ಡೆಂಗ್ಯೂ: ಬೆಂಗಳೂರು ನಗರ ಜಿಲ್ಲೆಯ ಡಿಎಚ್ ಒ ರಮೇಶ್ ಬಾಬು ಸಂದರ್ಶನ
ಬೆಂಗಳೂರು, ಜುಲೈ 19: ಬೆಂಗಳೂರು ನಗರ ಜಿಲ್ಲೆಯಲ್ಲಿ ಡೆಂಗ್ಯೂ, ಚಿಕೂನ್ ಗುನ್ಯಾ ತಡೆಗೆ ಹೆಚ್ಚೆಚ್ಚು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಈ ಬಗ್ಗೆ ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ ಎಂದು ಬೆಂಗಳೂರು ನಗರ ಜಿಲ್ಲೆಯ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಅಧಿಕಾರಿಯಾದ ಡಾ. ರಮೇಶ್ ಬಾಬು ತಿಳಿಸಿದ್ದಾರೆ.
'ಒನ್ ಇಂಡಿಯಾ'ದೊಂದಿಗೆ ಮಾತನಾಡಿದ ಅವರು, ಈ ವರ್ಷ ಜನವರಿಯಿಂದಲೇ ಸಂಭಾವ್ಯ ಡೆಂಗ್ಯೂ, ಚಿಕೂನ್ ಗುನ್ಯಾ ಹಾಗೂ ಮುಂತಾದ ಸಾಂಕ್ರಾಮಿಕ ರೋಗಗಳ ಬಗ್ಗೆ ಜನರಲ್ಲಿ ಜಾಗೃತಿಯನ್ನು ರೂಪಿಸಲು ಪ್ರಯತ್ನಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ವರ್ಷ ಜುಲೈನಲ್ಲಿ 47 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ಹಿಂದಿನ ವರ್ಷ ಇದೇ ಹೊತ್ತಿಗೆ 60 ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದವು. ಜನವರಿಯಿಂದ ಜನರಲ್ಲಿ ಡೆಂಗ್ಯೂ ಬಗ್ಗೆ ಅರಿವು ಮೂಡಿಸಲು ಪ್ರಯತ್ನಿಸಿದ್ದು ಇದಕ್ಕೆ ಕಾರಣ ಎಂದು ಅವರು ತಿಳಿಸಿದ್ದಾರೆ.
ಜನವರಿಯಿಂದ 20 ಲಕ್ಷಕ್ಕೂ ಹೆಚ್ಚು ಸರ್ವೆ ಮಾಡಲಾಗಿದೆ. 23 ಲಕ್ಷ ಮನೆಗಳಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಸಂದರ್ಶನದಲ್ಲಿ ಅವರು ನೀಡಿದ ಮಾಹಿತಿಯ ಹೈಲೈಟ್ಸ್ ಇಲ್ಲಿ ನಿಮಗಾಗಿ.

ತೇವಾಂಶ ನಿರ್ಮೂಲನೆ ಮಾಡಿ
- ಸಾಮಾನ್ಯವಾಗಿ ರಾತ್ರಿ ಕಚ್ಚುವ ಸೊಳ್ಳೆಗಳಿಂದ ಡೆಂಗ್ಯೂ ಬಾರದು. ಹಗಲು ಕಚ್ಚುವ ಸೊಳ್ಳೆಗಳಿಂದ ಡೆಂಗ್ಯೂ ಬರುತ್ತದೆ. ಏಡಿಸ್ ಏಜಿಪ್ಟಿ ಎಂಬ ಹೆಣ್ಣು ಸೊಳ್ಳೆಗಳು ಹಗಲು ಹೊತ್ತಿನಲ್ಲೇ ಕಚ್ಚುತ್ತವೆ.
- ಅಂದಹಾಗೆ, ಈ ಏಡಿಸ್ ಸೊಳ್ಳೆಗಳು ಕೇವಲ ನಿಂತ ನೀರು ಅಥವಾ ಕೊಳಚೆ ನೀರಿನಲ್ಲಿ ಇರುತ್ತವೆ ಎಂಬುದು ಸುಳ್ಳು. ಇವು ತೇವಾಂಶ ಎಲ್ಲಿರುತ್ತದೆಯೋ ಅಲ್ಲೆಲ್ಲಾ ಜೀವಿಸುತ್ತವೆ.

ರಾಸಾಯನಿಕ ಸಂಪಡಿಸಲಾಗುತ್ತಿದೆ
- ಮನೆಯಲ್ಲಿ ಸಂಗ್ರಹಿಸಿಡುವ ನೀರನ್ನು ಸೂಕ್ತವಾಗಿ ಸಂರಕ್ಷಣೆ ಮಾಡಬೇಕು. ಮನೆಯ ಆಜುಬಾಜಿನಲ್ಲಿ ನೀರು ಚೆಲ್ಲಬಾರದು. ಸಂಗ್ರಹಿಸಿದ ನೀರನ್ನು ಕುಡಿಯಲು ಬಳಸುವುದಾದರೆ ಅದನ್ನು ಕುದಿಸಿ ಆರಿಸಿ ಕುಡಿಯಬೇಕು ಎಂಬಿತ್ಯಾದಿ ಮಾಹಿತಿಗಳನ್ನು ನೀಡುತ್ತಿದ್ದೇವೆ.
- ನಿಂತ ನೀರಿನ ಸೆಲೆಗಳಲ್ಲಿ ಅಬೆಟ್ ಎಂಬ ರಾಸಾಯನಿಕ ಸಿಂಪಡಿಸಿ ಸೊಳ್ಳೆಗಳನ್ನು ನಿರ್ಮೂಲನ ಮಾಡುವ ಬಗ್ಗೆ ಕ್ರಮ ಕೈಗೊಂಡಿದ್ದೇವೆ.

ಲಾರ್ವಾ ನಿರ್ಮೂಲನೆ ಬಗ್ಗೆ ಜಾಗೃತಿ
- ಇಲ್ಲೊಂದು ಸಮಸ್ಯೆಯಿದೆ. ಕೆಲವು ಪ್ರದೇಶಗಳಲ್ಲಿ ನೀರಿನ ಸಮಸ್ಯೆಯಿದೆ. ಹಾಗಾಗಿ, ಅವರು ನೀರು ಬಂದಾಗ ಅದನ್ನು ಹೆಚ್ಚಾಚ್ಚಾಗಿ ಸಂಗ್ರಹಿಸಿಡುತ್ತಾರೆ. ಇದೂ ಸಹ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತಿದೆ.
- ಇಂಥ ನೀರಿನಲ್ಲಿ ಏಡಿಸ್ ಸೊಳ್ಳೆಗಳ ಲಾರ್ವಾ (ಬಾಲ್ಯಾವಸ್ಥೆಯ ಸ್ವರೂಪ) ಹೇಗಿರುತ್ತದೆ, ಇಂಥ ನೀರನ್ನು ಹೇಗೆ ಸೋಸಿ ಆ ಲಾರ್ವಾಗಳನ್ನು ತೆಗೆದುಹಾಕಬಹುದು ಎಂಬಿತ್ಯಾದಿ ಮಾಹಿತಿಗಳನ್ನು ನಾವು ಜನರಿಗೆ ನೀಡಿದ್ದೇವೆ.

ಪ್ರಾಯೋಗಿಕವಾಗಿ ಸಾಬೀತು
- ಅಷ್ಟೇ ಅಲ್ಲ, ನೀರನ್ನು ಖಾಲಿ ಮಾಡಿದ ಪಾತ್ರೆಗಳನ್ನು ಮತ್ತೊಮ್ಮೆ ನೀರು ತುಂಬಿಸುವುದಕ್ಕೂ ಮುನ್ನ ಒಳ ಹಾಗೂ ಹೊರ ಭಾಗಗಳನ್ನು ಚೆನ್ನಾಗಿ ತೆಂಗಿನ ನಾರಿನಿಂದ ಉಜ್ಜಿ ತೊಳೆಯಬೇಕು ಮತ್ತು ಆ ಪಾತ್ರೆಗಳನ್ನು ಡ್ರೈ ಆಗಿಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತೋರಿಸಿಕೊಟ್ಟಿದ್ದೇವೆ.

ಯಾವುದೇ ಆತಂಕ ಬೇಡ
- ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಸೌಲಭ್ಯಗಳಿವೆ. ಆಸ್ಪತ್ರೆಗಳಲ್ಲಿ ಔಷಧ ಕೊರತೆಯಿದೆ, ಹಾಸಿಗೆಗಳ ಕೊರತೆಯಿದೆ, ರಕ್ತ ಸಿಗುತ್ತಿಲ್ಲ ಎಂಬಿತ್ಯಾದಿ ವದಂತಿಗಳನ್ನು ಜನರು ನಂಬಬಾರದು.
- ಉತ್ತಮ ಸೌಲಭ್ಯಗಳಿರುವುದರಿಂದ ಯಾರೇ ಆಗಲಿ ಸರ್ಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯಬಹುದು.
- ಡೆಂಗ್ಯೂ ಹಾಗೂ ಇತರೆ ಕಾಯಿಲೆಗಳನ್ನು ನಿಯಂತ್ರಿಸಲು ಡಿಸಿಯಿಂದ ಜಿಲ್ಲಾ ಪಂಚಾಯತ್ ವತಿಯಂದ ಕ್ರಮ ಕೈಗೊಳ್ಳಲಾಗಿದೆ.
- ಇದು ಕೇವಲ ಆರೋಗ್ಯ ಇಲಾಖೆಯಿಂದ ಆಗುವ ಕೆಲಸವಲ್ಲ. ಇತರ ಇಲಾಖೆಗಳು, ಸಾರ್ವಜನಿಕರು, ಮಾಧ್ಯಮಗಳು ಸಹಕರಿಸಿದರೆ ಡೆಂಗ್ಯೂ ನಿರ್ಮೂಲನೆ ವಹಿಸಬೇಕು.












Click it and Unblock the Notifications