Bengaluru rain: ಬೆಂಗಳೂರಿನಲ್ಲಿ ಮೋದಿ ಆಗಮನಕ್ಕೂ ಮುನ್ನ ಮಳೆ ಮೋಡ
ಬೆಂಗಳೂರು ಏಪ್ರಿಲ್ 29: ಬೆಂಗಳೂರಿನ ಹಲವೆಡೆ ಮಳೆಯಾಗುತ್ತಿದ್ದು ಇಂದು ನರೇಂದ್ರ ಮೋದಿ ರೋಡ್ ಶೋಗೆ ಮಳೆರಾಯ ಅಡ್ಡಿಯನ್ನುಂಟು ಮಾಡುವ ಆತಂಕ ಶುರುವಾಗಿದೆ. ಬೆಂಗಳೂರಿನಲ್ಲಿ ಇಂದು ಸಂಜೆ ಮತ್ತು ರಾತ್ರಿ ಮಳೆಯಾಗುವ ಮುನ್ಸೂಚನೆಯನ್ನು ಹವಮಾನ ಇಲಾಖೆ ನೀಡಿದೆ.
ಇಂದು ಬೆಳಿಗ್ಗೆಯಿಂದಲೂ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು ಹಲವೆಡೆ ಮಳೆಯಾಗುತ್ತಿದೆ. ಬಿಸಿಲಿನ ತಾಪಕ್ಕೆ ಹೈರಾಣಗಿದ್ದ ಸಿಲಿಕಾನ್ ಸಿಟಿ ಮಂದಿಗೆ ವರುಣ ತಂಪೆರೆದಿದ್ದಾನೆ. ಹೀಗಾಗಿ ಬೆಂಗಳೂರು ಕೂಲ್ ಕೂಲ್ ಆಗಿದೆ. ಆದರೆ ಮೋದಿ ಬೆಂಗಳೂರು ಆಗಮನಕ್ಕೂ ಮುನ್ನ ಮಳೆ ಶುರುವಾಗಿದ್ದು ರೋಡ್ ಶೋಗೆ ಅಡ್ಡಿಯನ್ನುಂಟು ಮಾಡುವ ಕಳವಳ ವ್ಯಕ್ತವಾಗಿದೆ.

ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು ಕರುನಾಡಿನಲ್ಲಿ ಮೋದಿ ಹವಾ ಜೋರಾಗಿದೆ. ಇಂದು ಬೆಳಿಗ್ಗೆಯಿಂದಲೇ ರಾಜ್ಯದಲ್ಲಿ ಮತಬೇಟೆ ಶುರು ಮಾಡಿದ ಮೋದಿಗೆ ಭರ್ಜರಿ ಸ್ವಾಗತ ಸಿಕ್ಕಿದೆ. ಗದಗ, ವಿಜಯಪುರದ ಸಮಾವೇಶದಲ್ಲಿ ಮೋದಿ ಭಾಗಿಯಾಗಿ ಅಧಿಕ ಸಂಖ್ಯೆಯಲ್ಲಿ ಜನ ಬೆಂಬಲವನ್ನು ಪಡೆದಿದ್ದಾರೆ. ಇಂದು ಸಂಜೆ ಬೆಂಗಳೂರಿನಲ್ಲಿಯೂ ಬೃಹತ್ ರೋಡ್ ಶೋ ಮೂಲಕ ಮತದಾರರನ್ನು ಮೋದಿ ಸೆಳೆಯಲಿದ್ದಾರೆ.
ಆದರೆ ಮೋದಿಯನ್ನು ಬರ ಮಾಡಿಕೊಳ್ಳಲು, ಮೋದಿ ಆಗಮನದ ನಿರೀಕ್ಷೆಯಲ್ಲಿರುವ ಅಪಾರ ಜನ ಸಂಖ್ಯೆ, ಅಭಿಮಾನಿಗಳು ಹಾಗೂ ಕಾರ್ಯಕರ್ತರಿಗೆ ನಿರಾಸೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಬೆಂಗಳೂರಿನಲ್ಲಿ ಮೋಡ ಕವಿದ ಮಳೆಯೊಂದಿಗೆ ವಾತಾವರಣವಿದ್ದು ಸಂಜೆವರೆಗೂ ಮಾತ್ರವಲ್ಲದೆ ರಾತ್ರಿ ಕೂಡ ಮಳೆಯಾಗುವ ಲಕ್ಷಣವಿದೆ. ಜೊತೆಗೆ ಹವಮಾನ ಇಲಾಖೆ ಕೂಡ ಬೆಂಗಳೂರಿನಲ್ಲಿ ರಾತ್ರಿವರೆಗೂ ಮಳೆಯಾಗುವ ಸೂಚನೆಯನ್ನು ನೀಡಿದೆ.

ಹೇಳಿಕೇಳಿ ಬೆಂಗಳೂರಿನಲ್ಲಿ ಮಳೆಯಾದರೆ ರಸ್ತೆಗಳಲ್ಲಿ ವಾಹನ ಸಂಚಾರ ಕಷ್ಟಸಾಧ್ಯ. ಹೀಗಿರುವಾಗ ಮೋದಿ ಆಗಮನಕ್ಕೂ ಮುಂಚೆ ಹಲವೆಡೆ ರಸ್ತೆ ಸಂಚಾರ ಬಂದ್ ಮಾಡಲಾಗಿದೆ. ಇದರಿಂದ ವಾಹನ ದಟ್ಟಣೆ ಕೂಡ ಹೆಚ್ಚಾಗುವ ಸಾಧ್ಯತೆ ಇದೆ. ಒಂದು ವೇಳೆ ಇಂದು ಬೆಂಗಳೂರಿನಲ್ಲಿ ಮೋದಿ ರೋಡ್ ಶೋಗೆ ಮಳೆ ಅಡ್ಡಿನ್ನುಂಟು ಮಾಡಿದರೆ, ನಾಳೆ ರಾಜ್ಯದಲ್ಲಿ ಮುಂದುವರೆಯುವ ಮೋದಿ ರೋಡ್ ಶೋ ಬೆಂಗಳೂರಿನಿಂದಲೇ ಆರಂಭವಾಗುವ ಸಾಧ್ಯತೆ ಇದೆ.
ಸದ್ಯ ವಿಜಯಪುರದ ಸಮಾವೇಶದಲ್ಲಿ ಮೋದಿ ಭಾಗಿಯಾಗಿದ್ದು, ಸಮಾವೇಶದ ಬಳಿಕ ರೊಟ್ಟಿ ಊಟ ಸವಿಯಲಿದ್ದಾರೆ. ನಂತರ ಬೆಳಗಾವಿಗೆ ಭೇಟಿ ನೀಡಿ ಸಂಜೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ಸಂಜೆ ಸುಮಾರು 6-8ಗಂಟೆಯ ಒಳಗೆ ಮೋದಿ ಬೆಂಗಳೂರಿನಲ್ಲಿ ರೋಡ್ ಶೋ ನಡೆಸಲಿದ್ದಾರೆ. ಇದಕ್ಕೆ ಬೇಕಾದ ಸಿದ್ದತೆಗಳು ಈಗಾಗಲೇ ಪೂರ್ಣಗೊಂಡಿವೆ. ರೋಡ್ ಶೋ ಬಳಿಕ ಬೆಂಗಳೂರಿನಲ್ಲೇ ಮೋದಿ ವಾಸ್ತವ್ಯ ಹೂಡಲಿದ್ದಾರೆ. ಮಳೆ ಮುಂದುವರೆದರೆ ರೋಡ್ ಶೋ ರದ್ದಾಗಲಿದೆ ಎಂದು ಹೇಳಲಾಗುತ್ತಿದೆ.

ಬೆಂಗಳೂರಿನಲ್ಲಿ ಮೋದಿ ರೋಡ್ ಶೋ ವ್ಯವಸ್ಥೆ ಹೇಗಿದೆ?
ಮಾಗಡಿ ರಸ್ತೆಯ ನೈಸ್ ಜಂಕ್ಷನ್ನಿಂದ ಸುಮನಹಳ್ಳಿವರೆಗೆ ಪ್ರಧಾನಿ ಮೋದಿ ರೋಡ್ ಶೋ ನಡೆಸಲಿದ್ದಾರೆ. ಹೀಗಾಗಿ ಮಾಗಡಿಯಿಂದ ಬೆಂಗಳೂರು ಮಾರ್ಗ ಸೇರಿದಂತೆ ಕೆಲವು ರಸ್ತೆ ಮಾರ್ಗಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ಕೆಲ ಮಾರ್ಗ ಬದಲಾವಣೆಗಳನ್ನು ಮಾಡಲಾಗಿದೆ. ಪ್ರಯಾಣಿಕರ ದಟ್ಟಣೆಯನ್ನು ತಪ್ಪಿಸಿಲು ಹಾಗೂ ಪ್ರಧಾನಿ ಮೋದಿ ಅವರ ಸುರಕ್ಷತೆಯ ದೃಷ್ಟಿಯಿಂದ ಈ ಮೇಲಿನ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಪರ್ಯಾಯ ಮಾರ್ಗವನ್ನು ಕಲ್ಪಿಸಿರುವ ಬೆಂಗಳೂರು ಸಂಚಾರಿ ಹಲವು ಸಲಹೆಗಳನ್ನು ನೀಡಿದ್ದಾರೆ.

ಇಂದು ಮಧ್ಯಾಹ್ನ 2 ರಿಂದ ರಾತ್ರಿ 7.30ರ ವರೆಗೆ ಮಾಗಡಿಯಿಂದ ಬೆಂಗಳೂರಿಗೆ ಬರುವ ಮಾರ್ಗದಲ್ಲಿ ಸಂಚಾರ ನಿರ್ಬಂಧ ಸೇರಿದಂತೆ ಇಲ್ಲಿ ನೀಡಲಾಗಿರುವ ರಸ್ತೆಗಳಲ್ಲಿ ಸಂಚಾರವನ್ನು ತಪ್ಪಿಸಬೇಕಾಗಿದೆ. ಓಲ್ಡ್ ಏರ್ಪೋರ್ಟ್ ರೋಡ್, ಕೇಂಬ್ರಿಡ್ಜ್ ಲೇಔಟ್ ರಸ್ತೆ, ಡಿಕನ್ಸನ್ ರಸ್ತೆ, ಕಬನ್ ರಸ್ತೆ, ಅಂಬೇಡ್ಕರ್ ರಸ್ತೆ, ನೃಪತುಂಗ ರಸ್ತೆ, ಕೃಂಬಿಗಲ್ ರಸ್ತೆ, ದೇವನಾಗ ರಸ್ತೆ, ಲಾಲ್ ಬಾಗ್ ವೆಸ್ಟ್ ಗೇಟ್ ರಸ್ತೆ, ಆರ್ ವಿ ಕಾಲೇಜು ರಸ್ತೆ ಹಾಗೂ ಬಸವನಗುಡಿ 50 ಅಡಿ ಕೆನರಾ ಬ್ಯಾಂಕ್ ರಸ್ತೆಗಳಲ್ಲಿ ವಾಹನ ಸಂಚಾರವನ್ನು ತಪ್ಪಿಸಬೇಕಿದೆ.












Click it and Unblock the Notifications