ಬೆಂಗಳೂರು: ಪಾಲಿಕೆ ಶಾಲಾ ಕಾಲೇಜುಗಳ ಪ್ರವೇಶಾತಿಗೆ ಜುಲೈ 31 ರವರೆಗೂ ಅವಕಾಶ, ದಾಖಲಾತಿ ಆಗಿದ್ದೆಷ್ಟು?
ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಶಾಲಾ, ಕಾಲೇಜುಗಳು ಜೂನ್ 1ರಿಂದಲೇ ಆರಂಭವಾಗಿವೆ. ಇನ್ನೊಂದೆಡೆ ಮಕ್ಕಳು ಪ್ರವೇಶ ದಾಖಲಾತಿ ಮುಂದುವರಿದಿದ್ದು, ಬೆಂಗಳೂರಿನ ದಕ್ಷಿಣ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಪಾಲಿಕೆಯ ಶಿಶು ವಿಹಾರ, ಶಾಲಾ-ಕಾಲೇಜುಗಳಿಗೆ ಪ್ರಸಕ್ತ ಸಾಲಿನಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಅವಧಿ ವಿಸ್ತರಿಸಲಾಗಿದೆ.
ಶಾಲಾ ಕಾಲೇಜುಗಳಲ್ಲಿ ಶೈಕ್ಷಣಿಕ ತರಗತಿಗಳು ಸಹ ಈಗಾಗಲೇ ಜೂನ್ 01 ರಿಂದ ಪ್ರಾರಂಭವಾಗಿವೆ. ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 5 ಶಿಶುವಿಹಾರ, ಒಂದು ಪ್ರೌಢಶಾಲೆ ಮತ್ತು ಒಂದು ಪದವಿ ಪೂರ್ವ ಕಾಲೇಜು ಇದೆ. ಈ ಎಲ್ಲಾ ಶಾಲೆಗಳಲ್ಲಿ ಒಟ್ಟಾರೆಯಾಗಿ 519 ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದಾರೆ. ಈ ಸಂಬಂಧ ಮಕ್ಕಳ ಪ್ರವೇಶಾತಿಗೆ ಜುಲೈ 31ರವರೆಗೂ ಅವಕಾಶ ನೀಡಿದ್ದಾಗಿ ಪಾಲಿಕೆ ಆಯುಕ್ತ ಕೆ. ಎನ್. ರಮೇಶ್ ತಿಲಿಸಿದ್ದಾರೆ.

ಕಾಲೇಜುವಾರು ಪ್ರವೇಶಾತಿ ವಿವರ
ಉತ್ತರಹಳ್ಳಿ ಪಿಯು ಕಾಲೇಜಿನಲ್ಲಿ 98 ವಿದ್ಯಾರ್ಥಿಗಳು, 115 ವಿದ್ಯಾರ್ಥಿನಿಯರು ಪ್ರವೇಶ ಪಡೆದಿದ್ದಾರೆ. ಭೈರಸಂದ್ರದ ಪ್ರೌಢಶಾಲೆಯಲ್ಲಿ 36 ವಿದ್ಯಾರ್ಥಿಗಳು, 33 ವಿದ್ಯಾರ್ಥಿನಿಯರು ಪ್ರವೇಶ ಪಡೆದಿರುತ್ತಾರೆ. ಇನ್ನುಳಿದಂತೆ 5-ಶಿಶುವಿಹಾರಗಳ ಪೈಕಿ ಬೈರಸಂದ್ರ (84), ಕೊರಮಂಗಲ (30), ಮಾರೆನಹಳ್ಳಿ-ಜಯನಗರ (27), ಆಡುಗೋಡಿ (54) ಮತ್ತು ತಾವರೆಕೆರೆ (42) ಮಕ್ಕಳು ದಾಖಲಾಗಿದ್ದಾರೆ ಎಂದರು.
ಪ್ರವೇಶಾತಿಯಲ್ಲೂ ವಿದ್ಯಾರ್ಥಿನಿಯರದ್ದೇ ಮೇಲುಗೈ
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪಾಲಿಕೆಯ ಶಿಶು ವಿಹಾರ, ಪ್ರೌಢಶಾಲೆ ಹಾಗೂ ಪಿಯು ಕಾಲೇಜುಗಳಲ್ಲಿ ಒಟ್ಟು 272 ವಿದ್ಯಾರ್ಥಿನಿಯರು ಹಾಗೂ 247 ವಿದ್ಯಾರ್ಥಿಗಳು ಪ್ರವೇಶ ಪಡೆದು ವ್ಯಾಸಂಗ ಮಾಡುತ್ತಿದ್ದಾರೆ.
ಪ್ರಸಕ್ತ 2026-27ನೇ ಶೈಕ್ಷಣಿಕ ಸಾಲಿನ ದಾಖಲಾತಿ ಪ್ರಕ್ರಿಯೆ ಭರದಿಂದ ಸಾಗುತ್ತಿದ್ದು, ಇದೆ ಜುಲೈ 31ರ ವರೆಗೆ ದಾಖಲಾತಿ ಪ್ರಕ್ರಿಯೆಗೆ ಅವಕಾಶ ನೀಡಲಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಬೆಂಗಳೂರಿಗೆ ಉದ್ಯೋಗ ಅರಸಿ ಬಂದಿರುವ ಪೋಷಕರು ತಮ್ಮ ಮಕ್ಕಳ ಶೈಕ್ಷಣಿಕ ದೃಷ್ಟಿಯಿಂದ ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳಿಗೆ ಉಚಿತ ಸೌಲಭ್ಯ
ಪಾಲಿಕೆಯ ಶಾಲಾ-ಕಾಲೇಜುಗಳಿಗೆ ದಾಖಲಾಗುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಎರಡು ಜೊತೆ ಸಮವಸ್ತ್ರ, ಶೂ, ಸಾಕ್ಸ್, ಸ್ವೆಟರ್, ಪಠ್ಯ ಪುಸ್ತಕಗಳು, ನೋಟ್ ಪುಸ್ತಕಗಳು ಹಾಗೂ ಮಧ್ಯಾಹ್ನದ ಬಿಸಿ ಊಟವನ್ನು ಉಚಿತವಾಗಿ ನೀಡಲಾಗುತ್ತಿದೆ. ಶಾಲಾ ಕಾಲೇಜುಗಳಲ್ಲಿ ಅತ್ಯಂತ ನುರಿತ, ಅನುಭವಿ ಹಾಗೂ ಅರ್ಹ ಬೋಧಕ ವರ್ಗವಿದ್ದು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಮತ್ತು ವೈಯಕ್ತಿಕ ಮಾರ್ಗದರ್ಶನ ನೀಡಲಾಗುತ್ತಿದೆ.
ಡಿಸ್ಟಿಂಕ್ಷನ್ ವಿದ್ಯಾರ್ಥಿಗಳಿಗೆ ನಗದು ಬಹುಮಾನ
ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಉತ್ತೇಜಿಸುವ ಸಲುವಾಗಿ ಪ್ರತಿ ಸಾಲಿನಲ್ಲಿಯೂ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುವ ವಿದ್ಯಾರ್ಥಿಗಳಿಗೆ ಪಾಲಿಕೆ ವತಿಯಿಂದ ವಿಶೇಷ ನಗದು ಪುರಸ್ಕಾರ ನೀಡಲಾಗುವುದೆಂದು ಶಿಕ್ಷಣ ವಿಭಾಗದ ಅಧಿಕಾರಿಗಳು ಹೇಳಿದರು.













Click it and Unblock the Notifications