ರಸ್ತೆಗಾಗಿ ಗೋಡೆ ಬಿಟ್ಟುಕೊಟ್ಟ ಶಿಯಾ ಮಸೀದಿ
ಬೆಂಗಳೂರು, ಅಕ್ಟೋಬರ್ 23: ಬಿಬಿಎಂಪಿ ಮೇಯರ್ ಆರ್.ಸಂಪತ್ ರಾಜ್, ಶಾಸಕ ಎನ್.ಎ ಹ್ಯಾರೀಸ್ ಸಮ್ಮುಖದಲ್ಲಿ ಜಾನ್ಸನ್ ಮಾರ್ಕೆಟ್ ಬಳಿಯ ಶಿಯಾ ಮಸೀದಿಯ ಗೋಡೆಯನ್ನು ನೆಲಸಮಗೊಳಿಸಲಾಗಿದೆ. ಬಿಬಿಎಂಪಿ ಸ್ವಾದೀನ ಪಡಿಸಿಕೊಂಡ ಈ ಗೋಡೆ ಇದ್ದ ಜಾಗಕ್ಕೆ ಪರ್ಯಾಯವಾಗಿ ಬೇರೆಡೆ ಜಾಗ ನೀಡುವಂತೆ ಮಸೀದಿಯವರು ಕೇಳಿದ್ದಾರೆ.
ಈ ಗೋಡೆ ಕೆಡವಿದ್ದರಿಂದ ಹೊಸೂರು ರಸ್ತೆಯ ವಿಸ್ತರಣೆಗೆ ಇದ್ದ ಅಡ್ಡಿ ಆತಂಕ ನಿವಾರಣೆಯಾಗಿದೆ. ಸಂಚಾರ ದಟ್ಟಣೆ ಸುಗಮಗೊಳಿಸಲು ಈ ಕ್ರಮ ಜರುಗಿಸಲಾಗಿದೆ.

'ಸ್ಮಶಾನದ 8,000 ಚದರ ಅಡಿ ಹಾಗೂ ಮಸೀದಿಯ ಆವರಣದ 1,000 ಚದರ ಅಡಿ ಜಾಗವನ್ನು ವಶಪಡಿಸಿಕೊಂಡಿದ್ದೇವೆ. ಇದಕ್ಕೆ ಪರ್ಯಾಯ ಜಾಗ ನೀಡುವಂತೆ ಮಸೀದಿಯವರು ಕೇಳಿದ್ದಾರೆ. ಆದರೆ, ಅಭಿವೃದ್ದಿ ಹಕ್ಕುಗಳ ಹಸ್ತಾಂತರ ಪತ್ರ (ಟಿಡಿಆರ್) ನೀಡಲು ನಿರ್ಧರಿಸಿದ್ದೇವೆ' ಎಂದು ಮೇಯರ್ ಆರ್.ಸಂಪತ್ ರಾಜ್ ತಿಳಿಸಿದರು.
ಮಸೀದಿಯ ಕಾಂಪೌಂಡ್ ತೆರವುಗೊಳಿಸಲು ಬಿಬಿಎಂಪಿ ಮುಂದಾಗಿತ್ತು. ಆದರೆ, ಈ ಕ್ರಮಕ್ಕೆ ಮಸೀದಿಯ ಆಸ್ಕರ್ ಕಮಿಟಿ ಭಾರೀ ವಿರೋಧ ವ್ಯಕ್ತ ಪಡಿಸಿತ್ತು. ರಸ್ತೆಯ ತುದಿಗೂ ಮಸೀದಿಯ ಕಾಂಪೌಂಡ್ ನಿರ್ಮಾಣ ಮಾಡಿದ್ದರಿಂದ ಈ ಸ್ಥಳದಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು.
ಈ ನಡುವೆ ಸಮಸ್ಯೆಯನ್ನು ಬಗೆಹರಿಸಲು ಮಸೀದಿಯ ಆಸ್ಕರ್ ಕಮಿಟಿ ಯೊಂದಿಗೆ ಚರ್ಚೆ ನಡೆಸಿದ ಬಿಬಿಎಂಪಿ ಅವರ ಮನವೊಲಿಸಲು ಯಶಸ್ವಿಯಾಗಿತ್ತು
'ಬಾಲ್ಡ್ವಿನ್ ಬಾಲಕರ ಪ್ರೌಢಶಾಲೆಯ ಸ್ವಲ್ಪ ಜಾಗವನ್ನೂ ಸ್ವಾಧೀನಕ್ಕೆ ಪಡೆಯಬೇಕಿದೆ. ಆದರೆ, ಇದು ಪಾರಂಪರಿಕ ಕಟ್ಟಡವಾಗಿದೆ. ಇದನ್ನು ಕೆಡವಲು ಪುರಾತತ್ವ ಇಲಾಖೆಯಿಂದ ವಿಶೇಷ ಅನುಮತಿ ಪಡೆಯಬೇಕು ಎಂದು ಮೇಯರ್ ಸಂಪತ್ ರಾಜ್ ಹೇಳಿದರು.
ಬೆಂಗಳೂರಿನಲ್ಲಿ ಜಾನ್ಸನ್ ಮಾರುಕಟ್ಟೆ, ಯಶವಂತಪುರ ಹಾಗೂ ಆನೆಪಾಳ್ಯದಲ್ಲಿ ಶಿಯಾ ಮಸೀದಿಗಳಿವೆ.ಸರಿ ಸುಮಾರು 18,000 ಶಿಯಾ ಸಮುದಾಯದವರು ಬೆಂಗಳೂರಿನಲ್ಲಿದ್ದಾರೆ. (ಪಿಟಿಐ)












Click it and Unblock the Notifications