Heavy Rain: ಕೆಂಗೇರಿ ಕೆರೆಯಲ್ಲಿ 2 ಮಕ್ಕಳು ನಾಪತ್ತೆ! ಅಣ್ಣನ ಮೃತದೇಹ ಪತ್ತೆ, ತಂಗಿಗಾಗಿ ಶೋಧ, ತಾಯಿಯ ಗೋಳಾಟ
ಬೆಂಗಳೂರು, ಅಕ್ಟೋಬರ್ 22: ಬೆಂಗಳೂರಲ್ಲಿ ಸೋಮವಾರದ ಮಳೆಗೆ ಪ್ರವಾಹ, ನೆರೆ ಉಂಟಾಗಿದ್ದರ ಮಧ್ಯೆ ಮನಕಲುಕುವ ಘಟನೆಯೊಂದು ನಡೆದಿದೆ. ತಾಯಿಯ ಜೊತೆ ತೆರಳುತ್ತಿದ್ದ ಇಬ್ಬರು ಮಕ್ಕಳು ಕೆಂಗೇರಿಯ ಗೂರೂರು ಕೆರೆಯಲ್ಲಿ ಕೊಚ್ಚಿ ಹೋದ ಘಟನೆ ನಡೆದಿದೆ. ತಾಯಿ ಮತ್ತು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಕಳೆದ 16 ಗಂಟೆಗಳಿಂದ ಎನ್ಡಿಆರ್ಎಫ್ನಿಂದ ಮಕ್ಕಳ ಶೋಧ ಕಾರ್ಯ ನಡೆಯುತ್ತಿದೆ.
ಸೋಮವಾರ ಮಳೆ ಬಂದ ನಂತರ ಕೆರೆ ಬಳಿ ಈ ತಾಯಿ ನಾಗಮ್ಮ ಜೊತೆಗೆ ಮಕ್ಕಳು ತೆರಳಿದ್ದರು. ಬಳಿಕ ಕೆರೆ ಬಳಿಕ ಹೋಗಿದ್ದು ತಾಯಿಗೆ ಗೊತ್ತಿತ್ತು. ಮರಳಿ ನೋಡುವಷ್ಟರಲ್ಲಿ ತಾಯಿ ನಾಗಮ್ಮ ಮಕ್ಕಳು (ಅಣ್ಣಾ ತಂಗಿ) ಕೆರೆಗೆ ಬಿದ್ದು ಕೊಚ್ಚಿ ಹೋಗಿದ್ದಾರೆ. ಸತತ ಕಾರ್ಯಾಚರಣೆ ಬಳಿಕ ಇಂದು ಮಂಗಳವಾರ 13ವರ್ಷದ ಜಾನ್ ಸೀನಾ ಪತ್ತೆಯಾಗಿದ್ದಾರೆ. ಅವನ ತಂಗಿ 11 ವರ್ಷದ ಮಹಾಲಕ್ಷ್ಮೀ ಇನ್ನು ಪತ್ತೆಯಾಗಿಲ್ಲ. ಶೋಧ ಕಾರ್ಯ ಮುಂದುವರೆದಿದೆ.

ಸುಧಾರಿತ ಕ್ಯಾಮೆರಾ, ಸಲಕರಣೆಯಿಂದ ಬಾಲಕನ ಮೃತದೇಹ ಪತ್ತೆ
ಮಳೆ ಬಂದ ಹಿನ್ನೆಲೆಯಲ್ಲಿ ಕೆಂಗೇರಿಯ ಈ ಕೆರೆಯಲ್ಲಿ ಅತ್ಯಧಿಕ ನೀರು ತುಂಬಿಕೊಂಡಿದೆ. ನೀರು ಹೆಚ್ಚು ಆಳ ಇರುವ ಕಾರಣ ನೀರಿನೊಳಗೆ ಸುಧಾರಿತ ಕ್ಯಾಮೆರಾ ಬಿಟ್ಟು ಮೃತ ದೇಹ ಪತ್ತೆ ಮಾಡುವ ಕಾರ್ಯ ನಡೆದಿದೆ. ಸ್ಥಳದಲ್ಲಿ ಎನ್ಡಿಆರ್ಎಫ್ ಸಿಬ್ಬಂದಿ, ಪೊಲೀಸರು, ಸರ್ಕಾರಿ ಅಧಿಕಾರಿಗಳು ಬೀಡು ಬಿಟ್ಟಿದ್ದಾರೆ. ಸದ್ಯ ಬಾಲಕನ ಮೃತದೇಹ ಪತ್ತೆ ಆಗಿದೆ.
ಸರ್ವಸ್ವವಾಗಿದ್ದ ಮಕ್ಕಳು ಇನ್ನಿಲ್ಲ: ಗೋಳಾಡುತ್ತಿರುವ ತಾಯಿ
ತಂಗಿ ಮೊದಲು ಕಾಲು ಜಾರಿ ಕೆರೆಗೆ ಬಿದ್ದಿದ್ದಾಳೆ. ಆಕೆಯನ್ನು ಹಿಡಿಯಲು ಹೋದ ಅಣ್ಣನು ಸಹ ನೀರು ಪಾಲಾದ ಧಾರುಣ ಘಟನೆ ನಡೆದಿದೆ. ಪತಿ ಇಲ್ಲದೇ ನಾಗಮ್ಮಳಿಗೆ ಈ ಇಬ್ಬರು ಮಕ್ಕಳೇ ಸರ್ವಸ್ವವಾಗಿದ್ದರು. ಆದರೆ ಇಂದು ಅವರು ಸಹ ಇಲ್ಲದಾಗಿದ್ದು, ಆಕೆ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಕೆರೆ ದಡದಲ್ಲಿ ಕೂತು ತಾಯಿ ಮಕ್ಕಳಿಗಾಗಿ ಗೋಳಾಡುತ್ತಿದ್ದಾರೆ. ಎದೆಬಡೆದುಕೊಂಡು ಆಕೆ ಅಳುತ್ತಿರುವ ದೃಶ್ಯ ಎಂತವರ ಕರುಳನ್ನು ಹಿಂಡುವಂತಿದೆ.
ಶೋಧ ಕಾರ್ಯದ ಸಿಬ್ಬಂದಿಯು ಪುತ್ರ ಜಾನ್ ಸೀನಾ ಮೃತದೇಹ ಪತ್ತೆ ಮಾಡಿ ಹೊರಕ್ಕೆ ತೆಗೆದಿದ್ದಾರೆ. ಇದರಿಂದಾಗಿ ತಂಗಿ ಮಹಾಲಕ್ಷ್ಮೀ ಸಹ ಕೆರೆಯಲ್ಲಿಯೇ ಇದ್ದಾರೆ ಹುಡುಕಿಕೊಡಿ ಎಂದು ತಾಯಿ ನಾಗಮ್ಮ ಅಂಗಲಾಚಿದ್ದಾರೆ.
ತಾಯಿ ನಾಗಮ್ಮ ರಿಯಾಕ್ಷನ್
ಮೂರು ತಿಂಗಳ ಹಿಂದಷ್ಟೇ ಮಕ್ಕಳು ಶಾಲೆ ಬಿಟ್ಟಿದ್ದರು. ಈ ಕೆಂಗೇರಿ ಕಡೆಯ ಮನೆಗೆ ಬಂದು ಕೇವಲ ಎರಡು ವಾರ ಆಗಿತ್ತು. ಅಷ್ಟರಲ್ಲಿ ಇಂತಹ ಘಟನೆ ನಡೆದಿದೆ ಎಂದು ತಾಯಿ ನಾಗಮ್ಮ ಪ್ರತಿಕ್ರಿಯಿಸಿದ್ದಾರೆ. ಕೆರೆಗೆ ಮಗ ಮಾತ್ರ ನೀರು ತರಲು ಕೆಲವೊಮ್ಮೆ ಹೋಗುತ್ತಿದ್ದ ನೆನ್ನೆ ಮಾತ್ರ ಅವನ ಜೊತೆ ಮಗಳು ನೀರು ತರಲು ಹೋಗಿದ್ದಾಳೆ. ಆಮೇಲೆ ನೋಡಿದರೆ ಕೆರೆಯಲ್ಲಿ ಮಕ್ಕಳು ಜಾರಿರುವ ದೃಶ್ಯ ಕಾಣಿಸುತ್ತದೆ.
ಅವರು ಬೀಳುತ್ತಿದ್ದಂತೆ ಅಕ್ಕ ಪಕ್ಕದವರು ಹೇಳಿದ್ದಾರೆ. ಆದರೆ ಕಾಪಾಡಲು ಯಾರು ಬರಲಿಲ್ಲ. ಅಷ್ಟರಲ್ಲಿ ಮುಳುಗಿದ್ದಾರೆ ಎಂದು ತಾಯಿ ನಾಗಮ್ಮ ತಿಳಿಸಿದ್ದಾರೆ.
ಇನ್ನೂ ಪತಿಯನ್ನು ಕಳೆದುಕೊಂಡು ತಾಯಿ ನಾಗಮ್ಮ ಮಕ್ಕಳ ಭವಿಷ್ಯದ ಮೇಲೆ ಅಪಾರ ಕನಸು ಕಂಡಿದ್ದರು. ಆದರೆ ಆ ಮಕ್ಕಳು ವಿಧಿಯಾಟಕ್ಕೆ ಬಲಿಯಾಗಿದ್ದಾರೆ. ಇದೀಗ ನಾಗಮ್ಮ ಪತಿ, ಮಕ್ಕಳು ಇಲ್ಲದೇ ಅನಾಥವಾಗಿದ್ದಾರೆ.












Click it and Unblock the Notifications