ವರನಟ ರಾಜ್ ಜೊತೆ ರಾಷ್ಟ್ರಕವಿ ಕುವೆಂಪು: ಮತ್ತಷ್ಟು ಅಪರೂಪದ ಚಿತ್ರ
ಬೆಂಗಳೂರು, ಆಗಸ್ಟ್ 8: ಉದ್ಯಾನನಗರಿ ಬೆಂಗಳೂರಿನ ಸಸ್ಯಕಾಶಿ ಲಾಲ್ ಬಾಗ್ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಗಾಗಿ ವಿಭಿನ್ನ ರೀತಿಯಲ್ಲಿ ಸಿಂಗರಿಸಿಕೊಂಡಿದೆ. ಮಲೆನಾಡಿನ ಮಡಿಲಿನ, ಹಸಿರ ಒನಪಿನೊಳಗೆ ಆಕರ್ಷಣೆಯ ಕೇಂದ್ರವಾಗಿ ಪ್ರವಾಸಿಗರನ್ನು ಕರೆಯುತ್ತಿದ್ದ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿಯಲ್ಲಿದ್ದ ರಾಷ್ಟ್ರಕವಿ ಕುವೆಂಪು ಅವರ ಮನೆ, 'ಕವಿಶೈಲ' ಲಾಲ್ ಬಾಗ್ ಗೆ ಬಂದಿಳಿದಿದೆ.
ಕರ್ನಾಟಕಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ಬಂದು 2017 ಕ್ಕೆ ಸರಿಯಾಗಿ 50 ವರ್ಷಗಳಾಗುತ್ತವೆ. ಅದಕ್ಕೆಂದೇ 'ಶ್ರೀರಾಮಾಯಣ ದರ್ಶನಂ' ಮೂಲಕ ಪ್ರಥಮ ಜ್ಞಾನಪೀಠ(1967) ತಂದುಕೊಟ್ಟ ಕುವೆಂಪು ಅವರಿಗೆ ಕೃತಜ್ಞತೆ, ನಮನ ಸಲ್ಲಿಸುವ ಸಲುವಾಗಿ ಈ ಪುಷ್ಪ ಪ್ರದರ್ಶನವನ್ನು ಮೀಸಲಿಡಲಾಗಿದೆ.
ಲಾಲ್ ಬಾಗಿನಲ್ಲಿ ಕಂಗೊಳಿಸುತ್ತಿದೆ ಕುಸುಮ ಕವಿಶೈಲ
ಆಗಸ್ಟ್ 4 ರಿಂದ ಆರಂಭವಾಗಿರುವ ಈ ಪುಷ್ಪ ಜಾತ್ರೆ ಆಗಸ್ಟ್ 15 ರವರೆಗೂ ಇರಲಿದ್ದು, ಲಾಲ್ ಬಾಗ್ ಸದ್ಯಕ್ಕೆ 'ಕುವೆಂಪು ಮಯ'ವಾಗಿದೆ! ಕುವೆಂಪು ಕೃತಿಗಳ ಪ್ರದರ್ಶನ, ಕೃತಿಗಳ ಮಾರಾಟ ಮಳಿಗೆ, ಕುವೆಂಪು ನಾಟಕದ ದೃಶ್ಯಗಳನ್ನೊಳಗೊಂಡ ಪೋಸ್ಟರ್ ಗಳು, ಕವಿ ಸಮಾಧಿ, ಮಲೆನಾಡಿನ ವೈಭವ ನೈಜವಾಗಿ ಮೂಡಿಬರುವುದಕ್ಕೆ ನಿರ್ಮಿಸಲಾದ ಜಗತ್ಪ್ರಸಿದ್ಧ ಜೋಗದ ಮಾದರಿ... ಈ ಎಲ್ಲವುಗಳೊಟ್ಟಿಗೆ ಗಮನ ಸೆಳೆಯುವುದು ಕುವೆಂಪು ಅವರ ಅಪರೂಪದ ಚಿತ್ರಗಳನ್ನೊಳಗೊಂಡ ಫೋಟೋ ಗ್ಯಾಲರಿ.
ಬೆಂಗಳೂರಿನ ಲಾಲ್ ಬಾಗಿನಲ್ಲಿ ಕುವೆಂಪು 'ಕವಿಶೈಲ'!
ಬಾಲ್ಯದಿಂದ ಹಿಡಿದು ಅವರ ಬದುಕಿನ ವಿವಿಧ ಮಜಲುಗಳನ್ನು ಅನಾವರಣಗೊಳಿಸುವ ಆ ನಿರ್ಜೀವ ಚಿತ್ರಗಳು ಕವಿಯೊಂದಿಗೆ ಆತ್ಮೀಯವಾಗಿ ಒಡನಾಡಿದಂಥ ಅನುಭವ ಮೂಡಿಸುವ ಮೂಲಕ ಜೀವಂತಿಕೆ ಮೆರೆಯುತ್ತವೆ. ಕುವೆಂಪು ಗ್ಯಾಲರಿಯಲ್ಲಿ ಕಂಡ 'ಜಗದ ಕವಿ, ಯುಗದ ಕವಿ'ಯ ಅಪರೂಪದ ಚಿತ್ರಗಳು ಇಲ್ಲಿವೆ.
ಬಾಲಕನಾಗಿ ಕುವೆಂಪು
ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಜನಿಸಿದ್ದು (29.12.1904 - 11.11.1994) ಚಿಕ್ಕಮಗಳೂರು ಜಿಲ್ಲೆಯ, ಕೊಪ್ಪ ತಾಲೂಕಿನ ಹಿರೆಕೊಡಿಗೆ ಎಂಬ ಹಳ್ಳಿಯಲ್ಲಿ. ವೆಂಕಟಪ್ಪ ಗೌಡ ಮತ್ತು ಸೀತಮ್ಮ ಅವರ ಪುತ್ರನಾಗಿ ಜನಿಸಿದ ಕುವೆಂಪು ಅವರ ಬಾಲ್ಯದ ಅಪರೂಪದ ಚಿತ್ರವಿದು.
ಯುವಕನಾಗಿ...
ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಹಿಡಿತ ಸಾಧಿಸಿದ್ದ ಕುವೆಂಪು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪಡೆದು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ ತೆರಳಿದರು. ಜ್ಞಾನದಾಹಿ ಕುವೆಂಪು ಯುವಕರಾಗಿದ್ದಾಗ ಹೀಗಿದ್ದರು.
ಪದವೀಧರ ಕುವೆಂಪು
ಮೈಸೂರು ಮಹಾರಾಜ ಕಾಲೇಜಿನಲ್ಲಿ ಕನ್ನಡ ವಿಷಯದಲ್ಲಿ ಪದವಿ ಪಡೆದ ಪದವೀಧರ ಕುವೆಂಪು ಇದ್ದಿದ್ದು ಹೀಗೆ. ಕುವೆಂಪು ಅವರು ಸಾಹಿತ್ಯ ಕೃಷಿ ಆರಂಭಿಸಿದ್ದ ಇಂಗ್ಲಿಷ್ ಭಾಷೆಯ ಮೂಲಕ ಎಂಬುದು ಇನ್ನೊಂದು ಅಚ್ಚರಿಯ ವಿಷಯ.
ಪತ್ನಿ ಹೇಮಾವತಿಯೊಂದಿಗೆ
ಏಪ್ರಿಲ್ 30, 1937 ರಲ್ಲಿ ತಮಗೆ ಅನುರೂಪವೆಂಬಂತಿದ್ದ ಹೇಮಾವತಿಯವರನ್ನು ಕುವೆಂಪು ಅವರು ಮದುವೆಯಾದರು. ಹೇಮಾವತಿಯವರ ಮಡಿಲಲ್ಲಿ ಕುವೆಂಪು ಅವರ ನೆಚ್ಚಿನ ಮಗ ಪುಟ್ಟ ಪೂರ್ಣಚಂದ್ರ ತೇಜಸ್ವಿ ಕಂಡಿದ್ದು ಹೀಗೆ.
ಮಗ ತೇಜಸ್ವಿ ಅವರೊಂದಿಗೆ
ಲೇಖಕ, ನಾಟಕಕಾರ, ಛಾಯಾಗ್ರಾಹಕ, ಕೃಷಿಕ, ಚಳವಳಿಗಾರರಾಗಿ ಹೆಸರು ಮಾಡಿದ ಕನ್ನಡದ ಖ್ಯಾತನಾಮರ ಪೈಕಿ ಒಬ್ಬರು ಕುವೆಂಪು ಅವರ ಪುತ್ರ ತೇಜಸ್ವಿ. ಅವರೊಂದಿಗೆ ಕುವೆಂಪು ಅವರು ಸ್ನೇಹಿತನಂತೇ ಇದ್ದರು ಎಂಬುದು ಈ ಚಿತ್ರವನ್ನು ನೋಡಿಯೇ ಅರ್ಥಮಾಡಿಕೊಳ್ಳಬಹುದು.
ವರಕವಿಯೊಂದಿಗೆ ರಾಷ್ಟ್ರಕವಿ
ಕುವೆಂಪು ಅವರನ್ನು 'ಜಗದ ಕವಿ, ಯುಗದ ಕವಿ' ಎಂದು ಕರೆದ, ಕುವೆಂಪು ಅವರ ಸಮಕಾಲೀನ ಕವಿ, ವರಕವಿ ಡಾ.ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರೊಂದಿಗೆ ಕುವೆಂಪು.
ಜ್ಞಾನ ಪೀಠ ಪ್ರಶಸ್ತಿ
'ಶ್ರೀ ರಾಮಾಯಣ ದರ್ಶನಂ' ಮೂಲಕ ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕುವೆಂಪು ಅವರು 1968 ರಲ್ಲಿ ಪ್ರಶಸ್ತಿ ಸ್ವೀಕರಿಸಿದ ಸುವರ್ಣ ಘಳಿಗೆಯ ಚಿತ್ರ ಇದು.
ಪದ್ಮವಿಭೂಷಣ
ಸಾಹಿತ್ಯಕ್ಕೆ ಕುವೆಂಪು ಅವರು ನೀಡಿದ ಅನನ್ಯ ಕೊಡುಗೆಯನ್ನು ಸ್ಮರಿಸುತ್ತ 1989 ರಲ್ಲಿ ಭಾರತದ ಸರ್ಕಾರದ ಉನ್ನತ ನಾಗರಿಕ ಗೌರವಗಳಲ್ಲೊಂದಾದ ಪದ್ಮವಿಭೂಷಣ ಪ್ರಶಸ್ತಿಯನ್ನು ಅವರಿಗೆ ನೀಡಲಾಯಿತು. ಪದ್ಮ ವಿಭೂಷಣ ಪ್ರಶಸ್ತಿ ಪತ್ರ ಮತ್ತು ಫಲಕ ಇದು.
ರಾಷ್ಟ್ರಕವಿ ಪುರಸ್ಕಾರ
1964 ರಲ್ಲಿ ರಾಷ್ಟ್ರಕವಿ ಪುರಸ್ಕಾರಕ್ಕೆ ಪಾತ್ರರಾದ ಕುವೆಂಪು ಅವರು 23 ಕವನ ಸಂಕಲನ, 2 ಕಥಾ ಸಂಕಲನ, 2 ಕಾದಂಬರಿ, 12 ನಾಟಕ ಸೇರಿದಂತೆ ವಿಮರ್ಶೆ, ಪ್ರಬಂಧ, ಜೀವ ಚರಿತ್ರೆ, ಅನುವಾದ, ಶಿಶುಸಾಹಿತ್ಯ ಸೇರಿದಂತೆ ಕನ್ನಡದ ಎಲ್ಲಾ ಸಾಹಿತ್ಯ ಪ್ರಕಾರಗಳಲ್ಲೂ ಕೈಯಯಾಡಿಸಿದ್ದಾರೆ. ಅದಕ್ಕೆಂದೇ ಆಡು ಮುಟ್ಟದ ಸೊಪ್ಪಿಲ್ಲ, ಕುವೆಂಪು ಬರೆಯದ ಸಾಹಿತ್ಯ ಪ್ರಕಾರವಿಲ್ಲ ಎಂದಿರುವುದು! ಈ ಎಲ್ಲ ಕೊಡುಗೆ ಮನಗಂಡು 1964 ರಲ್ಲಿ ನೀಡಿದ 'ರಾಷ್ಟ್ರಕವಿ' ಗೌರವವನ್ನು ಸ್ವೀಕರಿಸಿದ ಚಿತ್ರ ಇದು.
ಮೊಮ್ಮಕ್ಕಳೊಂದಿಗೆ ಕುವೆಂಪು ತಾತ
ಮೊಮ್ಮಕ್ಕಳಾದ ಸುಸ್ಮಿತಾ, ಪ್ರಾರ್ಥನೆ, ಈಶಾನ್ಯೆಯೊಂದಿಗೆ ತಾತ ಕುವೆಂಪು. ಗಂಭೀರ ಸಾಹಿತ್ಯದಲ್ಲಿ ತಲ್ಲೀನರಾಗಿದ್ದರೂ, ಕುಟುಂಬಸ್ಥರೊಂದಿಗೆ ಪ್ರೀತಿ-ವಿಶ್ವಾಸ ಹಂಚಿಕೊಳ್ಳುವುದರಲ್ಲಿಯೂ ಎಂದಿಗೂ ಹಿಂದೆ ಬೀಳದ ಕುವೆಂಪು, ತಮ್ಮ ಮೊಮ್ಮಕ್ಕಳೊಂದಿಗೆ ಕಂಡಿದ್ದು ಹೀಗೆ.
ಮಣ್ಣಿನ ಮಗನೊಂದಿಗೆ...
ವಿಶ್ವ ಮಾನವ ಸಂದೇಶ ಸಾರಿದ ಕುವೆಂಪು ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೊಂದಿಗೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿದ್ದು ಹೀಗೆ.
ಕವಿಮಿತ್ರರೊಂದಿಗೆ...
ದಾಂಪತ್ಯ ಕವಿ ಕೆ.ಎಸ್.ನರಸಿಂಹಸ್ವಾಮಿ ಮತ್ತು ನಿತ್ಯೋತ್ಸವ ಕವಿ ಕೆ.ಎಸ್.ನಿಸಾರ್ ಅಹಮ್ಮದ್ ಅವರೊಂದಿಗೆ ಕುವೆಂಪು ಕಾರ್ಯಕ್ರಮವೊಂದರಲ್ಲಿ ಕಾಣಿಸಿದ್ದು...
ವರನಟನೊಂದಿಗೆ ರಾಷ್ಟ್ರಕವಿ
ನಟಸಾರ್ವಭೌಮ, ವರನಟ ಡಾ.ರಾಜಕುಮಾರ್ ಅವರೊಂದಿಗೆ ರಾಷ್ಟ್ರಕವಿ ಕಂಡಿದ್ದು ಹೀಗೆ. ಈ ಇಬ್ಬರು ದಿಗ್ಗಜರ ಸಮ್ಮಿಲನ ಕಣ್ಣಿಗೆ ಹಬ್ಬ ಎಂಬುದಂತೂ ದಿಟ.