Breaking: ಬೆಂಗಳೂರು ಮಳೆ ಹಾನಿ: ರಾತ್ರಿವರೆಗೂ ಮುಂದುವರಿದ ಸಿಎಂ ರೌಂಡ್ಸ್
ಬೆಂಗಳೂರು, ಸೆಪ್ಟಂಬರ್ 01: ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಸುರಿದ ಮಳೆಯಿಂದಾಗಿ ಮುಳುಗಡೆಯಾದ ಬಡಾವಣೆಗಳು, ಕೋಡಿ ಒಡೆದ ಕೆರೆ ಹಾಗೂ ಮಳೆಯಿಂದ ಹಾನಿಗುಂಟಾದ ಪ್ರದೇಶಗಳಿಗೆ ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ವೀಕ್ಷಿಸಿದ್ದಾರೆ.
ಮಧ್ಯಾಹ್ನ 3ಗಂಟೆಯಿಂದ ಆರಂಭವಾದ ಮುಖ್ಯಮಂತ್ರಿಗಳ ಮಳೆಹಾನಿ ಪ್ರದೇಶಗಳ ವೀಕ್ಷಣೆ ಮಳೆ ಮಧ್ಯೆಯು ರಾತ್ರಿವರೆಗೂ ಮುಂದುವರಿದಿದೆ.
ವೈಟ್ಫಿಲ್ಡ್ನಲ್ಲಿ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿದ ಮುಖ್ಯಮಂತ್ರಿಗಳ ಮುಂದೆ ಅಲ್ಲಿನ ನಿವಾಸಿಗಳು ಮಳೆಗಾಲದಲ್ಲಿ ಉಂಟಾಗುವ ಸಮಸ್ಯೆ ಬಗ್ಗೆ ವಿವರಿಸಿದರು. ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಸ್ಥಳದಲ್ಲೇ ಅಧಿಕಾರಿಗಳಿಗೆ ಸಮಸ್ಯೆಗಳ ಪರಿಹಾರಕ್ಕೆ ಅವರು ಸೂಚಿಸಿದರು.

ನಂತರ ಮಳೆಗೆ ತುಂಬಿ ಕೋಡಿ ಒಡೆದ ವರ್ತೂರು ಕೆರೆ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಬೊಮ್ಮಾಯಿ ವೀಕ್ಷಿಸಿದರು. ಇದೇ ವೇಳೆ ರಾಜಕಾಲುವೆ ಒತ್ತುವರಿಯಿಂದ ಉಂಟಾದ ಸಮಸ್ಯೆಗಳನ್ನು ಆಲಿಸಿದ ಅವರು ಕೂಡಲೇ ರಾಜಕಾಲುವ ಒತ್ತುವರಿ ತೆರವುಗೊಳಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಮಾರತ್ತಹಳ್ಳಿ ಮುಖ್ಯರಸ್ತೆಯ ಬಳಿ ಇರುವ ಡಿಎನ್ಎ ಅಪಾರ್ಟ್ಮೆಂಟ್ ಬಳಿ ಉಂಟಾದ ಪ್ರವಾಹ ಸಮಸ್ಯೆ, ಮುಖ್ಯ ರಸ್ತೆ ಜಲಾವೃತ ಸಮಸ್ಯೆಗಳನ್ನು ಪರಿಶೀಲಿಸಿದರು. ಶಾಂತಿನಿಕೇತನ ಲೇಔಟ್, ಆರ್ಪಿ ಬಡಾವಣೆ ಲೇಔಟ್ ಸೇರಿದಂತೆ ನಗರದಲ್ಲಿ ಎಲ್ಲೆಲ್ಲಿ ಎಷ್ಟು ಪ್ರಮಾಣದ ಹಾನಿ ಉಂಟಾಗಿದೆ ಎಂದು ಅಧಿಕಾರಿಗಳು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.

ಈ ಸಂದರ್ಭದಲ್ಲಿ ಸಚಿವರಾದ ಡಾ ಅಶ್ವತ್ಥ್ ನಾರಾಯಣ್, ಬಿ.ಎ.ಬಸವರಾಜ, ಶಾಸಕ ಅರವಿಂದ ಲಿಂಬಾವಳಿ, ಸತೀಶ್ ರೆಡ್ಡಿ ಹಾಗೂ ಹಿರಿಯ ಅಧಿಕಾರಿಗಳು ಮತ್ತಿತ್ತರು ಪಾಲ್ಗೊಂಡಿದ್ದಾರೆ.
ನಂತರ ಇಕೋ ಸ್ಪೇಸ್ ಪ್ರದೇಶದ ಪ್ರವಾಹ ಪ್ರದೇಶ, ಕರಿಯಮ್ಮನ ಅಗ್ರಹಾರ ಲೇಔಟ್ನ ಹಿಂಭಾಗದ ಸಾಕ್ರ ಆಸ್ಪತ್ರೆಯ ಬಳಿ ಒಳಚರಂಡಿ ವೀಕ್ಷಿಸಲಿದ್ದಾರೆ. ಬಳಿಕ ಎಸ್.ಬಿ.ಆರ್. ಪ್ಯಾಲೇಸ್ ಚೌಲ್ಟ್ರಿ ಯಲ್ಲಿ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಪ್ರವಾಹದಿಂದ ಸಂಭವಿಸಿದ ಹಾನಿಯ ಕುರಿತು ಹಾಗೂ ಪರಿಹಾರ ಕ್ರಮಗಳ ಕುರಿತು ಸಭೆ ನಡೆಸುವ ಸಾಧ್ಯತೆ ಇದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.












Click it and Unblock the Notifications