ಕರೆ ಮಾಡಿದ ಒಂಬತ್ತು ನಿಮಿಷದ ಒಳಗೆ ಬರುತ್ತಾರೆ ಬೆಂಗಳೂರು ಪೊಲೀಸರು
ಬೆಂಗಳೂರು, ಡಿಸೆಂಬರ್ 02: ಎಲ್ಲಾ ಮುಗಿದಮೇಲೆ ಪೊಲೀಸರು ಬರುತ್ತಾರೆ ಎಂಬುದು ಹಳೆದ ಮಾತು ಇನ್ನು ಮುಂದೆ ಹೀಗಾಗುವುದಿಲ್ಲ. ಕರೆ ಮಾಡಿದ ಕೇವಲ ಒಂಬತ್ತು ನಿಮಿಷದಲ್ಲಿ ಬೆಂಗಳೂರು ಪೊಲೀಸರು ಸ್ಥಳದಲ್ಲಿ ಹಾಜರಿರುತ್ತಾರೆ.
ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೀಗೊಂದು ಭರವಸೆ ನೀಡಿದ್ದು, 'ತುರ್ತು ಸಂಖ್ಯೆ 100 ಕ್ಕೆ ಕರೆ ಮಾಡಿದ ಕೇವಲ ಒಂಬತ್ತು ನಿಮಿಷದ ಒಳಗಾಗಿ ಹೊಯ್ಸಳ ವಾಹನ ಘಟನೆ ನಡೆದ ಸ್ಥಳದಲ್ಲಿ ಹಾಜರಿರುತ್ತದೆ, ಸಾರ್ವಜನಿಕರು ಕರೆ ಮಾಡಿ ಪರೀಕ್ಷೆ ಸಹ ಮಾಡಬಹುದು' ಎಂದು ಹೇಳಿದ್ದಾರೆ.
ತೆಲಂಗಾಣದ ಪಶುವೈದ್ಯೆ ಮೇಲೆ ನಡೆದಿರುವ ಅತ್ಯಾಚಾರ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿದ್ದು, ಈ ರೀತಿಯ ಘಟನೆ ಬೆಂಗಳೂರಿನಲ್ಲಿ ನಡೆಯುವ ಆತಂಕವಿಲ್ಲ ಎಂದು ಆಯುಕ್ತ ಭಾಸ್ಕರ್ ರಾವ್ ಭರವಸೆ ನೀಡಿದರು.
ನಗರದ ಮಹಿಳೆಯರ ಸುರಕ್ಷತೆಗೆ ಪೊಲೀಸರು ಬದ್ಧವಾಗಿದ್ದು, ಮಹಿಳೆಯರ ಸುರಕ್ಷತೆಗಾಗಿ 'ಸುರಕ್ಷಾ' ಆಪ್ ಇದ್ದು ಅದನ್ನು ಬಳಸಿಕೊಳ್ಳುವಂತೆ ಭಾಸ್ಕರ್ ರಾವ್ ಹೇಳಿದರು. ಸುರಕ್ಷಾ ಆಪ್ ನಿಂದ ಕರೆಮಾಡಿದ ಕರೆ ಬರಲಿಲ್ಲವೆಂದರೂ ವಿಡಿಯೋ ಸನಿಹದ ಕಂಟ್ರೋಲ್ ರೂಂ ಗೆ ಬರುತ್ತದೆ ಎಂದು ಆಯುಕ್ತರು ಮಾಹಿತಿ ನೀಡಿದರು.