಇದಕ್ಕೆ ಬೆಂಗಳೂರು ಹೊರತಾಗಿಲ್ಲ. ಹೀಗಾಗಿ ನಗರದಲ್ಲಿ ಚಳಿ, ಮೋಡ ಮುಸುಕಿನ ವಾತಾವರಣ ಕಂಡು ಬಂದರು ಅತ್ಯಧಿಕ ಬಿಸಿಲು ಕಂಡು ಬರುತ್ತಿದೆ. ಫೆಬ್ರವರಿಯ ಮೊದಲ ವಾರವೇ ನಗರದ ತಾಪಮಾನ ಗರಿಷ್ಠ ಮಿತಿಯನ್ನು ದಾಟಿ ಮೂರು ಮಟ್ಟಿ ಹೆಚ್ಚು ದಾಖಲಾಗಿದೆ. ಇದೆಲ್ಲ ನೋಡಿದರೆ ಈ ವರ್ಷ ಬೇಸಿಗೆ ತೀವ್ರ ಸ್ವರೂಪದಿಂದ ಕೂಡಿರಲಿದೆ ಎಂದು ಹವಾಮಾನ ತಜ್ಞ, ವಿಜ್ಞಾನಿ ಡಾ.ಎ.ಪ್ರಸಾದ್ ಅವರು ಮಾಹಿತಿ ನೀಡಿದ್ದಾರೆ.
ಎಲ್ಲೆಲ್ಲೂ ತೀವ್ರ ಶಾಖದ ಅನುಭವ
ಉತ್ತರ ಒಳನಾಡು, ದಕ್ಷಿಣ ಒಳನಾಡು ಹಾಗೂ ಕರಾವಳಿಗಳಲ್ಲಿ ಮೈ ಸುಡುವಷ್ಟರ ಮಟ್ಟಿನ ಗರಿಷ್ಠ ತಾಪಮಾನ ದಾಖಲಾಗಿದೆ. ಎಲ್ಲೆಡೆ ಒಣಹವೆ ನಿರ್ಮಾಣವಾಗಿದೆ. ಕೆಲವು ಜಿಲ್ಲೆಗಳಲ್ಲಿ ಬೆಳಗ್ಗೆ ಚಳಿ, ಮಂಜಿನ ವಾತಾವರಣ ಎದುರಿಸಿದರೂ ಸಹಿತ ಬೆಳಗ್ಗೆ 9 ಗಂಟೆ ನಂತರ ತೀವ್ರ ಶಾಖದ ಅನುಭವಕ್ಕೆ ಬರುತ್ತಿದೆ.
ಪೂರ್ವ ಪೆಸಿಫಿಕ್ ಮಹಾಸಾಗರದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಬೆಚ್ಚಗಿನ ಮೇಲ್ಮೈ ನೀರಿನ ತಾಪಮಾನ ಉಂಟಾಗಿದೆ (ಎಲ್ನಿನೋ). ಈ ಕಾರಣದಿಂದ ಈ ಭಾರಿ ಬೆಂಗಳೂರು, ಕರ್ನಾಟಕ ಮಾತ್ರವಲ್ಲದೇ ಭಾರತಾದ್ಯಂತ ಅತ್ಯಧಿಕ ತಾಪಮಾನ ನಿರ್ಮಾಣವಾಗಲಿದೆ ಎಂದು ಐಎಂಡಿ ಭವಿಷ್ಯ ನುಡಿದಿದೆ.












Click it and Unblock the Notifications