ವಕೀಲರಿಗೆ ಫೀಸ್ ನೀಡಲು ಹಣವಿಲ್ಲ ಎಂದು ವ್ಯಕ್ತಿ ಮಾಡಿದ್ದೇನು?
ಬೆಂಗಳೂರು, ಡಿಸೆಂಬರ್ 1: ವಕೀಲರಿಗೆ ಫೀಸ್ ನೀಡಲು ಹಣವಿಲ್ಲವೆಂದು ವ್ಯಕ್ತಿಯೊಬ್ಬ ಮನೆಗಳ್ಳತನ ಮಾಡಿ ಸಿಕ್ಕಿಬಿದ್ದಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಕಾಂತರಾಜ್(42) ಬಂಧಿತ. ಪೀಣ್ಯ ನಿವಾಸಿಯಾಗಿರುವ ಕಾಂತರಾಜ ಬಂಧನದಿಂದ ಬೆಂಗಳೂರಿನ ವಿವಿಧ ಠಾಣೆಯಲ್ಲಿ ವರದಿಯಾಗಿದ್ದ 13 ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ.
ಆತನ ಬಳಿ 13 ಲಕ್ಷ ರೂ ಮೌಲ್ಯದ 1.19 ಕೆಜಿ ಚಿನ್ನಾಭರಣೆ ದೊರೆತಿದೆ. ಮತ್ತು 900 ಗ್ರಾಂ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ. ಚಿಕ್ಕಬಳ್ಳಾಪುರ ಮೂಲದ ಕಾಂತರಾಜ್ ಮೊದಲಿಗೆ ಸಣ್ಣ ಪುಟ್ಟ ಕೆಲಸವನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದ, ನಂತರ ಮನೆ, ಅಪಾರ್ಟ್ಮೆಂಟ್ಗಳಲ್ಲಿ ಕಳ್ಳತನ ಮಾಡಲು ಆರಂಭಿಸಿದ್ದ.
ಕಳ್ಳತನವನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದ ಈತ ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ, ನ್ಯಾಯಾಲಯದಲ್ಲಿ ತನ್ನ ಪರವಾಗಿ ವಾದಿಸಿದ ವಕೀಲರಿಗೆ ಶುಲ್ಕ ಪಾವತಿ ಮಾಡಲು ಮತ್ತೆ ಕಳ್ಳತನಕ್ಕೆ ಇಳಿದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪೀಣ್ಯದಲ್ಲಿರುವ ಮಹಿಳಾ ಪೊಲೀಸ್ ಪೇದೆಯೊಬ್ಬರ ಮನೆಯಲ್ಲೂ ಈತ ಕಳ್ಳತನ ಮಾಡಿದ್ದ, ಆರೋಪಿಯಿಂದ ಜಪ್ತಿ ಮಾಡಿದ್ದ ಆಭರಣಗಳನ್ನು ಮಾಲೀಕರಿಗೆ ಪೊಲೀಸರು ಮರಳಿಸಿದ್ದಾರೆ.












Click it and Unblock the Notifications