KHIR: ಬೆಂಗಳೂರಿನ ನೂತನ KHIR ಸಿಟಿ ಯೋಜನೆಯ ಚಾಲನೆಗೆ ಮಹೂರ್ತ ಫಿಕ್ಸ್
ಬೆಂಗಳೂರು, ಸೆಪ್ಟಂಬರ್ 22: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ದೇಶದ ಮೊದಲ ಕೆಎಚ್ಐಆರ್ (ನಾಲೆಡ್ಜ್-ಹೆಲ್ತ್-ಇನ್ನೋವೇಶನ್-ರೀಸರ್ಚ್) ಸಿಟಿ ನಿರ್ಮಾಣ ಯೋಜನೆ ಕಾಮಗಾರಿಗೆ ಚಾಲನೆಗೆ ಮಹೂರ್ತ್ ನಿಗದಿ ಮಾಡಲಾಗಿದೆ. ಈ ಮೊದಲು ಆಗಸ್ಟ್ 23ರಂದು ಮೊದಲ ಹಂತದ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಹೇಳಲಾಗಿತ್ತು. ಆದರೆ ಕಾರಣಾಂತರಗಳಿಂದ ಅದೀಗ ಸೆಪ್ಟಂಬರ್ಗೆ ಮುಂದೂರಿಕೆ ಆಯಿತು.
ಕರ್ನಾಟಕ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ ಬಿ ಪಾಟೀಲ ಅವರು ಈ ಬಗ್ಗೆ ಭಾನುವಾರ ಅಧಿಕೃತ ಮಾಹಿತಿ ನೀಡಿದ್ದಾರೆ. ರಾಜ್ಯ ಸರಕಾರದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಯಾದ ಕೆಎಚ್ಐಆರ್ ಸಿಟಿಯ ಮೊದಲ ಹಂತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೆಪ್ಟಂಬರ್ 26ರಂದು ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.

ಈ ಸಂಬಂಧ ಉದ್ಘಾಟನಾ ದಿನದಂದು ನಗರದ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಇದರಲ್ಲಿ ದೇಶ-ವಿದೇಶಗಳ ಗಣ್ಯ ಉದ್ಯಮಿಗಳು, ಶಿಕ್ಷಣ ತಜ್ಞರು, ಸಂಶೋಧಕರು ಮತ್ತು ವೈದ್ಯಕೀಯ ಕ್ಷೇತ್ರದ ಸಾಧಕರು ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದರು.
500 ಎಕರೆ ಯೋಜನೆಗೆ ಚಾಲನೆ
ದೇವನಹಳ್ಳಿಯಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಿಕ ಒಟ್ಟು 2,000 ಎಕರೆ ವಿಸ್ತೀರ್ಣದಲ್ಲಿ ಈ ಯೋಜಿತ ನಗರ ತಲೆ ಎತ್ತಲಿದೆ. ಈ ಪೈಕಿ ಮೊದಲ ಹಂತದಲ್ಲಿ 500 ಎಕರೆಯಲ್ಲಿ ಕೆಎಚ್ಐಆರ್ ಸಿಟಿ ಸಾಕಾರಗೊಳ್ಳಲಿದೆ. 40 ಸಾವಿರ ಕೋಟಿ ರೂ. ಹೂಡಿಕೆಯ ಈ ಯೋಜನೆಯಿಂದ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಒಂದು ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ.
ಸಿಂಗಪುರದ ಬಯೊಪೋಲಿಸ್, ರೀಸರ್ಚ್ ಟ್ರ್ಯಾಂಗಲ್ ಪಾರ್ಕ್, ಸೈನ್ಸ್ ಪಾರ್ಕ್, ಕೆಬಿಐಸಿ, ಅಮೆರಿಕದ ಬೋಸ್ಟನ್ ಇನ್ನೋವೇಶನ್ ಕ್ಲಸ್ಟರ್ ಇದಕ್ಕೆ ಮಾದರಿಯಾಗಿದೆ. ಅಲ್ಲದೇ ಬೆಂಗಳೂರಿನಲ್ಲಿ ಅಭಿವೃದ್ಧಿಪಡಿಸಲಾದ ಹೈಟೆಕ್ ಸಿಟಿ, ಎಲೆಕ್ಟ್ರಾನಿಕ್ ಸಿಟಿಯ ಮಾನದಂಡಗಳನ್ನು ಈ ಹೊಸ ನಗರದ ಯೋಜನೆ ಹೊಂದಿರಲಿದೆ. ದೊಡ್ಡಬಳ್ಳಾಪುರ- ಡಾಬಸಪೇಟೆ ನಡುವೆ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 50 ಕಿ.ಮೀ. ದೂರದಲ್ಲಿ ಇದು ಅಸ್ತಿತ್ವಕ್ಕೆ ಬರಲಿದೆ ಎಂದು ಅವರು ವಿವರಿಸಿದರು.

ಸಿಟಿಯಲ್ಲಿ ಏನೆಲ್ಲ ಇರಲಿವೆ?
ಶಿಕ್ಷಣ, ಆರೋಗ್ಯ, ನಾವೀನ್ಯತೆ ಮತ್ತು ಸಂಶೋಧನೆಯೇ ಈ ಪರಿಕಲ್ಪನೆಯೇ ಈ ಸಿಟಿಯ ಪ್ರಮುಖ ಆಧಾರಸ್ತಂಭಗಳಾಗಿವೆ. ಜೀವ ವಿಜ್ಞಾನ, ಭವಿಷ್ಯದ ಸಂಚಾರ ವ್ಯವಸ್ಥೆ, ಸೆಮಿಕಂಡಕ್ಟರ್, ಅಡ್ವಾನ್ಸ್ಡ್ ಮ್ಯಾನುಫ್ಯಾಕ್ಚರಿಂಗ್ ಮತ್ತು ವೈಮಾಂತರಿಕ್ಷ, ರಕ್ಷಣೆ ಮತ್ತು ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರಗಳಿಗೆ ಇಲ್ಲಿ ಆದ್ಯತೆ ನೀಡಲಾಗುವುದು ಎಂದು ಭವಿಷ್ಯ ಯೋಜನೆ, ಸಿಟಿಯ ಪ್ರಯೋಜನ ಕುರಿತು ಅವರು ಹೇಳಿದರು.
ಈ ಮೇಲಿನ ಎಲ್ಲ ವಲಯಗಳಿಗೆ ಸಂಬಂಧಿಸಿದ ಜಾಗತಿಕ ಮಟ್ಟದ ಉತ್ಕೃಷ್ಟ ವಿಶ್ವ ವಿದ್ಯಾಲಯಗಳು ಸಂಶೋಧನಾಲಯಗಳು, ಆಸ್ಪತ್ರೆಗಳು ಮತ್ತು ಕಂಪನಿಗಳು ಕೆಎಚ್ಐಆರ್ ಸಿಟಿಯಲ್ಲಿ ನೆಲೆಯೂರಲಿವೆ.
ಪ್ರತಿ ಎಕರೆಯಲ್ಲಿ 100 ಜನರ ವಸತಿ
ಉದ್ದೇಶಿತ ಕೆಎಚ್ಐಆರ್ ಸಿಟಿಯಲ್ಲಿ ವಿಖ್ಯಾತ ಕಂಪನಿಗಳ ಆರ್ ಆಂಡ್ ಡಿ ಕೇಂದ್ರಗಳು, ಗ್ಲೋಬಲ್ ಕೆಪಾಸಿಟಿ ಸೆಂಟರುಗಳು ಬರಲಿವೆ. ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಡಾ.ದೇವಿಶೆಟ್ಟಿ, ಕಿರಣ್ ಮಜುಂದಾರ್ ಷಾ, ಪ್ರಶಾಂತ ಪ್ರಕಾಶ, ಥಾಮಸ್ ಓಶಾ, ರಾಂಚ್ ಕಿಂಬಾಲ್, ಮೋಹನದಾಸ್ ಪೈ, ನಿಖಿಲ್ ಕಾಮತ್ ಮುಂತಾದ ಖ್ಯಾತನಾಮರನ್ನು ಒಳಗೊಂಡ ಸಲಹಾ ಸಮಿತಿ ರಚಿಸಲಾಗಿದೆ.
ಈ ಸಿಟಿಯಲ್ಲಿ ಕಂಪನಿಗಳು ಮಾತ್ರವಲ್ಲದೇ ಪ್ರತಿ ಎಕರೆಯಲ್ಲಿ 100 ಜನರ ವಸತಿ ಇರುವಂತೆ ಸಹ ಅಗತ್ಯ ವ್ಯವಸ್ಥೆ ಮಾಡಲಾಗುತ್ತದೆ ಎಂದರು.
ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ
ಬೆಂಗಳೂರಿನಲ್ಲಿ IISc, ನಾಸ್ಕಾಂ ಎಕ್ಸಲೆನ್ಸ್ ಸೆಂಟರ್, ರಾಷ್ಟ್ರೀಯ ವಿನ್ಯಾಸ ಸಂಸ್ಥೆ, IIT, IIM, ಸೆಂಟರ್ ಫಾರ್ ಎಐ & ರೋಬೋಟಿಕ್ಸ್, ಸೆಂಟರ್ ಫಾರ್ ನ್ಯಾನೋ & ಸಾಫ್ಟ್ ಮ್ಯಾಟರ್ ಸೈನ್ಸಸ್ ಮುಂತಾದ ಉತ್ಕೃಷ್ಟ ಸಂಸ್ಥೆಗಳಿವೆ. ಜೊತೆಗೆ ಐಟಿ, ಬಿಟಿ, ಔಷಧ ವಿಜ್ಞಾನ, ವೈದ್ಯಕೀಯ ಸಾಧನಗಳ ಉತ್ಪಾದನೆ ಇವುಗಳಲ್ಲಿ ಬೆಂಗಳೂರಿನ ಸಾಧನೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಕೆಎಚ್ಐಆರ್ ಸಿಟಿಯಲ್ಲಿ ಜಗತ್ತಿನ ಅಗ್ರಮಾನ್ಯ 500 ಶಿಕ್ಷಣ ಸಂಸ್ಥೆಗಳ ಸ್ಥಳೀಯ ಕ್ಯಾಂಪಸ್ ಬರಲಿವೆ. ಇದರಿಂದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ಸಿಕ್ಕಂತಾಗುತ್ತದೆ ಎಂದು ಮಾಹಿತಿ ನೀಡಿದರು.












Click it and Unblock the Notifications