ಮಾರ್ವಾಡಿ ಮನೆಗಳನ್ನೇ ಟಾರ್ಗೆಟ್ ಮಾಡುವ ಚೋರ್ ಇಮ್ರಾನ್ ರೋಚಕ ಸ್ಟೋರಿ!
ಬೆಂಗಳೂರು, ಆ. 09: ಅವನು ಮಹಾನ್ ಕಳ್ಳ. ಕೇವಲ ಮಾರ್ವಡಿ ಮನೆಗಳಿಗೆ ಮಾತ್ರ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಾನೆ. ಈತನ ಉಪಟಳ ತಾಳದೇ ಚಿಕ್ಕಪೇಟೆಯಲ್ಲಿ ಅದೆಷ್ಟೋ ಸೇಠುಗಳು ಮನೆ ಖಾಲಿ ಮಾಡಿಕೊಂಡು ಹೋಗಿದ್ದಾರೆ. ಸ್ಕ್ರೂ ಡ್ರೈವರ್ ಒಂದು ಕೈಯಲ್ಲಿದ್ರೆ ಸಾಕು, ಎಂಥಾ ಲಾಕ್ ಸಹ ಹೊಡೀತಾನೆ. ಪರಪ್ಪನ ಅಗ್ರಹಾರ ಜೈಲಿನಿಂದ ಜೆ.ಜೆ. ನಗರ ಸೇರುವ ವೇಳೆಗೆ ಒಂದಲ್ಲಾ ಒಂದು ಮನೆಗೆ ಕನ್ನ ಹಾಕಿ ಮನೆಗೆ ಬರೋದು. ಈ ಖತರ್ನಾಕ್ ಕಳ್ಳ ಸೇಠು ಮನೆಗಳನ್ನೇ ಟಾರ್ಗೆಟ್ ಮಾಡುವ ಹಿಂದೆ ಭಯಾನಕ ಸ್ಟೋರಿಯಿದೆ. ಈ ಕುರಿತ ವಿಶೇಷ ವರದಿ 'ಒನ್ಇಂಡಿಯಾ ಕನ್ನಡ' ಪ್ರಕಟಿಸುತ್ತಿದೆ.
ಅವನ ಹೆಸರು ಚೋರ್ ಇಮ್ರಾನ್. ವಯಸ್ಸು 32 ವರ್ಷ. ಮುಖದ ಮೇಲೆ ಇರುವ ಮಚ್ಚೆ ಚಹರೆಯಿಂದ ಮಾತ್ರ ಈತನನ್ನು ಪೊಲೀಸರು ಗುರುತು ಮಾಡೋದು ಬಿಟ್ರೆ ಬೇರೆ ಯಾವ ಸುಳಿವು ಬಿಡಲ್ಲ. ಈತನ ವಿರುದ್ಧ ಬರೋಬ್ಬರಿ 65 ಕಳ್ಳತನ ಕೇಸು ದಾಖಲಾಗಿವೆ. ಪೊಲೀಸರೇ ಕೈಗೆ ಸಿಗದೇ ದಾಖಲಾಗದೇ ಇರುವ ಕೇಸುಗಳು ಅದೆಷ್ಟೊ ಇದೆಯೋ ದೇವರೇ ಬಲ್ಲ. ಸದ್ಯ ಈತನನ್ನು ಜೈಲಿನಿಂದ ಬಾಡಿ ವಾರಂಟ್ ಆಧಾರದ ಮೇಲೆ ವಿಚಾರಣೆಗೆ ಒಳಪಡಿಸಿ ಹಲಸೂರು ಗೇಟ್ ಪೊಲೀಸರು ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದ ಎರಡು ಕಳುವು ಪ್ರಕರಣದಲ್ಲಿ 6.50 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣ ವಶಪಡಿಸಿಕೊಂಡಿದ್ದಾರೆ. ಆತನ ಮೇಲೆ ದಾಖಲಾಗಿರುವ ಕೇಸುಗಳನ್ನು ನೋಡಿ ಪೊಲೀಸರೇ ದಂಗಾಗಿದ್ದಾರೆ. ಈ ಹಿಂದೆ ಕೆಜಿ ಗಟ್ಟಲೇ ಚಿನ್ನದ ಸಮೇತ ಕಾಟನ್ ಪೇಟೆ ಪೊಲೀಸರು ಚೋರ್ ಇಮ್ರಾನ್ ನನ್ನು ಬಂಧಿಸಿದ್ದರು. ಈ ವೇಳೆ ತನ್ನ ಕಳ್ಳತನ ಇತಿಹಾಸವನ್ನು ಹೇಳಿಕೊಂಡಿದ್ದ.
ಇಮ್ರಾನ್ ಕಳ್ಳತನಕ್ಕೆ ಇಳಿಯಲು ಕಾರಣ ಮಾರ್ವಡಿಗಳು!
ಚೋರ್ ಇಮ್ರಾನ್ ಕಳ್ಳತನಕ್ಕೆ ಇಳಿದು ಸೇಠು ಅಂಗಡಿ ಟಾರ್ಗೆಟ್ ಮಾಡುವ ಹಿಂದೆ ಒಂದು ಕಾರಣವಿದೆ. ಚೋರ್ ಇಮ್ರಾನ್ ಚಿಕ್ಕ ಹುಡುಗನಾಗಿದ್ದ ವೇಳೆ ಈತನ ತಂದೆ ಚಿಕ್ಕಪೇಟೆಯ ಬಟ್ಟೆ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಪೇಪರ್ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದನಂತೆ. ದಿನಗಳು ಕಳೆದಂತೆ ಚೋರ್ ಇಮ್ರಾನ್ ಅವರ ತಂದೆ ಅಂಗಡಿಯಲ್ಲಿ ಪ್ಲಾಸ್ಟಿಕ್ ಪೇಪರ್ ಸಂಗ್ರಹಿಸುವ ವೇಳೆ ಒಂದಷ್ಟು ಹೊಸ ಬಟ್ಟೆಗಳನ್ನು ಎಗರಿಸುತ್ತಿದ್ದನಂತೆ. ಹೀಗೆ ಸಂಗ್ರಹಿಸಿದ ಬಟ್ಟೆಗಳನ್ನೇ ಒಮ್ಮೆ ಚಿಕ್ಕಪೇಟೆ ವ್ಯಾಪ್ತಿಯ ಬೀದಿಗಳಲ್ಲಿ ವ್ಯಾಪಾರ ಮಾಡಲು ಶುರು ಮಾಡಿದ್ದಾರೆ.
ಅತಿ ಕಡಿಮೆ ಬೆಲೆಗೆ ಬಟ್ಟೆಗಳನ್ನು ಚೋರ್ ಇಮ್ರಾನ್ ಅವರ ತಂದೆ ಮಾರಾಟ ಮಾಡುತ್ತಿದ್ದ. ಇದರಿಂದ ಕೆಲ ಮಾರ್ವಡಿ ಅಂಗಡಿಗಳಿಗೆ ವ್ಯಾಪಾರ ಆಗುತ್ತಿರಲಿಲ್ಲವಂತೆ. ಈತನ ವಹಿವಾಟು ಕೆಡಿಸುವ ಉದ್ದೇಶದಿಂದ ಮಾರ್ವಾಡಿಗಳು ಪೊಲೀಸರಿಗೆ ಹೇಳಿ ಕೇಸು ದಾಖಲಿಸಿ ಜೈಲಿಗೆ ಕಳುಹಿಸಿದ್ದರಂತೆ. ಇದನ್ನು ತಂದೆ ಮೂಲಕ ತಿಳಿದುಕೊಂಡಿದ್ದ ಚೋರ್ ಇಮ್ರಾನ್ ಕೇವಲ ಚಿಕ್ಕಪೇಟೆ ಸುತ್ತಮುತ್ತ ಮಾರ್ವಡಿ ಅಂಗಡಿಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡಲು ಚಿಕ್ಕ ವಯಸ್ಸಿನಲ್ಲಿಯೇ ಆರಂಭಿಸಿದ್ದಾನೆ.
ರಾತ್ರಿ ವೇಳೆ ಕಳ್ಳತನಕ್ಕೆ ಇಳಿಯಲ್ಲ!
ಚೋರ್ ಇಮ್ರಾನ್ ಯಾರ ಜತೆಗೂ ಸೇರದೇ ಒಂಟಿಯಾಗಿ ಮನೆಗಳಿಗೆ ಕನ್ನ ಹಾಕುತ್ತಾನೆ. ತನ್ನ ತಂದೆ ಮೇಲೆ ಸುಳ್ಳು ಕೇಸು ದಾಖಲಿಸಿದ್ರು ಎಂಬ ಸಿಟ್ಟಿಗೆ ಚಿಕ್ಕಪೇಟೆ ಸುತ್ತಮುತ್ತ ಸೇಠು ಮನೆಗಳಿಗೆ ಮಾತ್ರ ಟಾರ್ಗೆಟ್ ಮಾಡಿ ಕಳುವು ಮಾಡುತ್ತಾನೆ. ವಿಪರ್ಯಾಸವೆಂದರೆ ಈತ ರಾತ್ರಿ ವೇಳೆ ಕಳ್ಳತನ ಮಾಡಲ್ಲ. ಹಾಡ ಹಗಲೇ ಮಧ್ಯಾಹ್ನದ ವೇಳೆ ಯಾರೂ ಇಲ್ಲದ ಮನೆಗಳ ಬೀಗ ಮುರಿದು ಕದಿಯುತ್ತಾನೆ. ಮೊಬೈಲ್ ಬಳಸದ ಈತನ ಸುಳಿವು ಪತ್ತೆ ಮಾಡುವುದು ಪೊಲೀಸರಿಗೂ ಕಷ್ಟ. ಚಿಕ್ಕಪೇಟೆ ಸುತ್ತಮುತ್ತ ಸೇಠು ಮನೆಗಳಲ್ಲಿ ಕಳ್ಳತನವಾದ್ರೆ ಪೊಲೀಸರು ಮೊದಲು ಹುಡುಕುವುದೇ ಚೋರ್ ಇಮ್ರಾನ್ ನನ್ನು.
65 ಕೇಸು ಆದ್ರೂ ಚಿಕ್ಕಪೇಟೆ ವ್ಯಾಪ್ತಿ ಬಿಡದ ಚೋರ್ ಖಾನ್
ಚೋರ್ ಇಮ್ರಾನ್ ಮೇಲೆ ಅಧಿಕೃತವಾಗಿ ಈವರೆಗೂ 65 ಕಳ್ಳತನ ಕೇಸು ಬಿದ್ದಿವೆ. ಅಷ್ಟು ಕೇಸಲ್ಲಿ ಜೈಲಿಗೆ ಹೋಗಿ ಬಂದಿದ್ದಾನೆ. ಆದ್ರೂ ಸಹ ತನ್ನ ಚಾಳಿ ಬಿಟ್ಟಿಲ್ಲ. ಏರಿಯಾ ಕೂಡ ಬಿಟ್ಟಿಲ್ಲ. ಚಿಕ್ಕಪೇಟೆ ಹೊರತು ಪಡಿಸಿ ಬೇರೆ ಕಡೆ ಕಳ್ಳತನ ಮಾಡುವುದೇ ಅಪರೂಪ ಎನ್ನುತ್ತಾನೆ ಈತನನ್ನು ಈ ಹಿಂದೆ ಬಂಧಿಸಿದ್ದ ಪೊಲೀಸ್ ಅಧಿಕಾರಿ. ಇನ್ನು ಚೋರ್ ಇಮ್ರಾನ್ ಜೈಲಿನಿಂದ ಬಿಡುಗಡೆ ಯಾದ್ರೆ ಚಿಕ್ಕಪೇಟೆ ಪೊಲೀಸರಿಗೆ ನಿದ್ದೆ ಮಾಡುವಂತಿಲ್ಲ. ( ಈಗ ಚಿಕ್ಕಪೇಟೆ ಪೊಲೀಸ್ ಠಾಣೆ ರದ್ದಾಗಿದ್ದು, ಕೆ.ಆರ್. ಮಾರ್ಕೆಟ್ ಠಾಣೆ ವ್ಯಾಪ್ತಿಗೆ ವರ್ಗ) ಯಾವುದೋ ಮಾಯೆಯಲ್ಲಿ ಕಳ್ಳತನ ಮಾಡಿ ಎಸ್ಕೇಪ್ ಆಗುತ್ತಿತ್ತ. ಒಮ್ಮೆ ಕಳ್ಳತನ ಮಾಡಿ ಎಸ್ಕೇಪ್ ಆದ್ರೆ ಪೊಲೀಸರಿಗೂ ಸಿಗುತ್ತಿರಲಿಲ್ಲ. ಈತನ ಕಳ್ಳತನ ಉಪಟಳ ತಾಳದೇ ಹಲವು ಮಾರ್ವಡಿಗಳು ಮನೆಗಳನ್ನೇ ಖಾಲಿ ಮಾಡಿಕೊಂಡು ಹೋಗಿದ್ದಾರೆ ಎಂಬ ವಿಷಯವನ್ನು ಈ ಹಿಂದೆ ಈತನ ವಿರುದ್ಧ ಕೇಸು ದಾಖಲಿಸಿದ್ದ ಪೊಲೀಸರು ವಿವರ ನೀಡುತ್ತಾರೆ.
ಕ್ಯಾಸಿನೋದಲ್ಲಿ ಮಜಾ; ಗೌರಿಪಾಳ್ಯದಲ್ಲಿ ಸೈಲೆಂಟ್ :
ಚೋರ್ ಇಮ್ರಾನ್ ಕಳ್ಳತನ ಮಾಡಿ ಸಕ್ಸಸ್ ಅದ ಕೂಡಲೇ ಗೋವಾ ಸೇರುತ್ತಾನೆ. ಕ್ಯಾಸಿನೋಗಳಲ್ಲಿ ಮಜಾ ಉಡಾಯಿಸಿ ಮತ್ತೆ ವಾಪಸು ಬರುತ್ತಾನೆ. ಕದ್ದ ಚಿನ್ನವನ್ನು ತಮ್ಮ ಸಮುದಾಯದ ಬಡ ಹೆಣ್ಣು ಮಕ್ಕಳ ಮದುವೆ ವೇಳೆ ದಾನ ಮಾಡಿರುವ ಸಂಗತಿ ಈ ಹಿಂದೆ ಪೊಲೀಸರ ಕೈಗೆ ಸಿಕ್ಕಿಬಿದ್ದ ವೇಳೆ ಹೇಳಿಕೊಂಡಿದ್ದ. ಮಾತ್ರವಲ್ಲದೇ ಹಲವಾರು ಸಾಮೂಹಿಕ ಮದುವೆ ವೇಳೆ ಚಿನ್ನದ ಆಭರಣ ಉಚಿತವಾಗಿ ಉಡುಗೊರೆ ಕೊಟ್ಟಿರುವುದು ಪೊಲೀಸರ ತನಿಖೆ ವೇಳೆ ಕಂಡು ಬಂದಿತ್ತು.
ಕಾಟನ್ ಪೇಟೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ ಕಿರಾತಕ
ಚೋರ್ ಇಮ್ರಾನ್ ಕದ್ದ ಮಾಲನ್ನು ತ್ವರಿತವಾಗಿ ವಿಲೇವಾರಿ ಮಾಡಲ್ಲ. ಅವನನ್ನು ಆತನ ಮನೆಯ ಹೂವಿನ ಕುಂಡಗಳ ಒಳಗೆ ಹಾಕಿ ಗಿಡ ನೆಡುತ್ತಾನೆ. ಈತನ ಮೇಲೆ ಅನುಮಾನಗೊಂಡು ಪೊಲೀಸರು ದಾಳಿ ಮಾಡಿದ್ರೂ ಬಾಯಿ ಬಿಡಲ್ಲ. ಈತನ ಮನೆ ಮೇಲೆ ದಾಳಿ ಮಾಡಿ ಪೊಲೀಸರು ಎಷ್ಟೋ ಸಾರಿ ವಾಪಸು ಬಂದಿದ್ದಾರೆ. ಆ ಬಳಿಕ ಹೂವಿನ ಕುಂಡದಲ್ಲಿನ ಕದ್ದ ಮಾಲು ತೆಗೆದುಕೊಂಡು ಪರಭಾರೆ ಮಾಡಿ ಮಜಾ ಉಡಾಯಿಸುವುದನ್ನು ಕರಗತ ಮಾಡಿಕೊಂಡಿದ್ದಾನೆ. ಕೆಲ ವರ್ಷಗಳ ಹಿಂದೆ ಚೋರ್ ಇಮ್ರಾನ್ ನ ಮನೆ ಮೇಲಿನ ಹೂವಿನ ಕುಂಡಗಳಲ್ಲಿ ಅಡಗಿಸಿಟ್ಟಿದ್ದ 700 ಗ್ರಾಂ ಚಿನ್ನವನ್ನು ಕಾಟನ್ ಪೇಟೆ ಪೊಲೀಸರು ವಶಪಡಿಸಿಕೊಂಡಿದ್ದರು. ವಿಚಾರಣೆ ವೇಳೆ ಈತನ ತಾಳಿ ಭಾಗ್ಯ ಸ್ಕೀಮ್ ಮತ್ತು ಹೂವಿನ ಕುಂಡದ ಸೀಕ್ರೇಟ್ ಬಾಯಿ ಬಿಟ್ಟಿದ್ದ. ಅಷ್ಟೂ ಚಿನ್ನಾಭರಣಗಳನ್ನು ಕಾಟನ್ ಪೇಟೆ ಪೊಲೀಸರು ವಶಪಡಿಸಿಕೊಂಡು ಚೋರ್ ಇಮ್ರಾನ್ನನ್ನು ಬಂಧಿಸಿದ್ದರು.
Recommended Video