ಕಿಮ್ಸ್ ನರ್ಸ್ಗಳ ಹೋರಾಟಕ್ಕೆ ಅಂತೂ ಮಣಿದ ಆಡಳಿತ
ಬೆಂಗಳೂರು, ನವೆಂಬರ್. 05: ಪ್ರತಿಭಟನೆ, ಧರಣಿ, ಉಪವಾಸ ಸತ್ಯಾಗ್ರಹ ಕೊನೆಯಲ್ಲಿ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆ ಯತ್ನ ಇಷ್ಟೆಲ್ಲಾ ಆದ ಮೇಲೆ ಒಕ್ಕಲಿಗರ ಸಂಘ ಕಿಮ್ಸ್ ನರ್ಸ್ ಗಳ ಬೇಡಿಕೆಗೆ ಮಣಿದಿದೆ.
ಕಿಮ್ಸ್ ನರ್ಸ್ ಗಳು ಮತ್ತು ಆಡಳಿತ ಮಂಡಳಿ ನಡುವಿನ ಭಿನ್ನಾಭಿಪ್ರಾಯ, ಗೊಂದಲಗಳು ಅಂತಿಮ ಹಂತಕ್ಕೆ ಬಂದಿದ್ದು ನರ್ಸ್ ಗಳನ್ನು ಹಂತ ಹಂತವಾಗಿ ಕಾಯಂಗೊಳಿಸಲು ಮಂಡಳಿ ಒಪ್ಪಿಗೆ ನೀಡಿದೆ.[ಕಿಮ್ಸ್ ಪ್ರತಿಭಟನೆ ಆರಂಭವಾಗಿದ್ದು ಯಾಕೆ]

ಕೆಂಪೇಗೌಡ ವೈದ್ಯಕೀಯ ಮಹಾವಿದ್ಯಾಲಯದ (ಕಿಮ್ಸ್)ದ ನರ್ಸ್ ಗಳ ಅಹೋರಾತ್ರಿ ಧರಣಿಗೆ ಆಡಳಿತ ಮಂಡಳಿ ಅಂತಿಮವಾಗಿ ಸ್ಪಂದನೆ ನೀಡಿದೆ. ಪ್ರತಿಭಟನಾ ನಿರತ ನರ್ಸ್ ಗಳು ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಇದಾದ ನಂತರ ಆಡಳಿತ ಮಂಡಳಿ ಎಚ್ಚೆತ್ತುಕೊಂಡಿದೆ.
ನರ್ಸ್ ಗಳು ಪ್ರತಿಭಟನೆಯನ್ನು ಕೈ ಬಿಟ್ಟಿದ್ದು ಮುಂದಿನ ವಾರ ನಡೆಯುವ ಸಂಘದ ಕಾರ್ಯಕಾರಿ ಸಮಿತಿಯಲ್ಲಿ ಬೇಡಿಕೆಯ ಬಗ್ಗೆ ಪರಾಮರ್ಶಿಸಿ ಬಳಿಕ ಕರ್ತವ್ಯಕ್ಕೆ ಹಾಜರಾಗಲು ತೀರ್ಮಾನಿಸಿದ್ದಾರೆ.
ಸಂಘದ ಅಧ್ಯಕ್ಷ ಅಪ್ಪಾಜಿಗೌಡ, ಕಾರ್ಯದರ್ಶಿ ಬಾಲಕೃಷ್ಣ , ಆಸ್ಪತ್ರೆಯ ಮುಖ್ಯಸ್ಥ ಕೃಷ್ಣಮೂರ್ತಿ ಮತ್ತು ಧರಣಿ ನಿರತರ ನಡುವೆ ನಡೆದ ಸುಧೀರ್ಘ ಮಾತುಕತೆ ನಂತರ ಪರಸ್ಪರ ಒಪ್ಪಿಗೆ ಮೂಲಕ ತೀರ್ಮಾನಕ್ಕೆ ಬರಲಾಯಿತು. 16 ಸಾವಿರ ರೂ. ವೇತನ, ಮಾರ್ಚ್ ಬಳಿಕ ಹಂತಹಂತವಾಗಿ ಎಲ್ಲಾ ನರ್ಸ್ಗಳನ್ನು ಕಾಯಂಗೊಳಿಸುವ ಬಗ್ಗೆ ಅಪ್ಪಾಜಿ ಗೌಡ ಒಪ್ಪಿಗೆ ನೀಡಿದರು.
ನರ್ಸ್ಗಳ ಆತ್ಮಹತ್ಯೆಗೆ ಪ್ರೇರೇಪಿಸಿದ ಆರೋಪದಡಿಯಲ್ಲಿ ಬಂಧಿಸಲಾಗಿದ್ದ ಕಿಮ್ಸ್ನ ಕಂಪ್ಯೂಟರ್ ಆಪರೇಟರ್ ಪ್ರವೀಣ್ ಮತ್ತು ಇತರರನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಕಳೆದ ಒಂದುವರೆ ತಿಂಗಳಿನಿಂದ ನಡೆಯುತ್ತಿದ್ದ ಸುದೀರ್ಘ ಹೋರಾಟದಲ್ಲಿ ಪ್ರತಿಭಟನಾಕಾರರಿಗೆ ಜಯ ಸಿಕ್ಕಂತೆ ಆಗಿದೆ.












Click it and Unblock the Notifications