Get Updates
Get notified of breaking news, exclusive insights, and must-see stories!

ಬೆಂಗಳೂರಿನಲ್ಲಿ 647 ಎಕರೆಯಲ್ಲಿ ಕೈಗಾರಿಕಾ ಪಾರ್ಕ್ ಸ್ಥಾಪಿಸಲು ಕೆಐಎಡಿಬಿ ಯೋಜನೆ

ಹಲವು ವರ್ಷಗಳಿಂದ ಬೆಂಗಳೂರಿನಿಂದ ದೂರವೇ ಉಳಿದಿದ್ದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ವಾಪಸ್ ಬಂದಿದೆ. ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿ ಪ್ರದೇಶದಲ್ಲಿರುವ ಸರ್ಜಾಪುರದ ಸುತ್ತಮುತ್ತ ಬೃಹತ್ ಕೈಗಾರಿಕಾ ಪಾರ್ಕ್ ಸ್ಥಾಪನೆಗೆ ನಿರ್ಧರಿಸಿದೆ.

ಡೆಕ್ಕನ್ ಹೆರಾಲ್ಡ್ ವರದಿ ಮಾಡಿರುವ ಪ್ರಕಾರ, ತಮಿಳುನಾಡಿಗೆ ಗಡಿಗೆ ಹೊಂದಿಕೊಂಡಂತಿರುವ 647 ಎಕರೆ ವಿಸ್ತೀರ್ಣವಾದ ಪ್ರದೇಶದಲ್ಲಿ ಕೈಗಾರಿಕಾ ಪಾರ್ಕ್ ತಲೆ ಎತ್ತಲಿದೆ. ಈಗಾಗಲೇ ಬೆಂಗಳೂರಿನ ಮೇಲೆ ಒತ್ತಡ ಹೆಚ್ಚಿದ್ದು, ಹೊಸ ಕೈಗಾರಿಕಾ ಸ್ಥಾಪನೆ ಬಗ್ಗೆ ವಿರೋಧ ಎದುರಾಗುವ ಸಾಧ್ಯತೆ ಇದೆ.

Bengaluru 647-Acre Industrial Park Planned by KIADB in Sarjapur

ಫೆಬ್ರವರಿ 20 ರಂದು ನಡೆದ ತನ್ನ ಕೊನೆಯ ಮಂಡಳಿಯ ಸಭೆಯಲ್ಲಿ ಅತ್ತಿಬೆಲೆ ಮತ್ತು ಸರ್ಜಾಪುರದ ನಡುವೆ ಇರುವ ಆರು ಗ್ರಾಮಗಳಲ್ಲಿ ಕೈಗಾರಿಕಾ ಪಾರ್ಕ್ ಸ್ಥಾಪಿಸುವ ಪ್ರಸ್ತಾವನೆಗೆ ಕೆಐಎಡಿಬಿ ಅನುಮೋದನೆ ನೀಡಿದೆ ಎಂದು ಡಿಹೆಚ್ ವರದಿಯಲ್ಲಿ ತಿಳಿಸಿದೆ. ಬೆಂಗಳೂರಿನಲ್ಲಿ ತಮ್ಮ ವ್ಯವಹಾರಗಳನ್ನು ಸ್ಥಾಪಿಸಲು ಕೈಗಾರಿಕೆಗಳಿಂದ ಹೆಚ್ಚಿನ ಬೇಡಿಕೆ ಬಂದ ಕಾರಣ ಈ ನಿರ್ಧಾರ ಮಾಡಲಾಗಿದೆ ಎಂದು ಹೇಳಲಾಗಿದೆ.

ಈ ಹಳ್ಳಿಗಳಲ್ಲಿ ಭೂಸ್ವಾಧೀನ

ಆನೇಕಲ್ ತಾಲೂಕಿನ ಸರ್ಜಾಪುರ ಹೋಬಳಿ ವ್ಯಾಪ್ತಿಯಲ್ಲಿ ಬರುವ ಬಿಕ್ಕನಹಳ್ಳಿ, ಎಸ್ ಮೇಡಹಳ್ಳಿ, ಅಡಿಗರ ಕಲ್ಲಹಳ್ಳಿ, ಸೊಳ್ಳೆಪುರ, ಮುತ್ತಾನಲ್ಲೂರು ಅಮಾನಿಕೆರೆ ಮತ್ತು ಹಂದೇನಹಳ್ಳಿ ಕೆರೆಗಳು ಈ ಕೈಗಾರಿಕಾ ಪಾರ್ಕ್ ಪ್ರದೇಶದಲ್ಲಿ ಬರಲಿವೆ. ಮಂಡಳಿಯ ಅನುಮೋದನೆಯ ಒಂದು ತಿಂಗಳ ನಂತರ, ಕೆಐಎಡಿಬಿ ಈ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಾಥಮಿಕ ಅಧಿಸೂಚನೆಯನ್ನು ಹೊರಡಿಸಿದೆ ಎಂದು ತಿಳಿದುಬಂದಿದೆ.

ಬೆಂಗಳೂರಿನಲ್ಲಿ ತಮ್ಮ ಕೈಗಾರಿಕೆಗಳನ್ನು ಸ್ಥಾಪಿಸಲು ಕೈಗಾರಿಕೋದ್ಯಮಿಗಳಿಂದ ಭಾರಿ ಬೇಡಿಕೆಯಿದೆ ಆದರೆ ಸಾಕಷ್ಟು ಭೂಮಿ ಲಭ್ಯವಿಲ್ಲ ಎಂದು ಕೆಐಎಡಿಬಿ ಸಭೆಯಲ್ಲಿ ಹೇಳಿದೆ. ಬೊಮ್ಮಸಂದ್ರ, ಜಿಗಣಿ, ದೊಮ್ಮಸಂದ್ರ ಸಂಪರ್ಕ ರಸ್ತೆ, ಅತ್ತಿಬೆಲೆ, ವೀರಸಂದ್ರ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿಯಂತಹ ಕೈಗಾರಿಕಾ ಪಾರ್ಕ್‌ಗಳು ಒಟ್ಟಾಗಿ 3,316 ಎಕರೆಗಳಲ್ಲಿ ಹರಡಿಕೊಂಡಿವೆ ಅಲ್ಲಿ ಸ್ಥಳಾವಕಾಶದ ಕೊರತೆಯಿದೆ ಎಂದು ಹೇಳಿದೆ.

ಮಂಡಳಿಯ ಸಭೆಯಲ್ಲಿ ಕೆಐಎಡಿಬಿ ವಿಶೇಷ ಭೂಸ್ವಾಧೀನ ಅಧಿಕಾರಿಯ ವರದಿಯಲ್ಲಿ ಕೈಗಾರಿಕಾ ಪಾರ್ಕ್ ಸ್ಥಾಪಿಸಲು ಗ್ರಾಮಗಳು ಅತ್ಯಂತ ಸೂಕ್ತವೆಂದು ಗುರುತಿಸಿದೆ, ಹೆಚ್ಚಿನ ಭೂಮಿ "ಕೃಷಿ" ಅಥವಾ "ಖಾಲಿ" ಎಂದು ಹೇಳಲಾಗಿದೆ. ಈ ಪ್ರದೇಶದಲ್ಲಿ ಹೆಚ್ಚಿನ ಅಭಿವೃದ್ಧಿ ಇಲ್ಲ ಎಂದು ವರದಿ ಹೇಳಿದೆ, ಈ ಜಾಗದಿಂದ ರಾಷ್ಟ್ರೀಯ ಹೆದ್ದಾರಿ ಸುಮಾರು 5 ಕಿಮೀ ದೂರದಲ್ಲಿದೆ.

ಫೆಡರೇಶನ್ ಆಫ್ ಕರ್ನಾಟಕ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಎಫ್‌ಕೆಸಿಸಿಐ) ಈ ಪ್ರಸ್ತಾವನೆಯನ್ನು ಸ್ವಾಗತಿಸಿದೆ. ಬಾಗಲೂರಿನಲ್ಲಿರುವ ಹಾರ್ಡ್‌ವೇರ್ ಪಾರ್ಕ್ ಬೆಂಗಳೂರಿನ ಕೆಐಎಡಿಬಿ ಅಭಿವೃದ್ಧಿಪಡಿಸಿದ ಕೊನೆಯ ಕೈಗಾರಿಕಾ ಪಟ್ಟಣವಾಗಿದೆ. ರಸ್ತೆಗಳು, ಗ್ರಿಡ್ ವಿದ್ಯುತ್, ನೀರು ಸೇರಿದಂತೆ ಎಲ್ಲಾ ಸೌಕರ್ಯಗಳು ಲಭ್ಯವಿದ್ದರೆ ಅಂತಹ ಹೆಚ್ಚಿನ ಕೈಗಾರಿಕಾ ಟೌನ್‌ಶಿಪ್‌ಗಳ ಅವಶ್ಯಕತೆಯಿದೆ ಎಂದು ಚೇಂಬರ್ ಅಧ್ಯಕ್ಷ ರಮೇಶ್ ಚಂದ್ರ ಲಾಹೋಟಿ ಹೇಳಿದರು.

2014ರ ಕಾಯಿದೆಯಂತೆ ರೈತರಿಗೆ ಮಾರುಕಟ್ಟೆ ದರಕ್ಕೆ ಸಮನಾದ ಪರಿಹಾರ ನೀಡಲಾಗುವುದು ಎಂದು ಕೆಐಎಡಿಬಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ. ಮಾರ್ಗದರ್ಶನ ಮೌಲ್ಯಕ್ಕಿಂತ ಪರಿಹಾರವು ಎರಡರಿಂದ ನಾಲ್ಕು ಪಟ್ಟು ಹೆಚ್ಚು ಇರುವುದರಿಂದ ಸಾಮಾನ್ಯವಾಗಿ ಭೂಮಿ ಕಳೆದುಕೊಳ್ಳುವವರಿಂದ ಯಾವುದೇ ಪ್ರತಿರೋಧವಿರುವುದಿಲ್ಲ ಎಂದು ಅವರು ಹೇಳಿದರು.

ನಗರದಲ್ಲಿ ಈಗಾಗಲೇ ನೀರಿಗಾಗಿ ಹಾಹಾಕಾರ ಇದೆ. ಬೆಂಗಳೂರು ಟ್ರಾಫಿಕ್ ಸಮಸ್ಯೆ ಈಗಾಗಲೇ ನಗರವಾಸಿಗಳನ್ನು ಹೈರಾಣಾಗಿಸಿದೆ. ಇರುವ ಕೈಗಾರಿಕಾ ಪ್ರದೇಶಗಳಿಗೆ ಮೊದಲು ಸರಿಯಾದ ಮೂಲಭೂತ ವ್ಯವಸ್ಥೆ ಕಲ್ಪಿಸಿದರೆ ಸಾಕು, ನಗರದ ಮೇಲೆ ಮತ್ತಷ್ಟು ಒತ್ತಡ ಹಾಕುವುದೇಕೆ ಎನ್ನುವ ಅಭಿಪ್ರಾಯಗಳು ಕೂಡ ಕೇಳಿಬಂದಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+