ಬೆಂಗಳೂರು: ಯಮಲೂರು ಕೆರೆ ನೊರೆಯಲ್ಲಿ ಮತ್ತೆ ಬೆಂಕಿ
ಬೆಂಗಳೂರು, ಮೇ. 19: ಬಿಬಿಎಂಪಿ ತೆಗೆದುಕೊಂಡ ತಾತ್ಕಾಲಿಕ ಪರಿಹಾರ ಕ್ರಮಗಳು ಕ್ಷಣಿಕ ಎಂಬುದು ಸಾಬೀತಾಗುತ್ತಿದೆ. ಯಮಲೂರು ಅಮಾನಿ ಕೆರೆ ಕೋಡಿಯಲ್ಲಿ ಮತ್ತೊಮ್ಮೆ ಬೆಂಕಿ ಕಾಣಿಸಿಕೊಂಡಿದ್ದು ನಾಗರೀಕರು ಮತ್ತೆ ಭಯ ಬೀಳುವಂತೆ ಮಾಡಿದೆ.
ಕೆರೆಗೆ ರಾಸಾಯನಿಕಗಳು ಸೇರುತ್ತಿರುವ ಪರಿಣಾಮ ಬೆಂಕಿ ಕಾಣಿಸಿಕೊಳ್ಳುತ್ತಿದೆ ಎಂದು ಹೇಳಲಾಗಿತ್ತು. ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿದ ನಂತರ ಎಚ್ಚೆತ್ತುಕೊಂಡ ಆಡಳಿತ ತಾತ್ಕಾಲಿಕ ಪರಿಹಾರ ಕೈ ಗೊಂಡು ಕೈ ತೊಳೆದುಕೊಂಡಿತ್ತು. ಆದರೆ ಇದೀಗ ಮತ್ತೆ ಸೋಮವಾರ ರಾತ್ರಿಯಿಂದ ಬೆಂಕಿ ಕಾಣಿಸಿಕೊಂಡಿದೆ.[ನಿರಂತರ ಮಳೆ: ರಸ್ತೆಗೆ ಬಂತು ಬೆಳ್ಳಂದೂರು ಕೆರೆ ನೊರೆ]

ಕರೆಯ ನೀರಿನ ಮೇಲೆ ನಿಂತಿರುವ ನೊರೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ರಸ್ತೆಗೂ ನೊರೆ ಹರಿದು ಬರುತ್ತಿದ್ದು ಸಂಚಾರಕ್ಕೂ ಸಮಸ್ಯೆರಯಾಗಿ ಪರಿಣಮಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳದಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಆದರೆ ಪರಿಹಾರ ಕ್ರಮದ ಬಗ್ಗೆ ಯೋಚಿಸಬೇಕಾದ ಬಿಡಿಎ, ಬಿಬಿಎಂಪಿ ಅಧಿಕಾರಿಗಳು ಕೆರೆ ಕಡೆ ಮುಖ ಹಾಕಿಲ್ಲ.[ವರ್ತೂರು ಕೆರೆಯಿಂದ ಹಾರಿ ಬಂತು ನೊರೆ ನೊರೆ]
ಹಿಂದೆ ವರ್ತೂರು ಕೆರೆಯಲ್ಲೂ ನೊರೆ ಉಕ್ಕಿತ್ತು. ಒಂದೆಡೆ ಸಾರಕ್ಕಿ, ಇಟ್ಟಮಡು ಕೆರೆ ಒತ್ತುವರಿ ತೆರವು ಮಾಡುತ್ತಿರಯವ ಆಡಳಿತಕ್ಕೆ ಇಲ್ಲಿ ಆಗುತ್ತಿರುವ ಮಾಲಿನ್ಯ ಕಣ್ಣಿಗೆ ಬೀಳುತ್ತಿಲ್ಲವೇ? ಎಂದು ಸ್ಥಳೀಯ ನಾಗರೀಕರು ಪ್ರಶ್ನೆ ಮಾಡುತ್ತಾರೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು ನೋಟಿಸ್ ಸಹ ನೀಡಲಾಗಿದೆ. ಇದೇ ರೀತಿಯ ವಾತಾವರಣ ಮುಂದುವರಿದರೆ ಪ್ರತಿಭಟನೆ ನಡೆಸಬೇಕಾಗುವುದು ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.
ಇಲಾಖೆಗಳ ಮೇಲಾಟ
ನಾಗರೀಕರು ಇಂಥ ಪ್ರಕರಣದ ಬಗ್ಗೆ ಪ್ರಶ್ನೆ ಮಾಡಿದರೆ ಬಿಬಿಎಂಪಿಯವರು ಇದು ಜಲಮಂಡಳಿಗೆ ಸೇರಿದ್ದು ಎಂದರೆ, ಜಲಮಂಡಳಿ ಇದು ನಮ್ಮ ವ್ಯಾಪ್ತಿಗೆ ಬರಲ್ಲ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸಂಬಂಧಿಸಿದ್ದು ಎನ್ನುತ್ತದೆ. ಕೆರೆ ಬಿಡಿಎಗೆ ಸೇರಿದ್ದು ನಿರ್ವಹಣೆ ಜವಾಬ್ದಾರಿ ಅವರದ್ದು ಎಂದು ಹೇಳುತ್ತಾರೆ. ಒಟ್ಟಿನಲ್ಲಿ ಇಲಾಖೆಗಳ ನುಣುಚಿಕೊಳ್ಳುವ ತಂತ್ರದಿಂದ ಸಮಸ್ಯೆ ಮಾತ್ರ ಹಾಗೇ ಉಳಿದುಕೊಂಡಿದೆ.












Click it and Unblock the Notifications