ನಮ್ಮ ಮೆಟ್ರೋ ಇನ್ನು ಮುಂದೆ ಕೆಂಪೇಗೌಡ ಮೆಟ್ರೋ?
ಬೆಂಗಳೂರು, ನವೆಂಬರ್, 16: ನಮ್ಮ ಮೆಟ್ರೋಕ್ಕೆ ಬೆಂಗಳೂರು ಸಂಸ್ಥಾಪಕ ಕೆಂಪೇಗೌಡ ಅವರ ಹೆಸರನ್ನು ಇಡಲು ಸರ್ಕಾರ ಮುಕ್ತ ಮನಸ್ಸಿನಿಂದ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಾಗಡಿ ರಸ್ತೆ-ಮೈಸೂರು ರಸ್ತೆ ನಡುವೆ ನಮ್ಮ ಮೆಟ್ರೋ ರೈಲು ಸಂಚಾರಕ್ಕೆ ಚಾಲನೆ ನೀಡಿ ನಾಯಂಡಹಳ್ಳಿಯಲ್ಲಿ ಏರ್ಪಡಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿ, 2016 ರ ಜೂನ್ ತಿಂಗಳೊಳಗೆ ಮೆಟ್ರೋ 1 ಸಂಪೂರ್ಣ ಮುಕ್ತಾಯವಾಗಲಿದೆ. 2018ರ ಒಳಗೆ ಎರಡನೇ ಹಂತವೂ ಪೂರ್ಣಗೊಳ್ಳಿದೆ ಎಂದು ತಿಳಿಸಿದರು. [ಮಾಗಡಿ ರಸ್ತೆ-ಮೈಸೂರು ರಸ್ತೆ ನಮ್ಮ ಮೆಟ್ರೋ ದರ ಪಟ್ಟಿ]

ಮೆಟ್ರೋಗೆ ಸಂಬಂಧಿಸಿದ ಕೆಲಸವನ್ನು ಶೀಘ್ರವಾಗಿ ಮುಗಿಸಲು 13850 ಕೋಟಿ ರು. ಅನುದಾನಕ್ಕೆ ವ್ಯವಸ್ಥೆ ಮಾಡಲಾಗಿದ್ದು ಇದರಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡರ ಪಾಲು ಇರಲಿದೆ ಎಂದು ತಿಳಿಸಿದರು.
ಹೊಸಹಳ್ಳಿ ಮೆಟ್ರೋ ನಿಲ್ದಾಣಕ್ಕೆ ದಿವಂಗತ ಬಾಲಗಂಗಾಧರನಾಥ ಸ್ವಾಮೀಜಿ ಹೆಸರನ್ನು ಇಡಲಾಗುವುದು. ವಿಮಾನ ನಿಲ್ದಾಣದ ಹೆಸರು ಬದಲಾಯಿಸುವ ಪ್ರಶ್ನೆಯೇ ಇಲ್ಲ. ಸಾಹಿತಿ ಗಿರೀಶ್ ಕಾರ್ನಾಡ್ ನೀಡಿರುವ ಹೇಳಿಕೆಗೂ ಸರ್ಕಾರಕ್ಕೂ ಸಂಬಂಧವಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.[ಪೂರ್ಣಗೊಳ್ಳುವುದೇ ಡಿಸೆಂಬರೊಳಗೆ ನಮ್ಮ ಮೆಟ್ರೋ?]

ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜತೆಗೆ ಬಿಬಿಎಂಪಿ ಜನಪ್ರತಿನಿಧಿಗಳೂ 'ಟೀಮ್ ಇಂಡಿಯಾ' ಆಗಿ ಕೆಲಸ ಮಾಡಬೇಕು. ಬೆಂಗಳೂರಿಗೆ ರಿಂಗ್ ರಸ್ತೆ ಇರುವಂತೆ ವರ್ತುಲ ರೈಲ್ವೆ ಬಗ್ಗೆಯೂ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಅವರೊಂದಿಗೆ ಮಾತುಕತೆ ನಡೆಸುತ್ತೇನೆ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ತಿಳಿಸಿದರು.
ಬೆಂಗಳೂರು ನಗರ ಎದುರಿಸುತ್ತಿರುವ ಕಸದ ಸಮಸ್ಯೆ ಪರಿಹಾರಕ್ಕೆ ಸೂತ್ರ ಸಿದ್ಧಮಾಡಲಾಗಿದೆ. ದೇಶದ ಕೆಲ ಮಹಾನಗರಗಳಲ್ಲಿ ವೇಸ್ಟ್ ಕಾಂಪೋಸ್ಟ್ ಪದ್ಧತಿ ಅಳವಡಿಕೆ ಮಾಡಲು ಕೇಂದ್ರ ಸರ್ಕಾರ ತೀರ್ಮಾನ ಮಾಡಿದ್ದು ಬೆಂಗಳೂರು ಅದರಲ್ಲಿ ಒಂದಾಗಿರುತ್ತದೆ ಎಂದು ಕೇಂದ್ರ ರಸಗೊಬ್ಬರ ಖಾತೆ ಸಚಿವ ಅನಂತ್ ಕುಮಾರ್ ತಿಳಿಸಿದರು.

ಗೃಹ ಸಚಿವ ಡಾ. ಜಿ ಪರಮೇಶ್ವರ, ಸಂಸದ ವೀರಪ್ಪ ಮೊಯ್ಲಿ, ಸಚಿವ ದಿನೇಶ್ ಗೂಂಡುರಾವ್, ಕೆ ಜೆ ಜಾರ್ಜ್, ಶಾಸಕ ಕೃಷ್ಣಪ್ಪ, ಪ್ರಿಯಾ ಕೃಷ್ಣ, ಸೋಮಶೇಖರ್, ಮೇಯರ್ ಬಿಎನ್ ಮಂಜುನಾಥ ರೆಡ್ಡಿ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.












Click it and Unblock the Notifications