Bengaluru Rain: 14 ವಿಮಾನಗಳ ಮಾರ್ಗ ಬದಲಾವಣೆ- 6 ವಿಮಾನ ಹಾರಾಟ ವಿಳಂಬ
ಬೆಂಗಳೂರು ಏಪ್ರಿಲ್ 5: ಸಿಲಿಕಾನ್ ಸಿಟಿಯಲ್ಲಿ ವರುಣನ ಅರ್ಭಟ ಜೋರಾಗಿದೆ. ಕಳೆದೆರಡು ದಿನಗಳಿಂದು ರಾಜ್ಯ ರಾಜಧಾನಿಯಲ್ಲಿ ಸಂಜೆ ಹೊತ್ತಾದರೆ ಮಳೆರಾಯ ತಂಪೆರೆಯುತ್ತಿದ್ದಾನೆ. ಈ ನಡುವೆ ಬೆಂಗಳೂರು ಹೊರವಲಯದ ದೇವನಹಳ್ಳಿಯಲ್ಲಿ ಧಾರಾಕಾರ ಮಳೆ ಹಾಗೂ ಪ್ರತಿಕೂಲ ವಾತಾವರಣದ ಪರಿಣಾಮ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 14 ವಿಮಾನಗಳ ಮಾರ್ಗ ಬದಲಿಸಲಾಗಿದ್ದು, ಆರು ವಿಮಾನಗಳು ತಡವಾಗಿ ಹೊರಡುತ್ತಿವೆ.
ಸಂಜೆ 4.05 ರಿಂದ 4.51 ರ ನಡುವೆ ಬಲವಾದ ಅಡ್ಡಗಾಳಿ, ಧಾರಾಕಾರ ಮಳೆ ಮತ್ತು ಮಿಂಚಿನಿಂದಾಗಿ ವಿಮಾನ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ಒಟ್ಟಾರೆ 14 ವಿಮಾನಗಳ ಮಾರ್ಗ ಬದಲಾಯಿಸಲಾಗಿದೆ. 12 ಅನ್ನು ಚೆನ್ನೈಗೆ, ಒಂದನ್ನು ಕೊಯಮತ್ತೂರ್ಗೆ ಮತ್ತು ಒಂದನ್ನು ಹೈದರಾಬಾದ್ಗೆ ಮಾರ್ಗ ಬದಲಿಸಲಾಗಿದೆ. ಏಳು ಇಂಡಿಗೋ ವಿಮಾನಗಳು, ಮೂರು ವಿಸ್ತಾರಾ, ಎರಡು ಆಕಾಶ ಏರ್ಲೈನ್ಗಳು ಮತ್ತು ತಲಾ ಒಂದು ಗೋ ಏರ್ ಮತ್ತು ಏರ್ ಇಂಡಿಯಾ 14 ವಿಮಾನಗಳು ಮಾರ್ಗ ಬದಲಾಯಿಸಿವೆ. ಆರು ನಿರ್ಗಮನಗಳು ವಿಳಂಬವಾಗಿವೆ" ಎಂದು ಅಧಿಕಾರಿ ಪಿಟಿಐಗೆ ತಿಳಿಸಿದರು. ವಾತಾವರಣ ತಿಳಿಯಾದ ಬಳಿಕ ಸಾಮಾನ್ಯ ಕಾರ್ಯಾಚರಣೆಗಳು ಪುನರಾರಂಭಗೊಂಡಿವೆ ಎಂದು ಅಧಿಕಾರಿ ಹೇಳಿದರು. ಚೆನ್ನೈಗೆ ತಿರುಗಿಸಲಾದ ವಿಮಾನಗಳು ಶೀಘ್ರದಲ್ಲೇ ಬೆಂಗಳೂರಿಗೆ ಹಿಂತಿರುಗುತ್ತದೆ ಎಂದು ಅವರು ಹೇಳಿದರು.
ಹವಾಮಾನ ಇಲಾಖೆ ಪ್ರಕಾರ, ದೇವನಹಳ್ಳಿಯ ಕೆಐಎಯಲ್ಲಿ ಮಂಗಳವಾರ ಸಂಜೆ 45.2 ಮಿಮೀ ಮಳೆಯಾಗಿದೆ. ಭಾರೀ ಮಳೆಯಿಂದಾಗಿ ದೇವನಹಳ್ಳಿಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಸಂಚಾರ ಸ್ಥಗಿತಗೊಂಡಿತ್ತು. ಮತ್ತೊಂದೆಡೆ ನಗರದ ಮಧ್ಯ ಪ್ರದೇಶದಲ್ಲಿ ಮಳೆಯಾಗಿಲ್ಲ.
ರಾಜ್ಯದ ಹಲವೆಡೆ ಮಳೆ ಮುಂದುವರೆದಿದೆ. ಕಳೆದ ದಿನವೂ ಗುಡುಗು ಸಹಿತ ಜೋರು ಮಳೆ ನಗರದಲ್ಲಿ ಕೆಲವು ಆವಾಂತರಗಳು ಸೃಷ್ಟಿಯಾದವು. ವೈಟ್ಫಿಲ್ಡ್ ಪ್ರದೇಶ ಅಕ್ಷರಶಃ ನಲುಗಿದೆ. ಕೆಲವೆಡೆ ರಸ್ತೆಗಳು ಜಲಾವೃತಗೊಂಡಿವೆ.

ಬೆಂಗಳೂರಿನಲ್ಲಿ ಮಧ್ಯಾಹ್ನದ ನಂತರ ಬಿಸಿಲು ಮರೆಯಾಗಿ ದಿಢೀರ್ ಮಳೆ ಆರಂಭವಾಯಿತು. ಈ ಫೈಕಿ ವೈಟ್ಫಿಲ್ಡ್, ಮಾರತ್ತಹಳ್ಳಿ, ದೇವನಹಳ್ಳಿ ಭಾಗದಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಿದೆ. ಪ್ರಮುಖ ರಸ್ತೆಗಳಲ್ಲಿಯೇ ಒಂದು ಅಡಿಯಷ್ಟು ನೀರು ನಿಂತಿದೆ. ಐಟಿ ಕಾರಿಡಾರ್ ಎಂದು ಕರೆಸಿಕೊಳ್ಳುವ ವೈಟ್ ಫಿಲ್ಡ್ನಲ್ಲಿ ಬಿದ್ದ ಮಳೆಯ ನೀರು ಸರಾಗವಾಗಿ ಹರಿದು ಹೋಗಲು ನೀರುಗಾಲುವೆಗಳ ವ್ಯವಸ್ಥೆ ಇಲ್ಲ.
ನಗರದ ಯಲಹಂಕ ಸುತ್ತಮುತ್ತ ಸೇರಿ ಬೆಂಗಳೂರಿನ ಹಲವೆಡೆ ಮಂಗಳವಾರ ಮಧ್ಯಾಹ್ನದಿಂದ ಮೋಡ ಮುಚ್ಚಿದ ವಾತಾವರಣ ಇತ್ತು. ಸಂಜೆ 5 ಗಂಟೆಯವ ಬಳಿಕ ಭಾರೀ ಧಾರಾಕಾರ ಮಳೆ ಆಗಿದೆ. ಅದರಲ್ಲೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣದ ಸುತ್ತಮುತ್ತ ಗುಡುಗು ಬಿರುಗಾಳಿ ಸಹಿತ ಭಾರಿ ಮಳೆ ಆಗಿದೆ. ರಸ್ತೆಗಳಲ್ಲಿ ನೀರು ನಿಂತಿದೆ.
ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆಯಾದರೆ ಕರಾವಳಿ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ತಾಪಮಾನ ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿ ಸೋಮವಾರ ರಾತ್ರಿ ಜೋರಾಗಿ ಮಳೆ ಸುರಿದಿದೆ. ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಎರಡು ದಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕೆಆರ್ ಮಾರ್ಕೆಟ್, ಕಾರ್ಪೊರೇಷನ್, ರಿಚ್ಮಂಡ್ ಸರ್ಕಲ್ ಸೇರಿದಂತೆ ಹಲವು ಕಡೆಗಳಲ್ಲಿ ತುಂತುರು ಮಳೆ ಸುರಿದಿದೆ. ಮಳೆಯಿಂದಾಗಿ ಕಚೇರಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವಾಹನ ಸವಾರರು ಪರದಾಡುವಂತಾಗಿತ್ತು. ವಿದ್ಯಾರಣ್ಯಪುರ, ನಾಗಸಂದ್ರ, ಯಶವಂತಪುರ, ಜಾಲಹಳ್ಳಿ, ಪೀಣ್ಯ, ದಾಸರಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತುಂತುರು ಮಳೆ ಆಗಿದೆ.











Click it and Unblock the Notifications