ನಮ್ಮ ಮೆಟ್ರೋ ನಿಲ್ದಾಣದಲ್ಲಿ ಆಗಿದ್ದೇನು? : ಪೊಲೀಸರ ಸ್ಪಷ್ಟನೆ
ಬೆಂಗಳೂರು, ಮೇ 08 : ಬೆಂಗಳೂರಿನ ನಮ್ಮ ಮೆಟ್ರೋ ನಿಲ್ದಾಣದಲ್ಲಿ ಅನುಮಾನಾಸ್ಪದ ವ್ಯಕ್ತಿ ಓಡಾಟದ ಬಗ್ಗೆ ಆತಂಕಗೊಳ್ಳುವ ಅಗತ್ಯವಿಲ್ಲ. ಜನರು ವದಂತಿಗಳಿಗೆ ಕಿವಿಗೊಡಬಾರದು ಎಂದು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಮನವಿ ಮಾಡಿದರು.
ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಪೊಲೀಸರು ಆಯುಕ್ತರು ಮೆಟ್ರೋ ನಿಲ್ದಾಣದಲ್ಲಿ ನಡೆದಿದ್ದು ಏನು ಎಂದು ಸ್ಪಷ್ಟನೆ ನೀಡಿದರು. ಅನುಮಾನಾಸ್ಪದ ವ್ಯಕ್ತಿಯ ಬಂಧನಕ್ಕಾಗಿ ತಂಡವನ್ನು ರಚನೆ ಮಾಡಲಾಗಿದೆ ಎಂದು ಹೇಳಿದರು.

ಮೆಟ್ರೋ ನಿಲ್ದಾಣ ಪ್ರವೇಶಿಸಲು ಬಂದ ವ್ಯಕ್ತಿಯ ಬಳಿ ವೆಪನ್ ಇದೆ. ಒಂದು ಕೋಟಿ ಹಣ ನೀಡುತ್ತೇನೆ ಎಂದು ಹೇಳಿದ್ದ ಮುಂತಾದ ಸುದ್ದಿಗಳು ಸುಳ್ಳು. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದರು.
ಪೊಲೀಸ್ ಆಯುಕ್ತರು ಹೇಳಿದ್ದೇನು?
* ಸೋಮವಾರ ಸಂಜೆ ಮೆಟ್ರೋ ನಿಲ್ದಾಣಕ್ಕೆ ಬಂದಿದ್ದ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿ ಪರಿಶೀಲಿಸಿದ್ದರು. ಅವನ ಬಳಿ ಕೆಲವು ನಾಣ್ಯ ಪತ್ತೆಯಾಗಿದ್ದವು. ವ್ಯಕ್ತಿ ತನ್ನ ಬಳಿ ಹಣ ಇದೆ ಎಂದು ಹೇಳಿದ್ದ. ಅದಕ್ಕೆ ಆತನನ್ನು ಕೆಲವು ಕಾಲ ಕಾಯುವಂತೆ ಹೇಳಲಾಯಿತು. ಆದರೆ, ಬೇರೆಯವರ ಜೊತೆ ಆತ ವಾಪಸ್ ಹೋದ.
* ನಿಲ್ದಾಣದ ಭದ್ರತಾ ಸಿಬ್ಬಂದಿ ಹೇಳಿಕೆ ಪಡೆಯಲಾಗಿದೆ. ವ್ಯಕ್ತಿ ಬಳಿ ವೆಪನ್ ಇದ್ದಿದ್ದು, ಕೋಟಿ ಹಣ ನೀಡುತ್ತೇನೆ ಎಂದು ಹೇಳಿರುವುದು ಎಲ್ಲಾ ಸುಳ್ಳು. ಸಾಮಾಜಿಕ ಜಾಲತಾಣದ ಸುದ್ದಿ, ವದಂತಿಗಳಿಗೆ ಕಿವಿಗೊಡಬೇಡಿ.
* ನಿಲ್ದಾಣಕ್ಕೆ ಬಂದ ವ್ಯಕ್ತಿ ಯಾರು? ಎಂಬುದನ್ನು ಪತ್ತೆ ಹಚ್ಚಲು ತಂಡ ರಚನೆ ಮಾಡಲಾಗಿದೆ. ಅವರು ಬಂದಿದ್ದಾರೆ. ಇವರು ಬಂದಿದ್ದಾರೆ. ಆರು ಜನರ ತಂಡವಿದೆ ಮುಂತಾದ ಸುದ್ದಿಗಳೆಲ್ಲ ಸುಳ್ಳು.
* ನಿಲ್ದಾಣಕ್ಕೆ ಬಂದ ವ್ಯಕ್ತಿಯ ಬಳಿ ವೆಪನ್ ಇತ್ತು ಎಂಬುದು ಸುಳ್ಳು. ಅಂತಹ ಯಾವುದೇ ಘಟನೆ ನಡೆದಿಲ್ಲ. ನಗರದ ಜನರು ಭಯಪಡುವ ಅಗತ್ಯವಿಲ್ಲ.












Click it and Unblock the Notifications