ಬೆಂಗಳೂರು ಅಭಿವೃದ್ಧಿ: ಸರ್ಕಾರದ ಮುಂದಿರುವ ಏಳು ಸವಾಲುಗಳು!
ಬೆಂಗಳೂರು, ಮೇ 18: ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ .ಹಾಗೆಯೇ ಬೆಂಗಳೂರು ಹಲವು ಮೂಲ ಸೌಕರ್ಯಗಳ ಕೊರತೆಯಿಂದ ಬಳಲುತ್ತಿದ್ದು, ನಾಗಾಲೋಟದಿಂದ ಬೆಳೆಯುತ್ತಿರುವ ರಾಜಧಾನಿಗೆ ಸಮಗ್ರ ಅಭಿವೃದ್ಧಿ ಯೋಜನೆ ರೂಪಿಸುವ ಅಗತ್ಯವಿದೆ.
ಜಾಗತಿಕ ಮಟ್ಟದಲ್ಲಿ ಬೆಂಗಳೂರು ನಗರ ಸಿಲಿಕಾನ್ಸಿಟಿ ಎಂದು ಗುರುತಿಸಿಕೊಂಡಿದ್ದರೂ ಈಗಲೂ ಕೂಡ ಕಸದ ಸಮಸ್ಯೆ, ಹದಗೆಟ್ಟ ರಸ್ತೆಗಳು, ಕುಡಿಯುವ ನೀರು ಹಾಗೂ ಟ್ರಾಫಿಕ್ ಜಾಮ್ನಂತಹ ಸಮಸ್ಯೆಗಳಿಂದ ಬಳಲುತ್ತಿದೆ.
ವರ್ಷಕ್ಕೆ ಸಾವಿರಾರು ಕೋಟಿ ರೂ,ಗಳನ್ನು ಸುರಿದರೂ ಬಕಾಸುರನ ಹೊಟ್ಟೆ ಅರೆಕಾಸಿನ ಮಜ್ಜಿಗೆಯಂತೆ ಅನುದಾನವೂ ಬೇಡಿಕೆಗೆ ತಕ್ಕಂತೆ ದೊರೆಕುತ್ತಿಲ್ಲ ಎಂಬ ಕೊರಗು ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ಹೊಸ ಸರ್ಕಾರ ಬೆಂಗಳೂರು ನಗರದ ಪ್ರಮುಖ ಹತ್ತು ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ ಪರಿಹಾರಕ್ಕೆ ಶಾಶ್ವತ ಮತ್ತು ಸಮಗ್ರ ಯೋಜನೆಯನ್ನು ರೂಪಿಸಬೇಕಿದೆ.
ಬೆಂಗಳೂರನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಗಳು ಇಲ್ಲಿವೆ.

ಬೆಂಗಳೂರು ಸಂಚಾರ ದಟ್ಟಣೆ ನಿವಾರಣೆಯೂ ಒಂದು ಸವಾಲು
ಹೊಸ ಸರ್ಕಾರ, ನಗರದ ಸಂಚಾರ ದಟ್ಟಣೆ ನಿವಾರಣೆಗೆ ದೀರ್ಘಾಕಾಲೀನ ಯೋಜನೆಗಳನ್ನು ರೂಪಿಸಬೇಕಿದೆ. ಒಂದೆಡೆ ಹೆಚ್ಚುತ್ತಿರುವ ವಾಹನಗಳ ಸಂಖ್ಯೆ, ಮಿತಿ ಮೀರುತ್ತಿರುವ ಮಾಲಿನ್ಯ ಮತ್ತಿತರೆ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಸಂಚಾರ ದಟ್ಟಣೆ ತಗ್ಗಿಸಲು ಪರ್ಯಾಯ ಸಮೂಹ ಸಾರಿಗೆ ವಿಧಾನಗಳ ಬಗ್ಗೆ ಚಿಂತನೆ ನಡೆಸಬೇಕಿದೆ.
ಸದ್ಯದ ಪರಿಸ್ಥಿತಿಯಲ್ಲಿ ನಗರದಲ್ಲಿ ವಾಹನಗಳ ಸಂಚಾರ ತಗ್ಗಿಸಲು ಮೆಟ್ರೋ ರೈಲು ಅತ್ಯಂತ ಸಮರ್ಪಕ ಪರ್ಯಾಯ ಸಾರಿಗೆ ವಿಧಾನವಾಗಿದ್ದು, ಅದರ ವಿಸ್ತರಣೆಗೆ ಹಾಗೂ ಅನುಷ್ಠಾನ ಹಂತದಲ್ಲಿರುವ ಮೆಟ್ರೋ ಎರಡನೇ ಹಂತದ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು.

ತ್ಯಾಜ್ಯ ವಿಲೇವಾರಿ ಬಹುದೊಡ್ಡ ಸಮಸ್ಯೆ
ಬೂದಿ ಮುಚ್ಚಿದ ಕೆಂಡದಂತಿರುವ ತ್ಯಾಜ್ಯ ವಿಲೇವಾರಿ ಸಮಸ್ಯೆಯ ಬಗ್ಗೆಯೂ ಸರ್ಕಾರ ಗಮನಹರಿಸಬೇಕಿದೆ. ಕಳೆದ ಏಳೆಂಟು ವರ್ಷಗಳಿಂದ ನಗರವಾಸಿಗಳನ್ನು ಬಾಧಿಸುತ್ತಿರುವ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಗಮನಹರಿಸಬೇಕಿದೆ.

ವಾಹನಗಳಷ್ಟೇ ಇರುವ ರಸ್ತೆ ಗುಂಡಿಗಳು
ಮಳೆಗಾಲ ಆರಂಭಕ್ಕೆ ಮುನ್ನವೇ ರಸ್ತೆಗಳಲ್ಲಿ ಗುಂಡಿಗಳು ಕಾಣಿಸಿಕೊಂಡಿದ್ದು, ಇವುಗಳನ್ನು ಮುಚ್ಚಬೇಕಿದೆ. ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿರುವ ವೈಟ್ ಟಾಂಪಿಂಗ್ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು ಮತ್ತು ರಸ್ತೆ ಅಗಲೀಕರಣ ಕಾಮಗಾರಿಗಳೂ ಸಹ ಚುರುಕು ನೀಡಬೇಕು.

ಬೆಳ್ಳಂದೂರು ಕೆರೆಗೆ ನೀಲನಕ್ಷೆ
ರಾಷ್ಟ್ರೀಯ ಹರಿಸು ನ್ಯಾಯಮಂಡಳಿ ಬೆಳ್ಳಂದೂರು ಕೆರೆ ವಿಚಾರದಲ್ಲಿ ರಾಜ್ಯ ಸರ್ಕಾರವನ್ನು ಹಲವು ಸಲ ತರಾಟೆಗೆ ತೆಗೆದುಕೊಂಡಿತ್ತು. ಆದರೂ ಸಹ ಸರ್ಕಾರ ಕೋರ್ಟ್ ಗೆ ಹೆದರಿ ಉನ್ನತ ಮಟ್ಟದ ಸಮಿತಿ ರಚನೆ ಮಾಡಿ ಕೆಲವು ಕ್ರಮಗಳನ್ನು ಕೈಗೊಂಡಿದೆಯಾದರೂ ಸಂರಕ್ಷಣೆಗಾಗಿ ಸಮಗ್ರ ನೀಲನಕ್ಷೆ ರೂಪಿಸಿಲ್ಲ. ಆದಷ್ಟು ಬೇಗ ಬೆಳ್ಳಂದೂರು ಸಮಸ್ಯೆ ಕುರಿತು ಗಮನಹರಿಸುವ ಅಗತ್ಯವಿದೆ.

ತೂಗುಯ್ಯಾಳೆಯಲ್ಲಿ ಅಕ್ರಮ ಸಕ್ರಮ
ಸುಪ್ರೀಂಕೋರ್ಟ್ ಅಕ್ರಮ-ಸಕ್ರಮ ಯೋಜನೆ ಜಾರಿಗೆ ನೀಡಿರುವ ತಡೆಯಾಜ್ಞೆ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕಿದೆ. 2017ರ ಜ.13ರಂದೇ ಸುಪ್ರೀಂಕೋರ್ಟ್, ಅಕ್ರಮ-ಸಕ್ರಮ ಯೋಜನೆಗೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಅದಾದ ನಂತರ ಅದೇ ವರ್ಷ ಮೇ ತಿಂಗಳಿನಲ್ಲಿ ಸರ್ಕಾರ ತಡೆ ತೆರವಿಗೆ ಮನವಿ ಸಲ್ಲಿಸಿತ್ತಾದರೂ ಅದನ್ನು ಸುಪ್ರೀಂಕೋರ್ಟ್ ಪುರಸ್ಕರಿಸಿಲ್ಲ. ಹಾಗಾಗಿ ಈ ಯೋಜನೆ ತೂಗುಯ್ಯಾಲೆಯಲ್ಲಿದೆ.

ಅಡಕತ್ತರಿಯಲ್ಲಿ ಸಿಲುಕಿರುವ ಬೆಂಗಳೂರು ಮಾಸ್ಟರ್ ಪ್ಲ್ಯಾನ್
ನ್ಯಾಯಾಲಯದ ಮಧ್ಯ ಪ್ವೇಶದಿಂದಾಗಿ ಬೆಂಗಳೂರು ಮಹಾನಗರ ಮಾಸ್ಟರ್ ಪ್ಲ್ಯಾನ್ 2031 ಅಡಗತ್ತರಿಯಲ್ಲಿ ಸಿಲುಕಿದಂತಾಗಿದೆ. ಹೊಸ ಸರ್ಕಾರ ಅಂತಿಮಗೊಳಿಸಬೇಕಿದೆ. ಸಾರ್ವಜನಿಕರು ಸಂಘ-ಸಂಸ್ಥೆಗಳಿಂದ ಸಲ್ಲಿಕೆಯಾಗಿರುವ 13 ಸಾವಿರತಕ್ಕೂ ಅಧಿಕ ಆಕ್ಷೇಪಣೆಗಳನ್ನು ಪರಿಶೀಲಿಸಿ ನಂತರ ಅಗತ್ಯ ತಿದ್ದುಪಡಿ ಮಾಡಿ ಪರಿಷ್ಕೃತ ಯೋಜನೆಯನನ್ಉ ಹೈಕೋರ್ಟ್ಗೆ ಸಲ್ಲಿಸಬೇಕು.

ಪ್ರವಾಹದ ತಡೆಗೆ ಮುನ್ನೆಚ್ಚರಿಕಾ ಕ್ರಮ
ಮಳೆಗಾಲ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಪ್ರವಾಹ ತಡೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಿದೆ. ಅನಧಿಕೃತ ಒತ್ತುವರಿ ಅದರಲ್ಲೂ ವಿಶೇಷವಾಗಿ ರಾಜಕಾಲುವೆ ಒತ್ತುವರಿ ತೆರವುಗೊಳಸಲು ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಬೇಕು. ಕೆರೆಗಳ ಸಂರಕ್ಷಣೆಗೂ ಗಮನವಹಿಸಬೇಕು











Click it and Unblock the Notifications