ಹಿಂದಿ ಹೇರಿಕೆ ವಿರೋಧಿಸಿ ಎಸ್.ಬಿ.ಐ ವಿರುದ್ಧ ಕರವೇ ಪ್ರತಿಭಟನೆ
ಬೆಂಗಳೂರು, ಆಗಸ್ಟ್ 9: ಹಿಂದಿ ಹೇರಿಕೆ ಹೋರಾಟವೀಗ ಬ್ಯಾಂಕ್ ಗಳತ್ತ ತಿರುಗಿದೆ. ಬ್ಯಾಂಕ್ ಗಳಲ್ಲಿ ಕನ್ನಡ ಬಳಕೆ ಮತ್ತು ಕನ್ನಡ ಬಲ್ಲ ಸಿಬ್ಬಂದಿಗಳ ನೇಮಕಕ್ಕೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ ಬಣ) ಕಾರ್ಯಕರ್ತರು ಬೆಂಗಳೂರಿನ ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಧಾನ ಕಚೇರಿ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದಾರೆ.
ಇಂದು ಬೆಳಿಗ್ಗೆ 11 ಗಂಟೆಯಿಂದ ಪ್ರತಿಭಟನೆ ಆರಂಭವಾಗಿದೆ.

"ಕನ್ನಡ ಬಲ್ಲ ಸ್ಥಳೀಯರಿಗೆ ಉದ್ಯೋಗ ನೀಡಬೇಕೆಂಬ ಆರ್.ಬಿ.ಐ ಮಾರ್ಗದರ್ಶಿ ಸೂತ್ರವನ್ನು ಬ್ಯಾಂಕುಗಳು ಗಾಳಿಗೆ ತೂರಿವೆ. ಮತ್ತು ಹಿಂದಿ ಭಾಷಿಕರಿಗೆ ಉದ್ಯೋಗ ನೀಡಲಾಗುತ್ತಿದೆ. ಈ ಸಿಬ್ಬಂದಿಗಳು ಹಿಂದಿಯಲ್ಲೇ ವ್ಯವಹರಿಸುವಂತೆ ಕನ್ನಡಿಗರನ್ನು ಒತ್ತಾಯಿಸುತ್ತಿದ್ದಾರೆ," ಎಂದು ಕರ್ನಾಟಕ ರಕ್ಷಣಾ ವೇದಿಕೆ ದೂರಿದೆ.
"ಬ್ಯಾಂಕುಗಳ ಚಲನ್ ಗಳು, ಅರ್ಜಿ ನಮೂನೆಗಳು ಹಿಂದಿ-ಇಂಗ್ಲಿಷ್ ಗೆ ಮಾತ್ರ ಸೀಮಿತವಾಗಿದೆ. ಕೆಲವೆಡೆ ಕೇವಲ ಹಿಂದಿ ಉಳಿದುಕೊಂಡಿದೆ," ಎಂದು ಹೇಳಿರುವ ಕರ್ನಾಟಕ ರಕ್ಷಣಾ ವೇದಿಕೆ ಇವುಗಳೆಲ್ಲಾ ಕನ್ನಡದಲ್ಲೇ ಬರಬೇಕು ಎಂದು ಆಗ್ರಹಿಸಿದೆ.
ಬ್ಯಾಂಕುಗಳು ಕನ್ನಡೀಕರಣವಾಗಬೇಕು. ಕನ್ನಡಿಗರಿಗೆ ಉದ್ಯೋಗ ದೊರೆಯಬೇಕು ಎಂಬ ಬೇಡಿಕೆ ಮುಂದಿಟ್ಟುಕೊಂಡು ಈ ಹೋರಾಟವನ್ನು ಕರ್ನಾಟಕ ರಕ್ಷಣಾ ವೇದಿಕೆ ಆರಂಭಿಸಿದೆ.
ಈ ಸಂದರ್ಭದಲ್ಲಿ ಕರವೇ ನಲ್ನುಡಿಯ ಸಂಪಾದಕ ದಿನೇಶ್ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಇತಿಹಾಸವನ್ನು ತಮ್ಮ ಫೇಸ್ಬುಕ್ ಗೋಡೆಯ ಮೇಲೆ ಹಂಚಿಕೊಂಡಿದ್ದಾರೆ.












Click it and Unblock the Notifications