Bengaluru-Mysuru Expressway: ಇನ್ನೂ ಏನೆಲ್ಲಾ ಸಮಸ್ಯೆಗಳಿವೆ ಗೊತ್ತಾ ಈ ಹೆದ್ದಾರಿಯಲ್ಲಿ?-ಮಾಹಿತಿ ತಿಳಿಯಿರಿ
ಬೆಂಗಳೂರು, ಜನವರಿ, 05: ಬೆಂಗಳೂರು- ಮೈಸೂರು ಹೆದ್ದಾರಿ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಲ್ಲಿರುತ್ತಲೇ ಇದೆ. ಮಾರ್ಚ್ 12, 2023ರಂದು ಪ್ರಧಾನಿ ನರೇಂದ್ರ ಮೋದಿ ಈ ದಶಪಥ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯನ್ನು ಉದ್ಘಾಟನೆ ಮಾಡಿದ್ದರು. ಆದರೆ, ಅಂದಿನಿಂದಲೂ ಕೂಡ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದಲ್ಲ ಒಂದು ಸಮಸ್ಯೆಗಳು ಉದ್ಭವವಾಗುತ್ತಲೇ ಇವೆ. ಇದೀಗ ಬೇರೆ ಬೇರೆ ರೀತಿಯ ಅವಾಂತರಗಳು ಈ ಹೆದ್ದಾರಿಯಲ್ಲಿ ನಡೆಯುತ್ತಿವೆ ಎನ್ನುವ ಮಾಹಿತಿಯೊಂದು ಹೊರಬಿದ್ದಿದೆ.
ಮಾರಣಾಂತಿಕ ಅಪಘಾತಗಳು, ದರೋಡೆಗಳು, ಟೋಲ್ ಶುಲ್ಕ ನಿಗದಿಯಿಂದ ಹಿಡಿದು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಮತ್ತು ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ನಡುವೆ ಸಾಲದ ವಿಚಾರವಾಗಿ ಹೋರಾಟದವರೆಗೆ ಈ ಹೆದ್ದಾರಿ ಸುದ್ದಿಯಲ್ಲಿದೆ. ಮಂಡ್ಯ ಚುನಾಯಿತ ಪ್ರತಿನಿಧಿಗಳು ಜಿಲ್ಲಾಡಳಿತದ ಮೂಲಕ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ)ವನ್ನು ಸುಮಾರು ಆರು ತಿಂಗಳಿನಿಂದ ಸರ್ವೀಸ್ ರಸ್ತೆಗಳ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಯಲ್ಲಿರುವ ಸರ್ವಿಸ್ ರಸ್ತೆಗಳಲ್ಲಿ ಬೀದಿ ದೀಪಗಳು, ಮೆಟಲ್ ಕ್ರ್ಯಾಶ್ ಗಾರ್ಡ್ಗಳು, ಕಾನ್ವೆಕ್ಸ್ ಮಿರರ್ಗಳು ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆಯಿದೆ. ಇತ್ತೀಚೆಗೆ ಸರ್ವಿಸ್ ರಸ್ತೆಗಳಲ್ಲಿ ಅಪಘಾತಗಳು ಸಂಭವಿಸಿ ಸಾವು-ನೋವುಗಳು ಸಂಭವಿಸಿರುವ ಉದಾಹರಣೆಗಳು ಇವೆ.
ಇತ್ತೀಚೆಗಷ್ಟೇ ಮಂಡ್ಯದ ಹೊಸಬೂದನೂರು ಬಳಿ ವೇಗವಾಗಿ ಬಂದ ಎಸ್ಯುವಿ ಡಿಕ್ಕಿ ಹೊಡೆದು ಡೆಲಿವರಿ ಬಾಯ್ ನಾಲೆಗೆ ಬಿದ್ದಿದ್ದರು. ಅಧಿಕಾರಿಗಳು ಸರ್ವಿಸ್ ರಸ್ತೆಗೆ ಮೆಟಲ್ ಕ್ರಾಶ್ ಗಾರ್ಡ್ಗಳನ್ನು ಹಾಕಿದ್ದರೆ ಈ ಯುವಕನನ್ನು ರಕ್ಷಿಸಬಹುದಿತ್ತು. ಬೀದಿದೀಪ ಇಲ್ಲದ ಕಾರಣ ವಾಹನ ಸವಾರರು ಸರ್ವೀಸ್ ರಸ್ತೆಯಲ್ಲಿ ಸಂಚರಿಸಲು ಪರದಾಡುವಂತಾಗಿದೆ. ಎನ್ಎಚ್ಎಐ ಮುಖ್ಯ ಜಂಕ್ಷನ್ಗಳಲ್ಲಿ ಮಾತ್ರ ಬೀದಿದೀಪಗಳನ್ನು ಅಳವಡಿಸಿದ್ದು, ಸರ್ವಿಸ್ ರಸ್ತೆಗಳ ಇತರ ಭಾಗಗಳಲ್ಲಿ ಯಾವುದೇ ಬೀದಿದೀಪಗಳಿಲ್ಲದೆ ಸಂಪೂರ್ಣ ಕತ್ತಲೆಯಿಂದ ಕೂಡಿದೆ.
ಮಂಡ್ಯ ಶಾಸಕ ರವಿಕುಮಾರ್ ಅವರು, ಅಂಡರ್ಪಾಸ್ಗಳನ್ನು ನಿರ್ಮಿಸಲು ಮತ್ತು ಸುರಕ್ಷತಾ ಕ್ರಮಗಳನ್ನು ಅಳವಡಿಸಲು ಎನ್ಎಚ್ಎಐ ಬೇಡಿಕೆಗಳಿಗೆ ಸ್ಪಂದಿಸಿಲ್ಲ. ಎನ್ಎಚ್ಎಐ ಅಧಿಕಾರಿಗಳು ಗುತ್ತಿಗೆದಾರನ ಮೇಲೆ ಆರೋಪ ಮಾಡುತ್ತಾರೆ. ಸಿದ್ದರಾಮಯ್ಯ ಸೂಚನೆ ನೀಡಿದರೂ ಅವರು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ, ಎಂದು ದೂರಿದರು ಅಂತಾ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಆಮೆಗತಿಯಲ್ಲಿ ಚರಂಡಿ ಕಾಮಗಾರಿ: ಎನ್ಎಚ್ಎಐ ಯೋಜನಾ ನಿರ್ದೇಶಕರು ಇದೇ ವೇಳೆ ಹೊಸ ರಾಷ್ಟ್ರೀಯ ಹೆದ್ದಾರಿಯನ್ನು ವಾಹನ ಸವಾರರು ಬಳಸುತ್ತಿದ್ದರೂ, ಚರಂಡಿ ನಿರ್ಮಾಣ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಚರಂಡಿ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಗುತ್ತಿಗೆದಾರರು ಮಾರ್ಚ್ 2024ರ ಅಂತ್ಯದೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಂಪನ್ಮೂಲಗಳನ್ನು ಸಂಗ್ರಹಿಸುತ್ತಿದ್ದಾರೆ. ಪರಿಗಣನೆಯಲ್ಲಿರುವ ಸೇವಾ ರಸ್ತೆಗಳಲ್ಲಿ ಕೆಲವು ಸ್ಥಳಗಳಲ್ಲಿ ಬೀದಿದೀಪಗಳನ್ನು ಅಳವಡಿಸಲು ನಾವು ಮನವಿಗಳನ್ನು ಸ್ವೀಕರಿಸಿದ್ದೇವೆ ಎಂದು ಪ್ರಾಧಿಕಾರದ ಯೋಜನಾ ನಿರ್ದೇಶಕ ರಾಹುಲ್ ಗುಪ್ತಾ ಹೇಳಿದರು ಅಂತಾ ವರದಿ ಮಾಡಿದೆ.
ಇನ್ನು ಹೊಸ ರಾಷ್ಟ್ರೀಯ ಹೆದ್ದಾರಿಯ ಹೆಚ್ಚುವರಿ ಕಾಮಗಾರಿಗಳನ್ನು ಕೈಗೊಳ್ಳಲು ಎನ್ಎಚ್ಎಐ ವಿವರವಾದ ಯೋಜನಾ ವರದಿಯನ್ನು ಸಲ್ಲಿಸಿದೆ. ಇದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದಿಂದ ಇನ್ನೂ ಅನುಮೋದನೆ ಪಡೆಯಬೇಕಿದೆ. ನಾವು ಅಂಡರ್ಪಾಸ್ಗಳು ಮತ್ತು ಹೆಚ್ಚುವರಿ ಫಲಕಗಳ ಮುಂದೆ ಪೀನ ಕನ್ನಡಿಗಳನ್ನು ಅಳವಡಿಸಲು ಟೆಂಡರ್ಗಳನ್ನು ಆಹ್ವಾನಿಸುವ ಪ್ರಕ್ರಿಯೆಯಲ್ಲಿದ್ದೇವೆ ಎಂದು ರಾಹುಲ್ ಗುಪ್ತಾ ಹೇಳಿದರು.
ಆದರೂ ಮಂಡ್ಯ ಪೊಲೀಸರು ಅಪಘಾತಗಳು ಮತ್ತು ದರೋಡೆಗಳನ್ನು ತಡೆಯಲು ಎನ್ಎಚ್ಎಐ ಅಧಿಕಾರಿಗಳ ಸಲಹೆಗಳನ್ನು ಕಾರ್ಯಗತಗೊಳಿಸುವ ಬಗ್ಗೆ ಅನುಸರಿಸುತ್ತಿದ್ದಾರೆ. ಸೇವಾ ರಸ್ತೆಗಳಲ್ಲಿ ಸ್ಪೀಡ್ ಬ್ರೇಕರ್ಗಳು, ಬೀದಿದೀಪಗಳು ಮತ್ತು ಸೂಚನಾ ಫಲಕಗಳನ್ನು ಅಳವಡಿಸುವ ಕುರಿತು ನಾವು ಎನ್ಎಚ್ಎಐ ಅಧಿಕಾರಿಗಳೊಂದಿಗೆ ನಿರಂತರವಾಗಿ ಅನುಸರಿಸುತ್ತಿದ್ದೇವೆ ಎಂದು ಮಂಡ್ಯ ಎಸ್ಪಿ ಎನ್.ಯತೀಶ್ ತಿಳಿಸಿದರು.
ಸಾಮಾಗ್ರಿಗಳ ಕಳ್ಳತನ: ಎನ್ಎಚ್ಎಐ ಇನ್ನೂ ಸರ್ವಿಸ್ ರಸ್ತೆಗಳ ಕಾಮಗಾರಿಯನ್ನು ಪೂರ್ಣಗೊಳಿಸದಿದ್ದರೂ, ಕೆಲವು ಕಿಡಿಗೇಡಿಗಳು ಪರಿಸ್ಥಿತಿಯ ಲಾಭವನ್ನು ಪಡೆಯುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ಕೆಲವೆಡೆ ಲೋಹದ ಬ್ಯಾರಿಕೇಡ್ಗಳು ಕಳುವಾಗಿವೆ. ಮತ್ತು ಹೆಚ್ಚು ಆಘಾತಕಾರಿ ಸಂಗತಿಯೆಂದರೆ, ಎಸ್ಒಎಸ್ ಬಾಕ್ಸ್ಗಳಲ್ಲಿ ಅಳವಡಿಸಲಾದ ಸೋಲಾರ್ ಪ್ಯಾನಲ್ಗಳು ಸೇರಿದಂತೆ ಇನ್ನಿತರ ಸಾಮಾಗ್ರಿಗಳು ಕಾಣೆಯಾಗಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ರಾಹುಲ್ ಗುಪ್ತಾ ಅವರು, ಈ ವಿಷಯವನ್ನು ಪರಿಶೀಲಿಸುವುದಾಗಿ ಮತ್ತು ವ್ಯವಸ್ಥೆಯನ್ನು ಸರಿಯಾಗಿ ಹೊಂದಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸುವುದಾಗಿ ಹೇಳಿದರು.












Click it and Unblock the Notifications